Homeಅಂತಾರಾಷ್ಟ್ರೀಯಹಿಂದೂ ಧರ್ಮ ಸಮಾಜ ವಿಭಜಿಸುವ ಶಕ್ತಿಯಲ್ಲ, ಇಡೀ ಜಗತ್ತನ್ನು ಒಂದುಗೂಡಿಸುವ ತತ್ವ : ಭಾಗವತ್‌

ಹಿಂದೂ ಧರ್ಮ ಸಮಾಜ ವಿಭಜಿಸುವ ಶಕ್ತಿಯಲ್ಲ, ಇಡೀ ಜಗತ್ತನ್ನು ಒಂದುಗೂಡಿಸುವ ತತ್ವ : ಭಾಗವತ್‌

ಟೊರೊಂಟೊ, ಆ.31- ಹಿಂದೂ ಧರ್ಮವು ಸಮಾಜವನ್ನು ವಿಭಜಿಸುವ ಶಕ್ತಿಯಲ್ಲ; ಬದಲಾಗಿ ಇಡೀ ಜಗತ್ತನ್ನು ಒಂದುಗೂಡಿಸುವ ತತ್ವವನ್ನು ಹೊಂದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದರು.

ಕೆನಡಾದ ಟೊರೊಂಟೊದಲ್ಲಿ ಕೆನಡಿಯನ್‌ ಹಿಂದೂಸ್‌ ಫಾರ್‌ ಔಟ್‌ರೀಚ್‌, ರಿಲೇಶನ್ಸ್‌ ಅಂಡ್‌ ಡೈಲಾಗ್‌ ಸಂಸ್ಥೆ ಆಯೋಜಿಸಿದ್ದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ಇತರರಿಗೆ ನೆರವಾಗುವುದು ಮತ್ತು ಇಡೀ ