ಬೆಂಗಳೂರು, ಏ.28- ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಜಾರ್ಖಂಡ್ ಯುವತಿಯ ಸಾವು ನಿಗೂಢವಾಗಿದ್ದು, ಇದು ಕೊಲೆಯೋ ಅಥವಾ ಆತಹತ್ಯೆಯೋ ಎಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ. ಆಡುಗೋಡಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಾರ್ಖಂಡ್ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಪೂಜಾ (30) ಖಾಸಗಿ ಕಂಪನಿಯೊಂದರಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದರು.
ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಪೂಜಾ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಆ ಮೊಬೈಲ್ ಅನ್ನು ವಶಕ್ಕೆ ಪಡೆದು ಸಿಡಿಆರ್ ಪರಿಶೀಲನೆ ನಡೆಸುತ್ತಿದ್ದಾರೆ.ಈಕೆ ಕಳೆದ ಮೂರು ವರ್ಷಗಳಿಂದ ಈ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಈ ಮನೆಗೆ ಆಗಾಗ ಯುವಕನೊಬ್ಬ ಬೈಕ್ನಲ್ಲಿ ಬಂದು ಹೋಗುತ್ತಿದ್ದ ಎಂಬುವುದು ಮನೆ ಮಾಲೀಕರ ಮಾಹಿತಿಯಿಂದ ತಿಳಿದು ಬಂದಿದೆ.
ಆಗಾಗ ರಸ್ತೆಯಲ್ಲಿ ಯಾರನ್ನೋ ಬೈದುಕೊಂಡು ಹೋಗುತ್ತಿದ್ದಳಂತೆ. ಈಕೆಯ ವರ್ತನೆಯನ್ನು ಗಮನಿಸಿದರೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎಂಬ ಶಂಕೆ ವ್ಯಕ್ತವಾಗಿದೆ.ಈಕೆ ವಾಸವಿದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಅನುಮಾನಗೊಂಡ ಮನೆ ಮಾಲೀಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರು ಬಂದು ನೋಡಿದಾಗ ಮನೆ ಒಳಗಿನಿಂದ ಚಿಲಕ ಹಾಕಿರುವುದು ಕಂಡು ಬಂದಿದ್ದು, ಬಾಗಿಲು ಒಡೆದು ಒಳಗೆ ಹೋದಾಗಲೇ ಬೆತ್ತಲೆಯಲ್ಲಿ ಕೊಳೆತ ರೀತಿ ಪೂಜಾ ಶವ ಕಂಡು ಬಂದಿದೆ.
ಪೊಲೀಸರು ಮನೆಯೆಲ್ಲಾ ಪರಿಶೀಲಿಸಿದಾಗ ಸಿನಿಮಾಗಳ ರೀತಿ ಗೋಡೆಯ ಮೇಲೆಲ್ಲಾ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಚಿತ್ರಗಳನ್ನು ಬಿಡಿಸಿ ಅಂಟಿಸಿರುವುದು ಕಂಡು ಬಂದಿದೆ. ಒಂದು ಕ್ಷಣ ಈ ಮನೆ ಭೂತದ ಬಂಗಲೆಯಂತೆ ಪೊಲೀಸರಿಗೆ ಬಾಸವಾಗಿದೆ. ಇದನ್ನೆಲ್ಲಾ ಗಮನಿಸಿದರೆ, ಈ ಯುವತಿ ಮಾನಸಿಕ ಖಿನ್ನತೆಗೆ ಒಳಗಾಗಿ, ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಕೊಳೆತ ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಜಾರ್ಖಂಡ್ನಿಂದ ಈಕೆಯ ಪೋಷಕರು ಬಂದ ನಂತರವಷ್ಟೇ ಮರಣೋತ್ತರ ಪರೀಕ್ಷೆ ನಡೆಯಲಿದೆ. ಒಟ್ಟಾರೆ ಈ ಪ್ರಕರಣ ಆಶ್ಚರ್ಯ ಹಾಗೂ ಅನುಮಾನ ಮೂಡಿಸುವಂತಿದ್ದು, ಪೊಲೀಸರು ತನಿಖೆ ಮುಂದುವರೆಸಿ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
