ತುಮಕೂರು,ಫೆ.14- ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ್ದಾರೆ. 212 ಸರ್ಕಾರಿ ಶಾಲೆಗೆ ಉಚಿತ 1731 ಜೊತೆ ಡೆಸ್ಕ್ ಮತ್ತು ಬೆಂಚು ವಿತರಿಸಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ನ ಪ್ರಾದೇಶಿಕ ನಿರ್ದೇಶಕರಾದ ಎಂ.ಶೀನಪ್ಪ ತಿಳಿಸಿದರು.
ತುಮಕೂರು ತಾಲ್ಲೋಕಿನ ಹೆಬ್ಬೂರು ಹೋಬಳಿ,ನಾಗವಲ್ಲಿ ಕ್ಲಸ್ಟರ್ ನ ಪನ್ನಸಂದ್ರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಅವರು ಕಳಿಸಿಕೊಟ್ಟಿದ್ದ ಉಚಿತ ಡೆಸ್ಕ್ ಮತ್ತು ಬೆಂಚುಗಳನ್ನು ವಿತರಿಸಿ ಅವರು ಮಾತನಾಡಿದರು.
ತುಮಕೂರು ಜಿಲ್ಲೆಯ 212 ಶಾಲೆಗಳಿಗೆ 1731ಜೊತೆ ಡೆಸ್ಕ್ ಮತ್ತು ಬೆಂಚುಗಳನ್ನು ಉಚಿತವಾಗಿ ನೀಡಲಾಗಿದೆ, ಪೂಜ್ಯರ ಆಶಯ ಒಂದೇ ಎಲ್ಲರೂ ಶಿಕ್ಷಣವನ್ನು ಪಡೆಯಬೇಕು, ಸ್ಪರ್ಧಾತಕ ಜಗತ್ತಿನಲ್ಲಿ ಉತ್ತಮ ಶಿಕ್ಷಣ ಪಡೆದು ಜ್ಞಾನವಂತರಾಗಿ, ದೇಶಕ್ಕೆ ಒಳ್ಳೆಯ ಹೆಸರು ತರಬೇಕೆಂಬುದಾಗಿದೆ. ಅವರ ಸೇವೆ ಸದಾ ಮುಂದುವರೆಯಲಿ ಎಂದರು.
ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿ ಉಚಿತ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ, ಶಾಲೆಗಳಿಗೆ ಆಟದ ಮೈದಾನ, ಶಾಲಾಕೊಠಡಿ, ಕುಡಿಯುವ ನೀರು, ಶಾಲಾ ಕಟ್ಟಡಗಳ ದುರಸ್ತಿ, ಶೌಚಾಲಯ, ಶಾಲಾ ಆವರಣ, ರಂಗಮಂದಿರ, ಬೋಧನಾ ಸಾಮಗ್ರಿಗಳಿಗೆ ಧನಸಹಾಯ ಮಾಡಲಾಗುತ್ತಿದೆ. ಸ್ವಸಹಾಯ ಸಂಘಗಳ ಸದಸ್ಯರ 125010 ಮಕ್ಕಳಿಗೆ ಸುಮಾರು 153ಕೋಟಿ ವಿದ್ಯಾರ್ಥಿ ವೇತನಗಳನ್ನು ನೀಡಲಾಗುತ್ತಿದೆ, ರಾಜ್ಯದ ಒಟ್ಟು 11,621 ಶಾಲೆಗಳಿಗೆ 75518 ಡೆಸ್ಕ್ ಮತ್ತು ಬೆಂಚ್ ಗಳನ್ನು ಧರ್ಮಸ್ಥಳದಿಂದ ನೀಡಲಾಗಿದೆ. ಇದಕ್ಕಾಗಿ ಸುಮಾರು 29 ಕೋಟಿ ರೂ. ವ್ಯಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ,ತಾಲ್ಲೋಕು ಯೋಜನಾಧಿಕಾರಿ ಪ್ರಭಾಕರ್ ನಾಯಕ್,ಪಿ.ಬಿ.ಸಂದೇಶ್ ಇತರರು ಉಪಸ್ಥಿತರಿದ್ದರು.
