Sunday, May 19, 2024
Homeರಾಷ್ಟ್ರೀಯಚುನಾವಣಾ ಆಯೋಗದಿಂದ ಆಂಧ್ರ ಡಿಜಿಪಿ ಎತ್ತಂಗಡಿ

ಚುನಾವಣಾ ಆಯೋಗದಿಂದ ಆಂಧ್ರ ಡಿಜಿಪಿ ಎತ್ತಂಗಡಿ

ಅಮರಾವತಿ,ಮೇ6- ಆಂಧ್ರಪ್ರದೇಶದ ವಿಧಾನಸಭಾ, ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಡಿಜಿಪಿ ಕೆ.ವಿ.ರಾಜೇಂದ್ರನಾಥ ರೆಡ್ಡಿ ಅವರನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿದೆ. ಮುಂದಿನ ಶ್ರೀಣಿಯ ಅಧಿಕಾರಿಗೆ ತಕ್ಷಣವೇ ಅಧಿಕಾರ ಹಸ್ತಾಂತರಿಸು ವಂತೆಯೂ ಸೂಚಿಸಲಾಗಿದೆ.

2024ರ ಲೋಕಸಭೆ ಚುನಾವಣೆಯೊಂದಿಗೆ ಆಂಧ್ರಪ್ರದೇಶ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಡಿಜಿಪಿ ಮತ್ತು ಇತರ ಹಲವು ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ದೂರಿನ ಮೇರೆಗೆ ಚುನಾವಣಾ ಆಯೋಗ ಈ ಕ್ರಮಗಳನ್ನು ಕೈಗೊಂಡಿದೆ.

ಮುಂದಿನ ಡಿಜಿಪಿ ಆಯ್ಕೆಗಾಗಿ ಸೋಮವಾರ ಬೆಳಗ್ಗೆ 11 ಗಂಟೆಯೊಳಗೆ ಮೂವರು ಡಿಜಿಪಿ ಶ್ರೀಣಿಯ ಅಧಿ ಕಾರಿಗಳ ಪಟ್ಟಿಯನ್ನು ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ರಾಜೇಂದ್ರನಾಥ ರೆಡ್ಡಿ ಅವರಿಗೆ ಯಾವುದೇ ಚುನಾವಣಾ ಕರ್ತವ್ಯ ನೀಡದಂತೆಯೂ ನಿರ್ದೇಶನ ನೀಡಲಾಗಿದೆ.

ಎರಡೂ ಚುನಾವಣೆಗಳಿಗೆ ವೈಎಸ್‌ಆರ್‌ಪಿ ಮತ್ತು ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿಕೂಟದ ನಡುವೆ ಪ್ರಬಲ ಹೋರಾಟ ನಡೆಯುತ್ತಿದೆ. ಈ ಸಮಯದಲ್ಲಿ ಡಿಜಿಪಿ ರಾಜೇಂದ್ರನಾಥ ರೆಡ್ಡಿ ಅವರ ವರ್ಗಾವಣೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ರಾಜೇಂದ್ರನಾಥ ರೆಡ್ಡಿ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ವೈಎಸ್‌ಆರ್‌ಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ವಿಪಕ್ಷಗಳಿಂದ ಮೊದಲಿನಿಂದಲೂ ಟೀಕೆಗಳು ವ್ಯಕ್ತವಾಗಿದ್ದವು.

ರಾಜೇಂದ್ರನಾಥ ರೆಡ್ಡಿಯವರ ಅಧಿಕಾರಾವಧಿಯಲ್ಲಿ ಪ್ರತಿಪಕ್ಷ ನಾಯಕರನ್ನು ಅಕ್ರಮವಾಗಿ ಬಂಧಿಸಲು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬ ಆರೋಪವನ್ನೂ ಪಕ್ಷಗಳ ನಾಯಕರು ಮಾಡಿದ್ದರು. ಆಡಳಿತಾರೂಢ ವೈಎಸ್‌ಆರ್‌ಪಿ ನಾಯಕರ ದೌರ್ಜನ್ಯದ ವಿರುದ್ಧ ನೀಡಲಾದ ನಿಜವಾದ ದೂರುಗಳನ್ನೂ ನಿರ್ಲಕ್ಷಿಸಲಾಗಿದೆ ಎಂದು ಟಿಡಿಪಿ-ಬಿಜೆಪಿ-ಜನಸೇನಾ ನಾಯಕರು ಆರೋಪಿಸಿದ್ದರು.

ಆಂಧ್ರಪ್ರದೇಶದ 175 ಸದಸ್ಯ ಬಲದ ವಿಧಾನಸಭಾ ಮತ್ತು 25 ಲೋಕಸಭಾ ಸ್ಥಾನಗಳಿಗೆ ಮೇ 13ರಂದು ಏಕಕಾಲದಲ್ಲಿ ಚುನಾವಣೆ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಹೊರಬರಲಿದೆ.

RELATED ARTICLES

Latest News