ಬೆಂಗಳೂರು,ಫೆ.16-ಸ್ಕೂಟರ್ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಗುವಿನ ಮೇಲೆ ಹರಿದ ಪರಿಣಾಮ 2 ವರ್ಷದ ಮಗು ಮೃತಪಟ್ಟಿರುವ ಘಟನೆ ಕೆಆರ್ಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಯಲಹಂಕದ ವೆಂಕಟಾಲ ನಿವಾಸಿ ಹರೀಶ್ ಎಂಬುವವರ ಪುತ್ರ ತ್ರಿಶಾನ್ (2) ಮೃತಪಟ್ಟ ಮಗು.
ಯಲಹಂಕದಿಂದ ಮಗುವನ್ನು ಕರೆದುಕೊಂಡು ತಾಯಿ ಸಂಬಂಧಿಕರ ಮನೆಗೆ ನಿನ್ನೆ ಕೆಆರ್ಪುರಕ್ಕೆ ಬಂದಿದ್ದರು. ಶಿವರಾತ್ರಿ ನಿಮಿತ್ತ ಸಂಬಂಧಿಕರ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದರು.ವಿಜಯಲಕ್ಷ್ಮೀ ಎಂಬುವವರು ಅವರ ಮಗ ಬದ್ರಿ ಜೊತೆ ತ್ರಿಶಾನ್ನನ್ನು ಕರೆದುಕೊಂಡು ಸ್ಕೂಟರ್ನಲ್ಲಿ ಸಂಜೆ 6. ಗಂಟೆ ಸುಮಾರಿನಲ್ಲಿ ಮಾರಗೊಂಡನಹಳ್ಳಿ ಶಿವನ ದೇವಸ್ಥಾನಕ್ಕೆ ಹೋಗುತ್ತಿದ್ದರು.
ಕಿತ್ತಗನೂರು ಮುಖ್ಯ ರಸ್ತೆಯ ಕಾಶಪ್ಪ ಸರ್ಕಲ್ನ ಕ್ಯಾರಿಪುಡ್ ಸೂಪರ್ ಮಾರ್ಕೇಟ್ ಹತ್ತಿರ ಸಂಚಾರ ದಟ್ಟಣೆ ಇದ್ದುದ್ದರಿಂದ ಸ್ಕೂಟರ್ ನಿಲ್ಲಿಸಿದ್ದಾರೆ. ಅದೇ ಸಮಯಕ್ಕೆ ಹಿಂದಿನಿಂದ ಅತೀ ವೇಗವಾಗಿ ಬರುತ್ತಿದ್ದ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ನಿಂದ ಕೆಳಗೆ ಬಿದ್ದ ಮಗು ಮೇಲೆಯೇ ಕಾರು ಹರಿದ ಪರಿಣಾಮ ಗಂಭೀರ ಗಾಯಗೊಂಡಿದೆ. ತಕ್ಷಣ ಸಾರ್ವಜನಿಕರ ನೆರವಿನಿಂದ ಮಗುವನ್ನು ಭಟ್ಟರಹಳ್ಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಕೆಆರ್ಪುರ ಸಂಚಾರಿ ಠಾಣೆ ಪೊಲೀಸರು ಕಾರಿನ ಚಾಲಕ ಕೃಷ್ಣ ಮೋಹನ್ ಮೆನನ್ (43) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
