Saturday, May 4, 2024
Homeರಾಷ್ಟ್ರೀಯಬರ ನಿರ್ವಹಣೆಗೆ ಅನುದಾನ ಕೊಡದ ಮೋದಿ, ಅಮಿತ್ ಶಾಗೆ ಕರ್ನಾಟಕದಲ್ಲಿ ಮತ ಕೇಳುವ ನೈತಿಕತೆ ಇಲ್ಲ...

ಬರ ನಿರ್ವಹಣೆಗೆ ಅನುದಾನ ಕೊಡದ ಮೋದಿ, ಅಮಿತ್ ಶಾಗೆ ಕರ್ನಾಟಕದಲ್ಲಿ ಮತ ಕೇಳುವ ನೈತಿಕತೆ ಇಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಏ.23- ರಾಜ್ಯದ ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡದೆ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಮತ ಕೇಳುವ ನೈತಿಕತೆ ಹೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದ ಬಳಿಯ ಮಹಾತ್ಮಗಾಂೀಧಿಜಿ ಪ್ರತಿಮೆ ಎದುರು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‍ನಿಂದ ನಡೆಸಲಾದ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದ ಅವರು, ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜ್ಯವನ್ನು ಮತ್ತು ರೈತರನ್ನು ದ್ವೇಷಿಸುತ್ತಾರೆ. ರಾಜ್ಯಕ್ಕೆ ನ್ಯಾಯ ಕೊಡಿ ಎಂದರೆ ಸ್ಪಂದಿಸಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಿಯಾಗಿ ಕೇಂದ್ರ ಸರ್ಕಾರ ರಾಜ್ಯವನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 100 ವರ್ಷಗಳ ಬಳಿಕ ಭೀಕರ ಬರಪರಿಸ್ಥಿತಿ ಇದೆ. ರಾಜ್ಯದಲ್ಲಿ 223 ತಾಲೂಕುಗಳು ಬರಪೀಡಿತವಾಗಿವೆ. ಸೆಪ್ಟೆಂಬರ್ 22 ರಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ 18,172 ಕೋಟಿ ರೂ.ಗಳ ಅನುದಾನ ಕೋರಿ ಎನ್‍ಡಿಆರ್‍ಎಫ್‍ನಡಿ ಮನವಿ ಸಲ್ಲಿಸಲಾಗಿತ್ತು.

ಸಚಿವರಾದ ಕೃಷ್ಣಭೈರೇಗೌಡ, ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ ದೆಹಲಿಗೆ ಹೋಗಿ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಬಂದಿದ್ದರು. ಖುದ್ದು ತಾವು ದೆಹಲಿಗೆ ತೆರಳಿ ಪ್ರಧಾನಮಂತ್ರಿ ಹಾಗೂ ಗೃಹಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಅಮಿತ್ ಶಾ ಡಿ.23 ರಂದು ಸಭೆ ನಡೆಸಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ಕಿಡಿಕಾರಿದರು.

ಅದೇ ಅಮಿತ್ ಶಾ ರಾಜ್ಯಕ್ಕೆ ಬಂದು ರಾಜ್ಯಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸುವುದು ವಿಳಂಬವಾಗಿತ್ತು ಎಂದು ಟೀಕೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ರಾಜ್ಯಸರ್ಕಾರಕ್ಕೆ ಯಾವುದೇ ಬಾಕಿ ನೀಡಬೇಕಿಲ್ಲ ಎಂದು ಹೇಳಿದರು. ಚುನಾವಣೆ ಘೋಷಣೆಯಾದ ಬಳಿಕ ಆಯೋಗ ಅನುಮತಿ ಕೊಡುವುದಿಲ್ಲ ಎಂದು ಸಬೂಬು ಮುಂದಿಟ್ಟರು.

