Thursday, May 2, 2024
Homeರಾಜ್ಯಆರಂಭದಲ್ಲೇ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಸಿದ್ಧತೆ : ಗುಂಡೂರಾವ್

ಆರಂಭದಲ್ಲೇ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಸಿದ್ಧತೆ : ಗುಂಡೂರಾವ್

ಬೆಂಗಳೂರು, ಡಿ.19- ಕೋವಿಡ್ ಸಾಂಕ್ರಾಮಿಕ ರೋಗದ ಬೆಳವಣಿಗೆಯನ್ನು ಪ್ರಾಥಮಿಕ ಹಂತದಲ್ಲೇ ನಿಯಂತ್ರಿಸಲು ಪೂರಕವಾಗುವಂತೆ ಅಗತ್ಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ತಪಾಸಣೆಗೆ ಅಗತ್ಯವಾದ ಸಲಕರಣೆಗಳನ್ನು ಜಿಲ್ಲಾ ಕೇಂದ್ರಗಳಲ್ಲೇ ಖರೀದಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ರೂಪಾಂತರ ಜೆಎನ್-1 ಉಪತಳಿ ರಾಜ್ಯದಲ್ಲಿ ಪತ್ತೆಯಾಗಿರುವುದು ಖಚಿತವಾಗಿಲ್ಲ. ಅದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು.


ಅಮೆರಿಕ, ಸಿಂಗಾಪುರ ಸೇರಿದಂತೆ ವಿವಿಧ ದೇಶಗಳಲ್ಲಿ ಹಾಗೂ ಭಾರತದ ಹಲವು ರಾಜ್ಯದಲ್ಲಿ ಜೆಎನ್-1 ಸೋಂಕು ಕಂಡುಬಂದಿದೆ. ಅದರಿಂದ ಹೆಚ್ಚಿನ ಅಪಾಯ ಆಗಿರುವ ವರದಿ ಇಲ್ಲ. ಹಾಗಾಗಿ ಆತಂಕಗೊಳ್ಳುವ ಅಗತ್ಯವಿಲ್ಲ. ನಮ್ಮಲ್ಲಿ ಕಂಡುಬಂದ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗಿದೆ ಎಂದರು.

ಸದ್ಯದ ಮಾಹಿತಿ ಪ್ರಕಾರ ಸೋಂಕು ಹೆಚ್ಚು ಹರಡಿದೆ ಎಂದು ಹೇಳಲಾಗುವುದಿಲ್ಲ. ಆದ್ಯತೆ ಮೇರೆಗೆ ಪರೀಕ್ಷೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ನಿರ್ಧರಿಸಲಾಗಿದೆ. ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗುತ್ತಿದೆ. ಈ ಹಿಂದೆ ಖರೀದಿಸಿದ್ದ ಆರ್‍ಟಿಪಿಸಿಆರ್ ಹಾಗೂ ಇತರ ಕಿಟ್‍ಗಳ ಅವಧಿ ಮೀರಿವೆ. ಪರೀಕ್ಷಾ ಸಲಕರಣೆಗಳನ್ನು ಹೊಸದಾಗಿಯೇ ಸಂಗ್ರಹಿಸಬೇಕು. ಟೆಂಡರ್ ಕರೆದು ರಾಜ್ಯಮಟ್ಟದಿಂದಲೇ ಪೂರೈಸಬೇಕಾದರೆ ಸಮಯಾವಕಾಶ ಹಿಡಿಯುತ್ತದೆ. ಹೀಗಾಗಿ ಜಿಲ್ಲಾಮಟ್ಟದಲ್ಲೇ ಕೋವಿಡ್ ಪರೀಕ್ಷೆಗೆ ಅಗತ್ಯವಾದ ಸಲಕರಣೆಗಳನ್ನು ಖರೀದಿಸಲು ಸೂಚಿಸಲಾಗಿದೆ.

ವ್ಯಾಪಕವಾದ ಪರೀಕ್ಷೆಗಳನ್ನು ನಡೆಸಿದಾಗ ಮಾತ್ರ ಸೋಂಕು ಯಾವ ಮಟ್ಟಕ್ಕೆ ಹರಡಿದೆ ಎಂಬುದು ನಮಗೆ ತಿಳಿಯಲು ಸಾಧ್ಯ ಎಂದು ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ಜನಸಂದಣಿ ಸೇರುವುದು ಹಾಗೂ ಇತರ ಸಮಾವೇಶಗಳ ಮೇಲೆ ನಿರ್ಬಂಧ ಹೇರುವ ಪರಿಸ್ಥಿತಿಯಿಲ್ಲ. ಸೋಂಕಿನ ಬೆಳವಣಿಗೆಯ ಮೇಲೆ ನಿಗಾ ಇರಿಸಲಾಗಿದೆ. ಕೋವಿಡ್‍ನಿಂದಾಗಿ ಈವರೆಗೂ ಯಾವುದೇ ಸಾವು ಸಂಭವಿಸಿಲ್ಲ. ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿದ್ದು, ಮಾರಣಾಂತಿಕ ಪರಿಸ್ಥಿತಿಯಲ್ಲಿದ್ದಾಗ ಕೋವಿಡ್ ಸೋಂಕು ತಗುಲಿರಬಹುದು. ಆದರೆ ಕೋವಿಡ್‍ನಿಂದಾಗಿಯೇ ಸಾವನ್ನಪ್ಪಿದ್ದಾರೆ ಎಂಬ ಸ್ಪಷ್ಟತೆ ಇಲ್ಲ ಎಂದರು.

