ನಿನ್ನೆಯಷ್ಟೇ ಸಿನಿಮಾ ರಿಲೀಸ್ ಆಗಿದೆ. ಫ್ರೂಟ್ ಸಲಾಡ್ ಅಂತ ಯಾಕೆ ಹೇಳ್ತಾ ಇದ್ದೀವಿ ಅಂದ್ರೆ ಒಂದು ಫ್ರೂಟ್ ಬೌಲ್ ನಲ್ಲಿ ಎಲ್ಲಾ ಥರದ ಹಣ್ಣುಗಳನ್ನು ಮಿಕ್ಸ್ ಮಾಡಿರ್ತಾರೆ ಅಲ್ವಾ. ಅದೇ ಥರ ಈ ಸಿನಿಮಾ ಕೂಡ ಎಲ್ಲದನ್ನು ನೋಡುಗರಿಗೆ ನೀಡುತ್ತದೆ. ಇತ್ತೀಚಿಗೆ ಗಂಡ ಹೆಂಡತಿ ಆಲ್ಮೋಸ್ಟ್ ಫ್ರೆಂಡ್ಸ್ ಥರ ಇರ್ತಾರೆ. ಲೈಫ್ ನ ಲೀಡ್ ಮಾಡುವ ರೀತಿಯೇ ಬೇರೆ. ಈ ಮೊದಲೆಲ್ಲಾ ಸಂಪ್ರದಾಯಸ್ಥ ಕುಟುಂಬದಲ್ಲಿ ಸಂಸಾರ ಹೇಗೆಲ್ಲ ನಡೀತಾ ಇತ್ತು ಗೊತ್ತಾ..? ಸರಳ ಸುಬ್ಬರಾವ್ ಸಿನಿಮಾ ನೋಡಿದ್ರೆ ಅದಕ್ಕೆ ಉತ್ತರ ಸಿಗುತ್ತೆ.
ಸುಬ್ಬರಾವ್ ಒಬ್ಬ ಪ್ರೊಫೆಸರ್. ಸರಳ ಮೇಲೆ ಲವ್ವಾಗಿ ಇಬ್ಬರು ಮದುವೆ ಆಗ್ತಾರೆ. ಮದುವೆಯಾದ ಹೊಸತರಲ್ಲಿ ಹೆಂಡತಿಯೇ ಎಲ್ಲಾ ಅಲ್ವಾ ಅದೇ ರೀತಿಯೇ ಸಂಸಾರ ನಡೀತಾ ಹೋಗುತ್ತೆ. ಸುಬ್ಬುಗೆ ಕಾಲೇಜಿಗಿಂತ ಮನೆಯಲ್ಲಿ ಕಳೆಯುವ ಸಮಯವೇ ಹೆಚ್ಚಾಗಿರುತ್ತೆ. ಅದರಲ್ಲೂ ಮನೆಗೆ ಬಂದಾಗೆಲ್ಲಾ ಹೆಂಡತಿಯನ್ನ ಮುದ್ದು ಮಾಡೋದೇ ಜಾಸ್ತಿ. ಸುಖ ಸಂಸಾರಕ್ಕೆ ಅಂತ ಮುದ್ದಾಟ ಎಲ್ಲಾ ಬೇಕೆ ಬೇಕು ಬಿಡಿ. ಅದನ್ನೇ ಸಿನಿಮಾದಲ್ಲೂ ತೋರಿಸಿದ್ದಾರೆ. ಅದಕ್ಕೂ ಮೀರಿದ್ದು ಒಂದಷ್ಟು ಗಟ್ಟಿ ವಿಚಾರಗಳನ್ನ ಈ ಸಿನಿಮಾದಲ್ಲಿ ತೋರಿಸುತ್ತಾ ಹೋಗಿದ್ದಾರೆ.
ಗಂಡನಾದವನು ಹೆಂಡತಿಯನ್ನ ಹೇಗೆಲ್ಲಾ ಕಾಳಜಿ ಮಾಡಬೇಕು..? ಅದರಲ್ಲೂ ಗರ್ಭಿಣಿ ಆದಾಗ ಆತನ ಜವಾಬ್ದಾರಿ ಎಷ್ಟಿರುತ್ತೆ. ಹೆಣ್ಣು ಹೊಟ್ಟೆಯಲ್ಲಿಯೇ ಗರ್ಭ ಧರಿಸಿದ್ದರು ಗಂಡು ಮೈಂಡ್ ನಲ್ಲಿ ಗರ್ಭ ಧರಿಸುತ್ತಾನೆ ಎಂಬ ಮಾತು ಎಷ್ಟು ಅರ್ಥ ಗರ್ಭೀತ ಅಲ್ವಾ. ಇನ್ನು ಗರ್ಭೀಣಿ ಅಂದ್ರೆ ಬಯಕೆಗಳು ಜಾಸ್ತಿ. ಯಾವುದೇ ಸಮಸ್ಯೆ ಆಗಬಾರದು ಅಂದ್ರೆ ಎಲ್ಲಾ ಬಯಕೆಗಳನ್ನು ಈಡೇರಿಸಬೇಕಾಗುತ್ತದೆ. ಆದರೆ ಅದರ ಜೊತೆಗೆ ಕೆಲವೊಂದು ಪಥ್ಯಗಳನ್ನು ಮಾಡುವುದರಿಂದ ಮಕ್ಕಳ ಬೆಳವಣಿಗೆ, ಬಣ್ಣ, ಮೈಕಟ್ಟಿಗೂ ಸಹಾಯವಾಗಲಿದೆ ಎಂಬುದನ್ನ ಸಿನಿಮಾದಲ್ಲಿ ತಿಳಿಸಿಕೊಟ್ಟಿದ್ದಾರೆ.
