Monday, April 20, 2026
Homeಆರೋಗ್ಯ / ಜೀವನಶೈಲಿರಸ್ತೆ ಅಪಘಾತದಲ್ಲಿ ಗಾಯಗೊಂಡು ನಿಂತು ಹೋಗಿದ್ದ ರಕ್ತ ಪರಿಚಲನೆಗೆ ಮರು ಚಾಲನೆ: ಪ್ರಾಣಾಪಾಯದಿಂದ ಬಾಲಕ ಪಾರು

ರಸ್ತೆ ಅಪಘಾತದಲ್ಲಿ ಗಾಯಗೊಂಡು ನಿಂತು ಹೋಗಿದ್ದ ರಕ್ತ ಪರಿಚಲನೆಗೆ ಮರು ಚಾಲನೆ: ಪ್ರಾಣಾಪಾಯದಿಂದ ಬಾಲಕ ಪಾರು

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಾಲಿನ ಭಾಗಕ್ಕೆ ರಕ್ತ ಚಲನೆ ಸ್ಥಗಿತಗೊಂಡಿದ್ದ 9 ವರ್ಷದ ಬಾಲಕನಿಗೆ ಸಕಾಲಿಕ ಶಸ್ತ್ರ ಚಿಕಿತ್ಸೆ ಮೂಲಕ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಸ್ಪರ್ಶ್‌ ಆಸ್ಪತ್ರೆ ಯಲಹಂಕದ ಬಹುವಿಭಾಗೀಯ ಶಸ್ತ್ರ ಚಿಕಿತ್ಸಕರ ತಂಡ ಯಶಸ್ವಿಯಾಗಿದೆ.

ಬಾಲಕನನ್ನು ಆಸ್ಪತ್ರೆಗೆ ಕರೆ ತಂದಾಗ ತೀವ್ರವಾದ ಗಾಯಗಳಿಂದ ಆತ ನರಳುತ್ತಿದ್ದು ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು ಬಲ ಕಾಲಿನ ಭಾಗಕ್ಕೆ ರಕ್ತ ಪರಿಚಲನೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಬಲಗಾಲು ಮಂಡಿವರೆಗೂ ಬಹುತೇಕ ಛಿದ್ರವಾಗಿದ್ದು ಪ್ರಾಣಕ್ಕೇ ಕುತ್ತು ತರುವ ಸಂಭವವಿತ್ತು. ಎಕ್ಸ್‌ರೇ ಮಾಡಿದಾಗ ತೊಡೆಯ ಮೂಳೆ ಘಾಸಿಗೊಂಡಿರುವುದು ಕಂಡು ಬಂದಿತ್ತು. ಆಂಜಿಯೋಗ್ರಾಮ್‌ ಮಾಡಿದಾಗ ಮೊಣಕಾಲಿನ ಹಿಂಭಾಗದ ಪ್ರಮುಖ ರಕ್ತನಾಳದಲ್ಲಿ ತಡೆ ಉಂಟಾಗಿರುವುದು ಪ್ರಾಣಕ್ಕೆ ಅಪಾಯ ತರುವ ಸಂಭವನೀಯತೆಯನ್ನು ಅರಿತು ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.

ಸಂಪೂರ್ಣ ಘಾಸಿಗೊಂಡಿದ್ದ ಕಾಲಿನ ಭಾಗವನ್ನು ರಕ್ಷಿಸುವುದು ಅಸಾಧ್ಯವೆಂಬುದನ್ನು ಅರಿತಿದ್ದರೂ ಪ್ರಾಣಾಪಾಯದಿಂದ ಪಾರು ಮಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಸರ್ಜನ್‌ ಡಾ.ಚೇತನ್‌ ಸತೀಶ್‌, ಆರ್ಥೋಪೆಡಿಕ್‌ ವಿಭಾಗದ ಹಿರಿಯ ಸಮಾಲೋಚಕ ಡಾ.ವೇಣುಗೋಪಾಲ್‌ ಮೊದಲಾದವರನ್ನೊಳಗೊಂಡ ಬಹು ವಿಭಾಗೀಯ ತಂಡವು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಬಾಲಕನ ಪ್ರಾಣ ರಕ್ಷಿಸಿತು.

“ಬಾಲಕ ಆಸ್ಪತ್ರೆಗೆ ಕರೆ ತಂದಾಗ ಆತನ ಜೀವಕ್ಕೆ ಅಪಾಯವಾಗುವಷ್ಟು ಪ್ರಮಾಣದಲ್ಲಿ ಕಾಲಿನ ಭಾಗವು ಘಾಸಿಗೊಂಡಿತ್ತು. ತೊಡೆಯ ಮೂಳೆ ಜೊತೆಗೆ ಕಾಲಿಗೆ ಗಂಭೀರವಾದ ಗಾಯಗಳಾಗಿದ್ದು ಬಾಲಕನ ಪ್ರಾಣ ರಕ್ಷಿಸುವುದು ಮತ್ತು ಅಪಘಾತದಿಂದಾದ ತೀವ್ರ ಆಘಾತದಿಂದ ಆತನನ್ನು ಹೊರ ತರುವುದು ಮೊದಲ ಆದ್ಯತೆಯಾಗಿತ್ತು. ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ತೀವ್ರವಾದ ಎಚ್ಚರಿಕೆ ಮತ್ತು ತಕ್ಷಣದ ನಿರ್ಧಾರ ಅತ್ಯಗತ್ಯವಾಗಿದ್ದು ಕಾಲಿನ ಭಾಗವನ್ನು ಉಳಿಸುವುದು ಅಸಾಧ್ಯವಾದರೂ ಬಾಲಕನ ವಯಸ್ಸಿನ ಹಿನ್ನೆಲೆಯಲ್ಲಿ ಎಷ್ಟು ಭಾಗವನ್ನು ಉಳಿಸಬಹುದೋ ಅಷ್ಟೂ ಭಾಗವನ್ನು ಉಳಿಸಿ ಆತನ ನಡಿಗೆ., ಚಲನಶೀಲತೆ ಮತ್ತು ದೀರ್ಘಾವಧಿಯ ಪುನಶ್ಚೈತನ್ಯ ಸಾಮರ್ಥ್ಯವನ್ನು ಗಮನದಲ್ಲಿರಿಸಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು” ಎಂದು ಡಾ.ವೇಣುಗೋಪಾಲ್‌ ತಿಳಿಸಿದರು.

ಶಸ್ತ್ರ ಚಿಕಿತ್ಸಕ ವೈದ್ಯರ ತಂಡ ಎಷ್ಟು ಸಾಧ್ಯವೋ ಅಷ್ಟೂ ಭಾಗ ಕಾಲನ್ನು ಸಂರಕ್ಷಿಸಿದ್ದು ಭವಿಷ್ಯದಲ್ಲಿ ಬಾಲಕನ ನಡಿಗೆಗೆ ಸಾಧ್ಯವಾಗುವಷ್ಟು ಪ್ರಮಾಣದಲ್ಲಿ ಆತ ಚೇತರಿಸಿಕೊಳ್ಳುವ ಅವಕಾಶವಿದೆ. ಮೊಣಕಾಲಿನ ಕೆಳ ಭಾಗದಲ್ಲಿ ಚರ್ಮ ಕೂಡ ಸಂಪೂಣ ಕಿತ್ತು ಬಂದಿದ್ದು ಆ ಭಾಗಕ್ಕೆ ಕಾಲಿನ ಹಿಂಭಾಗದಿಂದ ಚರ್ಮವನ್ನು ತೆಗೆದು ಘಾಸಿಗೊಂಡಿದ್ದ ಚರ್ಮಕ್ಕೆ ಮರು ಜೋಡಣೆ ಮಾಡಿ ಕಾಲನ್ನು ರಕ್ಷಿಸಲಾಗಿದೆ.

ಸ್ಪರ್ಶ್‌ ಆಸ್ಪತ್ರೆ ಯಲಹಂಕದ ಪ್ಲಾಸ್ಟಿಕ್‌ ಸರ್ಜನ್‌ ಡಾ.ಚೇತನ್‌ “ಇಂತಹ ಗಂಭೀರ ಪರಿಸ್ಥಿತಿಗಳಲ್ಲಿ ಮರು ಚೇತರಿಕೆ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಗಾಯ ವಾಸಿಯಾಗುವ ಸಮಯವು ಕೂಡ ನಿರ್ಣಾಯಕವಾಗಿರುವುದರಿಂದ ಅತ್ಯಂತ ಎಚ್ಚರಿಕೆಯಿಂದ ಶಸ್ತ್ರ ಚಿಕಿತ್ಸೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಬಾಲಕನ ಪ್ರಾಣಾಪಾಯದಿಂದ ಪಾರು ಮಾಡುವುದರ ಜೊತೆಗೆ ಭವಿಷ್ಯದ ಸಾಮಾನ್ಯ ಚಲನವಲನಕ್ಕೆ ಅನುವಾಗುವಂತೆ ಶಸ್ತ್ರಚಿಕಿತ್ಸೆ ನಡೆಸಲಾಯಿತು” ಎಂದರು.

ಬಾಲಕ ಶೀಘ್ರವಾಗಿ ಗುಣಮುಖನಾಗುತ್ತಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದು ಆತ ಸಾಮಾನ್ಯವಾಗಿ ನಡೆಯುವಂತಾಗುವ ವಿಶ್ವಾಸವನ್ನು ಸ್ಪರ್ಶ್‌ ಆಸ್ಪತ್ರೆ ವೈದ್ಯರು ವ್ಯಕ್ತಪಡಿಸಿದ್ದಾರೆ. ಬಾಲಕನ ಪೋಷಕರ ಆರ್ಥಿಕ ಅಸಹಾಯಕತೆಯ ನಡುವೆಯೂ ಸ್ಪರ್ಶ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಮಾನವೀಯತೆ ಮೆರೆದಿದೆ.

RELATED ARTICLES

Latest News