Friday, May 3, 2024
Homeರಾಜ್ಯದೇವೇಗೌಡರು, ಎಸ್.ಎಂ.ಕೃಷ್ಣ ಹಾಗೂ ಬೊಮ್ಮಾಯಿ ಭೇಟಿ ಮಾಡಿದ ವಿಜಯೇಂದ್ರ

ದೇವೇಗೌಡರು, ಎಸ್.ಎಂ.ಕೃಷ್ಣ ಹಾಗೂ ಬೊಮ್ಮಾಯಿ ಭೇಟಿ ಮಾಡಿದ ವಿಜಯೇಂದ್ರ

ಬೆಂಗಳೂರು,ನ.13-ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಹಲವು ಪ್ರಮುಖ ನಾಯಕರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಬಸವರಾಜ ಬೊಮ್ಮಾಯಿ ಅವರುಗಳನ್ನು ಭೇಟಿ ಮಾಡಿದರು.

ಮೊದಲು ಬೆಳಗ್ಗೆ ಆರ್.ಟಿ.ನಗರದಲ್ಲಿರುವ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ತೆರಳಿದ ವಿಜಯೇಂದ್ರ ಆರೋಗ್ಯದ ವಿಚಾರಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ತಮ್ಮ ನಿವಾಸಕ್ಕೆ ಬಂದ ಅವರನ್ನು ಬೊಮ್ಮಾಯಿ ಆತ್ಮೀಯವಾಗಿ ಬರಮಾಡಿಕೊಂಡು ಕೆಲಕಾಲ ಉಭಯ ಕುಶಲೋಪರಿ ವಿಚಾರಿಸಿದರು. ಇತ್ತೀಚೆಗೆ ಬೊಮ್ಮಾಯಿ ಅವರು ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದರ ಜೊತೆಗೆ ಅಧ್ಯಕ್ಷರಾದ ಬಿವೈವಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪಕ್ಷದ ಸಾರಥ್ಯ ವಹಿಸಿರುವ ತಮಗೆ ಎಲ್ಲ ರೀತಿಯಿಂದಲೂ ಮಾರ್ಗದರ್ಶನ, ಸಹಕಾರ ನೀಡವುದಾಗಿ ಬೊಮ್ಮಾಯಿ ಆಶ್ವಾಸನೆ ನೀಡಿದ್ದಾರೆ. ಆರ್‍ಟಿನಗರದಿಂದ ನೇರವಾಗಿ ವಿಜಯೇಂದ್ರ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.

ಮೊದಲ ಬಾರಿಗೆ ತಮ್ಮ ನಿವಾಸಕ್ಕೆ ಆಗಮಿಸಿದ ವಿಜಯೇಂದ್ರ ಅವರನ್ನು ಹಾಸನ ಲೋಕಸಭಾ ಸದಸ್ಯರಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ತಮ್ಮಣ್ಣ ಮತ್ತಿತರರು ಬರಮಾಡಿಕೊಂಡರು.

ದೀಪಾವಳಿ ಪೂಜೆ ವೇಳೆ ಮೀನುಗಾರರ ದೋಣಿಗಳು ಬೆಂಕಿಗಾಹುತಿ

ವಿಜಯೇಂದ್ರ ಅವರಿಗೆ ದೇವೇಗೌಡರು ಶಾಲು ಹೊದಿಸಿ ಗಂಧದ ಹಾರ ತೊಡಿಸಿ ಶುಭ ಕೋರಿದರು. ನಂತರ ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿಕೊಟ್ಟ ವಿಜಯೇಂದ್ರ, ಅವರಿಂದಲೂ ಆಶೀರ್ವಾದ ಪಡೆದುಕೊಂಡರು.

ಪಕ್ಷದ ಸಂಘಟನೆ ವಿಷಯದಲ್ಲಿ ತಮ್ಮನ್ನು ಯಾವಾಗಲಾದರೂ ಭೇಟಿ ಮಾಡಿದರೂ ಅಗತ್ಯ ಸಲಹೆ, ಮಾರ್ಗದರ್ಶನ ಮಾಡುವುದಾಗಿ ಎಸ್.ಎಂ.ಕೃಷ್ಣ ಅವರು ಆಶ್ವಾಸನೆ ನೀಡಿದ್ದಾರೆ. ಬಳಿಕ ಸಂಜೆ ವಿಜಯೇಂದ್ರ ಬಿಜೆಪಿ ಹಿರಿಯ ನಾಯಕ ಆರ್.ಅಶೋಕ್ ಅವರನ್ನು ಭೇಟಿ ಮಾಡಲಿದ್ದಾರೆ.

RELATED ARTICLES

Latest News