ಬೆಂಗಳೂರು, ಫೆ.25- ಆರು ತಿಂಗಳ ಮಗುವಿನ ಬೆರಳು ಕಟ್ ಮಾಡಿದ ಗಂಭೀರ ನಿರ್ಲಕ್ಷ್ಯದ ಆರೋಪ ಇಂದಿರಾನಗರ ದಲ್ಲಿರುವ ಚಿನಯ್ ಮಿಷನ್ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ. ಶೀತ ಹಾಗೂ ಅನಾರೋಗ್ಯ ಕಾರಣ ದಿಂದ ಫೆ. 19ರಂದು ದಾಖಲಾಗಿದ್ದ 6 ತಿಂಗಳ ಮಗು ಬಾಲಕುಮಾರನ ಕಿರುಬೆರಳನ್ನು ಇಲ್ಲಿನ ವೈದ್ಯರು ಕಟ್ ಮಾಡಿದ್ದಾರೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.
ಅನಾರೋಗ್ಯ ಹಿನ್ನೆಲೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ನಿನ್ನೆ ಡಿಸ್ಚಾರ್ಜ್ ಮಾಡುವಾಗ ಮಗುವಿನ ಕೈ ಬೆರಳಿಗೆ ಬ್ಯಾಂಡೇಜ್ ಹಾಕಲಾಗಿತ್ತು.ಮನೆಗೆ ತೆರಳಿ ಡ್ರೆಸಿಂಗ್ ತೆಗೆಯುವಾಗ ಕಿರುಬೆರಳು ಕಟ್ ಆಗಿರುವುದು ಪೋಷಕರ ಗಮನಕ್ಕೆ ಬಂದಿದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.
ಈ ಬಗ್ಗೆ ಪೋಷಕರುಅಸ್ಪತ್ರೆಯ ಸಿಬ್ಬಂದಿ ವಿಚಾರಿಸಿದರೆ ಏನೂ ಆಗಲ್ಲ, ಮನೆಗೆ ಹೋಗಿ ಎಂದು ಹೇಳಿ ಕಳುಹಿಸಿದ್ದರು ಎಂದು ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ.ನರ್ಸ್ ನಿರ್ಲಕ್ಷ್ಯದಿಂದ ಬೆರಳು ಕಟ್ ಆಗಿದೆ ಎಂಬ ದೂರಿನ ಮೇರೆಗೆ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಾಗಿದೆ. ಪೋಷಕರು ವೈದ್ಯರು ಹಾಗೂ ನರ್ಸ್ಗಳ ನಿರ್ಲಕ್ಷ್ಯದಿಂದ ಮಗುವಿನ ಕಿರುಬೆರಳು ಕಟ್ ಆಗಿದೆ ಎಂದು ಆರೋಪಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವೈದ್ಯಕೀಯ ದಾಖಲೆಗಳು, ಡ್ರೆಸಿಂಗ್ ಪ್ರಕ್ರಿಯೆ ಹಾಗೂ ಕರ್ತವ್ಯದಲ್ಲಿದ್ದ ಸಿಬ್ಬಂದಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.ಈ ಘಟನೆ ಪೋಷಕರಲ್ಲಿ ಆತಂಕ ಹುಟ್ಟಿಸಿದ್ದು, ಆಸ್ಪತ್ರೆಯ ಸ್ಪಷ್ಟನೆ ಹಾಗೂ ತನಿಖೆಯ ವರದಿ ನಂತರವೇ ನಿಜಾಂಶ ಹೊರಬರುವ ಸಾಧ್ಯತೆ ಇದೆ.