ಕೇಂದ್ರ ಸಚಿವರು ಹೇಳಿದ ಅಷ್ಟೂ ಹೇಳಿಕೆಗಳು ಸುಳ್ಳು ಎಂದು ಸಾಬೀತಾಗಿವೆ. ರಾಜ್ಯಸರ್ಕಾರ ಅನಿವಾರ್ಯವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಯಿತು. ವಿಚಾರಣೆ ಹಂತದಲ್ಲಿ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್‍ರವರು ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್‍ರವರ ಹೇಳಿಕೆಗನುಸಾರ ಸಮರ್ಥನೆ ಮಾಡಿಕೊಳ್ಳಲಿಲ್ಲ. ಅಲ್ಲಿಗೆ ಹಣ ಬಿಡುಗಡೆ ಮಾಡದೇ ಕೇಂದ್ರ ಸಚಿವರು ನೀಡಿದ ಸಬೂಬುಗಳು ಸುಳ್ಳು ಎಂಬುದು ಸಾಬೀತಾಗಿದೆ ಎಂದರು.

ಅನಿವಾರ್ಯವಾಗಿ ಈಗ ಕೇಂದ್ರ ಸರ್ಕಾರ ಪರಿಹಾರ ಪಾವತಿಸಬೇಕಾದ ಸ್ಥಿತಿಗೆ ಸಿಲುಕಿದೆ. ಬರ ನಿರ್ವಹಣೆಗೆ ಹಣ ನೀಡಿದರೆ ಅದನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಾರೆ ಎಂದು ಕೇಂದ್ರ ಸಚಿವರು ಅಪಪ್ರಚಾರ ಮಾಡುತ್ತಾರೆ. ಗ್ಯಾರಂಟಿ ಯೋಜನೆಗಳಿಗೆ ಈಗಾಗಲೇ 36 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇವೆ. 2024-25 ನೇ ಸಾಲಿಗೆ 52 ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಿದ್ದೇವೆ. ಎನ್‍ಡಿಆರ್‍ಎಫ್ ಹಣವನ್ನು ಸಂಪೂರ್ಣವಾಗಿ ಬರನಿರ್ವಹಣೆಗೆ ಖರ್ಚು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

48 ಸಾವಿರ ಹೆಕ್ಟೇರ್‍ನಲ್ಲಿ ಬೆಳೆ ನಷ್ಟವಾಗಿದೆ, ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯಸರ್ಕಾರ ತನ್ನ ಬೊಕ್ಕಸದಿಂದ 600 ಕೋಟಿ ರೂ.ಗಳಿಗೂ ಹೆಚ್ಚು ಹಣ ಖರ್ಚು ಮಾಡಿ 32 ಲಕ್ಷ ರೈತರಿಗೆ ಮೊದಲ ಕಂತಾಗಿ 2 ಸಾವಿರ ರೂ.ಗಳನ್ನು ಪಾವತಿಸಿದೆ. ನಾವು ಮನವಿ ಸಲ್ಲಿಸಿ 7 ತಿಂಗಳಾದರೂ ಕೇಂದ್ರ ಈವರೆಗೂ ಒಂದು ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮೊದಲು ಹಣ ಬಿಡುಗಡೆ ಮಾಡಿ, ಆನಂತರ ಪ್ರಧಾನಿ ಮತ್ತು ಕೇಂದ್ರ ಗೃಹಸಚಿವರು ರಾಜ್ಯಕ್ಕೆ ಬಂದು ಮತ ಕೇಳಲಿ. ಬರ, ನೆರೆ ಸಂದರ್ಭದಲ್ಲಿ ಇವರಿಗೆ ಕರ್ನಾಟಕ ನೆನಪಾಗುವುದಿಲ್ಲ. ಚುನಾವಣೆಯಲ್ಲಿ ಮಾತ್ರ ನೆನಪಾಗುತ್ತದೆ. ತೆರಿಗೆ ಹಂಚಿಕೆ, ಭದ್ರಾ ಮೇಲ್ದಂಡೆ, ಬೆಂಗಳೂರು ಕೆರೆಗಳ ಅಭಿವೃದ್ಧಿ, ಹೊರವರ್ತುಲ ರಸ್ತೆ, ಹಣಕಾಸು ಆಯೋಗದ ಮಧ್ಯಂತರ ಅವ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿ ದ್ವೇಷ ಸಾಸುತ್ತಿದ್ದಾರೆ ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Latest News