ಸಂಸತ್‍ನ ಕಲಾಪಕ್ಕೆ ಅಡ್ಡಿ : ಇಂದು 50 ಮಂದಿ ಸಂಸದರ ಅಮಾನತು

ತಾಂತ್ರಿಕ ಸಲಹಾ ಸಮಿತಿ ಕಳೆದ ಭಾನುವಾರವೇ ಸಭೆ ನಡೆಸಿ ಶಿಫಾರಸ್ಸುಗಳನ್ನು ಮಾಡಿದೆ. ಅದನ್ನು ಆಧರಿಸಿ ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಲಿದ್ದಾರೆ. ಬಳಿಕ ಅಗತ್ಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ ಎಂದರು.ನಾಳೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಸಭೆ ನಡೆಯಲಿದೆ. ಕೋವಿಡ್ ಅಂತರರಾಷ್ಟ್ರೀಯ ಸಮಸ್ಯೆಯಾಗಿರುವುದರಿಂದ ರಾಜ್ಯ ಸರ್ಕಾರವೊಂದೇ ಏಕಮುಖ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.

60 ವರ್ಷ ಮೇಲ್ಪಟ್ಟವರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಕೆಮ್ಮು, ಜ್ವರದಂತಹ ರೋಗಲಕ್ಷಣಗಳಿರುವವರು ಮಾಸ್ಕ್ ಧರಿಸುವುದು ಸೂಕ್ತವಾಗಿದೆ. ಸಂತ್ರಸ್ತರ ಸ್ವಯಂ ರಕ್ಷಣೆ ಹಾಗೂ ಇತರರ ಸುರಕ್ಷತೆಗಾಗಿ ಕಡ್ಡಾಯ ಮಾಸ್ಕ್ ಬಳಕೆ ಒಳ್ಳೆಯದು ಎಂದರು. ಒಂದು ವೇಳೆ ರಾಜ್ಯದಲ್ಲಿ ಜೆಎನ್-1 ಸೋಂಕು ಪತ್ತೆಯಾದರೂ ಕೂಡ ಆತಂಕಪಡುವ ಅಗತ್ಯವಿಲ್ಲ. ರಾಜ್ಯಸರ್ಕಾರ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡಿದೆ. ಮೂಲಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.

ಅಘೋಷಿತ ತುರ್ತು ಪರಿಸ್ಥಿತಿ :
ದೇಶದಲ್ಲಿಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಂಸತ್ ಮೇಲಿನ ದಾಳಿಯಲ್ಲಿನ ಲೋಪಗಳ ಬಗ್ಗೆ ಪ್ರಶ್ನೆ ಮಾಡಿದವರನ್ನು ಅಮಾನತುಗೊಳಿಸಲಾಗುತ್ತಿದೆ. ಪಾಸ್ ನೀಡಿ ಘಟನೆಗೆ ಕಾರಣವಾದ ಸಂಸದ ಪ್ರತಾಪ್ ಸಿಂಹ ವಿರುದ್ಧ ಯಾವುದೇ ಕ್ರಮ ಇಲ್ಲ. ಯಾವುದೇ ಚರ್ಚೆಯಿಲ್ಲದೆ ಮಸೂದೆಯನ್ನು ಅಂಗೀಕಾರಗೊಳಿಸಿದೆ. ಪ್ರತಿಬಾರಿ ತುರ್ತು ಪರಿಸ್ಥಿತಿಯನ್ನು ಪ್ರಶ್ನಿಸುವ ಬಿಜೆಪಿಯನ್ನು ದೇಶದಲ್ಲಿ ಅರಾಜಕತೆ ನಿರ್ಮಿಸಿದ್ದಾರೆ. ಬುದ್ಧಿಜೀವಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಕೇಂದ್ರ ಸರ್ಕಾರದ ಲೋಪಗಳ ವಿರುದ್ಧ ಮಾತನಾಡಲು ಎದುರುವಂತಹ ವಾತಾವರಣ ಇದೆ.

ತೆಲಂಗಾಣದ BRS ನಾಯಕರಿಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಚುನಾವಣಾ ಆಯೋಗ, ಇಡಿ, ಐಟಿ, ಸಿಟಿಐ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳು ದುರುಪಯೋಗಗೊಳ್ಳುತ್ತಿವೆ, ಸಂಸತ್ ಮೇಲೆ ಗೌರವ ಇಲ್ಲದಂತಾಗಿದೆ, ಜನಪ್ರತಿನಿಗಳಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಕಿಡಿಕಾರಿದರು. ಜೆಡಿಎಸ್‍ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸೇರಿದ ಮೇಲೆ ಬಲ ಹೆಚ್ಚಿಸಿಕೊಂಡು ಮಾತನಾಡುತ್ತಿದ್ದಾರೆ. ಆದರೆ ಚುನಾವಣೆಯಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.

RELATED ARTICLES

Latest News