ಬೆಂಗಳೂರು,ಫೆ.18-ಸ್ನೇಹಿತರೊಂದಿಗೆ ತಮ ಹುಟ್ಟುಹಬ್ಬ ಆಚರಿಸಿಕೊಂಡು ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಚಿಕ್ಕಬಾಣವಾರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಉತ್ತರ, ತೋಟದ ಗುಡ್ಡದ ಹಳ್ಳಿ ನಿವಾಸಿ ಪವನ್ಕುಮಾರ್ (20) ಮೃತಪಟ್ಟ ವಿದ್ಯಾರ್ಥಿ.
ಪವನ್ಕುಮಾರ್ ತನ್ನ ವಿದ್ಯಾಭ್ಯಾಸದ ಜೊತೆಗೆ ಪಾರ್ಟ್ಟೈಮ್ ಕೆಲಸ ಮಾಡುತ್ತಿದ್ದರು. ನಿನ್ನೆ ಈತನ ಹುಟ್ಟುಹಬ್ಬ. ಹಾಗಾಗಿ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಮನೆಗೆ ಹೋಗುತ್ತಿದ್ದರು.
ಸಂಜೆ 5.30 ರ ಸುಮಾರಿನಲ್ಲಿ ಪವನ್ಕುಮಾರ್ ಬೈಕ್ನಲ್ಲಿ ಕಾಕೋಳು ಡೈರಿ ಫಾರ್ಮ್ ಕಡೆಯಿಂದ ಐಐಹೆಚ್ಆರ್ ಕಡೆಗೆ ತೆರಳುತ್ತಿದ್ದಾಗ ಅದೇ ಸಮಯದಲ್ಲಿ ಐಐಹೆಚ್ಆರ್ ಕಡೆಯಿಂದ ಡೈರಿ ಫಾರ್ಮ್ ಕಡೆಗೆ ಅತೀ ವೇಗವಾಗಿ ಬರುತ್ತಿದ್ದ ಗೂಡ್್ಸ ವಾಹನ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಪವನ್ಕುಮಾರ್ ತಲೆ,ಕೈ,ಕಾಲುಗಳಿಗೆ ಗಂಭೀರ ಪೆಟ್ಟಾಗಿ ಪ್ರಜ್ಞೆ ಕಳೆದುಕೊಂಡಿದ್ದಾನೆ.ತಕ್ಷಣ ಆಂಬ್ಯುಲೆನ್ಸ್ ನಲ್ಲಿ ಆತನನ್ನು ಸಮೀಪದ ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಗೂಡ್ಸ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.ಅಪಘಾತದ ಸುದ್ದಿ ತಿಳಿದು ಚಿಕ್ಕಬಾಣವಾರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಗೂಡ್ಸ್ ವಾಹನ ಚಾಲಕನ ಅತಿ ವೇಗ ಅಜಾಗರೂಕತೆ ಚಾಲನೆಯಿಂದ ಅಪಘಾತ ಸಂಭವಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗೂಡ್ಸ್ ವಾಹನ ಚಾಲಕನ ಪತ್ತೆಗೆ ಶೋಧ ಕೈಗೊಂಡಿದ್ದಾರೆ.
