ಬೆಂಗಳೂರು,ಮಾ.3- ನಗರದಲ್ಲಿ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಅವರ ಪತ್ನಿ ಸಜೀವ ದಹನವಾಗಿರುವ ದಾರುಣ ಘಟನೆ ಸುಬ್ರಹಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.
ಗಾಯತ್ರಿನಗರದ ನಿವಾಸಿ, ಗುತ್ತಿಗೆದಾರ ಅವರ ಪತ್ನಿ ಸವಿತಾ (53) ಮೃತಪಟ್ಟವರು.
ಗಾಯತ್ರಿನಗರದಲ್ಲಿ ರಮೇಶ್ ಬಾಬು ಅವರಿಗೆ ಸೇರಿದ ನಾಲ್ಕು ಅಂತಸ್ತಿನ ಮನೆ ಇದ್ದು ಮೊದಲ ಹಾಗೂ ಎರಡನೇ ಮಹಡಿಯನ್ನು ಬಾಡಿಗೆಗೆ ಕೊಟ್ಟಿದ್ದಾರೆ.
ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ರಮೇಶ್ಬಾಬು, ಅವರ ಪತ್ನಿ ಸವಿತಾ, ತಾಯಿ ಸಣ್ಣಮ ಹಾಗೂ ಮಗ ವಾಸವಾಗಿದ್ದರು.ರಾತ್ರಿ 9 ಗಂಟೆ ಸುಮಾರಿನಲ್ಲಿ ಮೂರನೇ ಮಹಡಿಯ ಅಡಿಗೆ ಮನೆಯಲ್ಲಿ ಸವಿತಾ ಅವರು ಅಡಿಗೆ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ.
ಆ ಸಂದರ್ಭದಲ್ಲಿ ಕುಟುಂಬ ಸದಸ್ಯರೆಲ್ಲರೂ ಮನೆಯಲ್ಲಿದ್ದರು. ನೋಡ ನೋಡುತ್ತಿದ್ದಂತೆ ಬೆಂಕಿಯ ತೀವ್ರತೆ ಹೆಚ್ಚಾಗಿ ಮನೆ ಪೂರ್ತಿ ಆವರಿಸಿಕೊಂಡಿದ್ದು ಸಹಾಯಕ್ಕಾಗಿ ಕಿರುಚಾಡಿದ್ದಾರೆ. ನೆರೆಹೊರೆಯವರು ಗಮನಿಸಿ ತಕ್ಷಣ ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿ ವಾಹನದೊಂದಿಗೆ ಸ್ಥಳಕ್ಕೆ ಆಗಮಿಸಿ ಮೂವರನ್ನು ರಕ್ಷಿಸಿದರಾದರೂ ಅಡಿಗೆ ಮನೆಯಲ್ಲಿದ್ದ ಸವಿತಾ ಅವರು ಸಜೀವ ದಹನವಾಗಿದ್ದಾರೆ.ಸುಟ್ಟಗಾಯಗೊಂಡಿದ್ದ ಮೂವರನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ ಹಾಗೂ ಸುಬ್ರಹಣ್ಯ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