ಈಗಿನ ಕಾಲದಲ್ಲಿ ಎಷ್ಟೋ ದಂಪತಿಗಳು ಮಕ್ಕಳನ್ನೇ ಮಾಡಿಕೊಳ್ಳುವುದಿಲ್ಲ. ನಾನು – ನೀನು ಇಬ್ಬರೇ ಸಾಕು. ಚೆಂದವಾಗಿ ಬದುಕು ನಿರ್ವಹಿಸೋಣಾ ಅಂತಾರೆ. ಆದರೆ ನನಗೆ ನೀನು ನಿನಗೆ ನಾನು ಎಂಬ ದಂಪತಿಯ ನಡುವೆಯೂ ಮಕ್ಕಳಾಗದೇ ಸುಮಾರು ವರ್ಷಗಳು ಕಳೆದಾಗ ಎಷ್ಟು ನೋವಿರುತ್ತೆ, ಎಷ್ಟೋ ವರ್ಷಗಳ ಬಳಿಕ ಗರ್ಭೀಣಿ ಅಂತ ಗೊತ್ತಾದಾಗ ಎಷ್ಟು ಖುಷಿ ಇರುತ್ತೆ ಅನ್ನೋದನ್ನ ರಂಗಾಯಣ ರಘು ಹಾಗೂ ವೀಣಾ ಸುಂದರ್ ಅವರ ಮೂಲಕ ನೋಡಬಹುದು.
ಹೀಗೆ ಸಂಸಾರ ಸುಖದ ಜೊತೆಗೆ ಯುವ ಜನತೆಗೆ ಒಂದಷ್ಟು ಸಂದೇಶಗಳನ್ನು ನೀಡುತ್ತಾ ಸಾಗುವ ಸಿನಿಮಾ ಇದಾಗಿದೆ. ಮ್ಯೂಸಿಕ್ ಅಂತು ಸೂಪರ್. ಅಜನೀಶ್ ಲೋಕನಾಥ್ ಅವರಿಂದ ಬಂದಿರುವ ಹಾಡುಗಳು ಮನಸ್ಸಲ್ಲಿ ಉಳಿಯುತ್ತವೆ. 70ರ ದಶಕದಲ್ಲಿ ಸಾಗುವ ಕಥೆ ಇದಾಗಿದೆ. ತ್ರಿವೇಣಿ ಅವರ ಕಾದಂಬರಿಯನ್ನು ಓದಿದಂತೆಯೇ ಸಿನಿಮಾ ಕೂಡ ಸಾಗುತ್ತಾ ಹೋಗುತ್ತದೆ.
ಶ್ರಾವಣಿ – ಸುಬ್ರಮಣ್ಯ ಸಿನಿಮಾ ಮಾಡಿದ್ದ ಮಂಜು ಸ್ವರಾಜ್ ಅವರೇ ಇದಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಲೋಹಿತ್ ನಂಜುಂಡಯ್ಯ ನಿರ್ಮಾಣ ಮಾಡಿದ್ದಾರೆ. ಪಂಜಾಬಿ ಹುಡುಗಿಯಾಗಿದ್ದರು ಮಿಶಾ ಮಾತ್ರ ಕನ್ನಡದ ಪದಗಳನ್ನ ಅರ್ಥ ಮಾಡಿಕೊಂಡು ಮನಸ್ಸಿಗೆ ಇಷ್ಟವಾಗುವಂತೆ ನಟಿಸಿದ್ದಾರೆ. ಉಳಿದಂತೆ ಚಿತ್ಕಲಾ ಬಿರಾದರ್, ಹಿರಿಯ ನಟ ರಾಮಕೃಷ್ಣ ವಿಜಯ್ ಚಂಡೂರ್, ರಘು ರಾಮನಕೊಪ್ಪ ಸೇರಿದಂತೆ ಎಲ್ಲರೂ ಮನಸ್ಸಿನಲ್ಲಿ ಉಳಿಯುತ್ತಾರೆ.
