ಬೆಂಗಳೂರು,ಜು.4-ಮುಂದೆ ಹೋಗುತ್ತಿದ್ದ ವಜ್ರ ಸಾರಿಗೆ ಬಸ್ಗೆ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ, ನಿರ್ವಾಹಕ ಸೇರಿದಂತೆ 12 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕೆಆರ್ಸರ್ಕಲ್ನಲ್ಲಿ ನಡೆದಿದೆ.ಡಿಕ್ಕಿಯ ರಭಸಕ್ಕೆ ಎಲೆಕ್ಟ್ರಿಕ್ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಜ್ರ ಬಸ್ ಹಿಂಭಾಗ ಹಾನಿಯಾಗಿದೆ.
ಇಂದು ಬೆಳಗ್ಗೆ 8.40 ರ ಸುಮಾರಿನಲ್ಲಿ ವಜ್ರ ಬಸ್ ಕೆಆರ್ಸರ್ಕಲ್ ಬಳಿ ಹೋಗುತ್ತಿದ್ದಾಗ ಸಿಗ್ನಲ್ ಬಿದ್ದ ಕಾರಣ ಬಸ್ ನಿಲುಗಡೆಯಾಗುತ್ತಿದ್ದಂತೆ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದಿದೆ.
ಪರಿಣಾಮ ಎಲೆಕ್ಟ್ರಿಕ್ ಬಸ್ ಚಾಲಕ ಹಾಗೂ ಬಸ್ನಲ್ಲಿದ್ದ ಯುವತಿಯೊಬ್ಬರಿಗೆ ಗಂಭೀರ ಪೆಟ್ಟಾಗಿದೆ. ಈ ಇಬ್ಬರನ್ನು ಮಾರ್ಥಾಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಸ್ ನಿರ್ವಾಹಕ ಹಾಗೂ ಉಳಿದ ಸಣ್ಣಪುಟ್ಟ ಗಾಯಗೊಂಡ 9 ಪ್ರಯಾಣಿಕರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ವಜ್ರ ಬಸ್ ಹಿಂಭಾಗಕ್ಕೆ ಎಲೆಕ್ಟ್ರಿಕ್ ಬಸ್ನ ಮುಂಭಾಗ ಸಿಕ್ಕಿಹಾಕಿಕೊಂಡಿದೆ.ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಪ್ರಯಾಣಿಕರನ್ನು ಬಸ್ನಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಅಪಘಾತದಿಂದಾಗಿ ಈ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಚಾರಿ ಪೊಲೀಸರು ಸ್ಥಳದಲ್ಲಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳಕ್ಕೆ ಕ್ರೇನ್ ತರಿಸಿಕೊಂಡು ಎರಡು ಬಸ್ಗಳನ್ನು ಬೇರ್ಪಡಿಸಿ ರಸ್ತೆಯಿಂದ ತೆರವುಗೊಳಿಸಲಾಯಿತು.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್ ಸಂಚಾರಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಯಾಣಿಕರು ಸುರಕ್ಷಿತ
ನಗರದ ಕೆ.ಆರ್.ವೃತ್ತದಲ್ಲಿ ಅಪಘಾತಕ್ಕೀಡಾದ ಒಎಚ್ಎಂ ಮೊಬಿಲಿಟಿ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಗಂಭೀರ ಗಾಯಗಳಾಗಿಲ್ಲ ಎಂದು ಬಿಎಂಟಿಸಿ ತಿಳಿಸಿದೆ. ಟಾಟಾ ಸಾರ್ಟ್ ಮೊಬಿಲಿಟಿ ಎಲೆಕ್ಟ್ರಿಕ್ ಬಸ್ನಲ್ಲಿದ್ದ ಐವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆ ಬಸ್ನ ಚಾಲಕರಿಗೆ ಗಾಯವಾಗಿದೆ. ಅವರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆ ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಟಾಟಾ ಸಾರ್ಟ್ ಮೊಬಿಲಿಟಿ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.
ಬಿಎಂಟಿಸಿ ಈ ಘಟನೆ ಕುರಿತಂತೆ ನಿಗಾವಹಿಸಿದ್ದು, ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ನೆರವು ಹಾಗೂ ಸಹಕಾರವನ್ನುಒದಗಿಸುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾಋಎ.
ಇಂದು ಬೆಳಿಗ್ಗೆ ಸುಮಾರು 8.30ಕ್ಕೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಅತ್ತಿಬೆಲೆಗೆ ಹೋಗುತ್ತಿದ್ದ ಒಎಚ್ಎಂ ಮೊಬಾಲಿಟಿ ಬಿಎಂಟಿಸಿ ಬಸ್ ಮತ್ತು ಎಲೆಕ್ಟ್ರಿಕ್ ಬಸ್ ನಡುವೆ ಕೆ.ಆರ್. ಸರ್ಕಲ್ ಸಮೀಪ ಅಪಘಾತ ಸಂಭವಿಸಿದೆ.
