ಬೆಳಗಾವಿ,ಡಿ.17-ರಾಜ್ಯ ಬೌದ್ಧ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೌದ್ಧ ಭಿಕ್ಕುಗಳಿಗೆ ಮುಜರಾಯಿ ಇಲಾಖೆ ವತಿಯಿಂದ ತತಕ್ಷಣದಿಂದಲೇ ಅನ್ವಯವಾಗುವಂತೆ ಅಲ್ಪಸಂಖ್ಯಾತ ಇಲಾಖೆ ವತಿಯಿಂದ ತಿಂಗಳ ವೇತನವನ್ನು ನೀಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್ನಲ್ಲಿ ಪ್ರಕಟಿಸಿದ್ದಾರೆ.
ಪ್ರಶ್ನೋತ್ತರ ವೇಳೆ ಶಿವಕುಮಾರ್.ಕೆ ಅವರು ಕೇಳಿದ ಪ್ರಶ್ನೆಗೆ ವಕ್ಫ್ ಮತ್ತು ಅಲಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಅವರ ಪರವಾಗಿ ಉತ್ತರಿಸಿದ ರಾಮಲಿಂಗಾರೆಡ್ಡಿ ಅವರು, ರಾಜ್ಯದ ನಾನಾ ಕಡೆ ಬೌದ್ಧ ಕೇಂದ್ರಗಳಲ್ಲಿ ಬೌದ್ಧ ಭಿಕ್ಕುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಕಡೆ ಕೆಲವರಿಗೆ ದೈನಂದಿನ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಇಲಾಖೆ ವತಿಯಿಂದಲೇ ಅವರಿಗೆ ಮಾಸಿಕ ವೇತನ ನೀಡುವುದಾಗಿ ತಿಳಿಸಿದರು.
ಈ ಸಂಬಂಧ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ತತಕ್ಷಣದಿಂದಲೇ ಜಾರಿಯಾಗುವಂತೆ ವೇತನ ನೀಡಲಾಗುವುದು. ಸರ್ಕಾರ ಅವರ ಹಿತ ಕಾಪಾಡಲು ಬದ್ಧವಿದೆ ಎಂದು ಆಶ್ವಾಸನೆ ನೀಡಿದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ನೊಂದಾಯಿತ ಜೈನ ಬಸದೀಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯ ಅರ್ಚಕರಿಗೆ 6000, ಸಹಾಯಕ ಅರ್ಚಕರಿಗೆ 5000 ರೂ. ಇದೇ ರೀತಿ ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೇಶ್, ಇಮಾಮ್ ಮತ್ತು ಮುಯಿಜೀನ್ ಅವರುಗಳಿಗೆ ಕ್ರಮವಾಗಿ ಕ್ರಮವಾಗಿ 6 ಸಾವಿರ ಹಾಗೂ 5000 ನೀಡುತ್ತಿದ್ದೇವೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಶಿವಕುಮಾರ್ ಅವರು, ರಾಜ್ಯದ ಬಯಲುಕೊಪ್ಪೆ, ಮುಂಡಗೋಡು ಸೇರಿದಂತೆ ಮತ್ತಿತರ ಕಡೆ ಬೌದ್ಧ ಕೇಂದ್ರಗಳಿದ್ದು, ಇಲ್ಲಿ ಬೌದ್ಧ ಭಿಕ್ಕುಗಳು ಬುದ್ದನ ವಿಚಾರಧಾರೆಗಳ ಕುರಿತು ಬೋಧನೆ ಮಾಡುತ್ತಾರೆ. ಆದರೆ ಇವರ ದೈನಂದಿನ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಇದಕ್ಕಾಗಿ ಬೋಧನೆಗೆ ಹೋಗುತ್ತಾರೆ. ಸರ್ಕಾರ ಮಾನವೀಯತೆಯಿಂದ ಪರಿಗಣಿಸಿ ಅವರಿಗೆ ವೇತನ ನೀಡಬೇಕೆಂದು ಮನವಿ ಮಾಡಿದರು.
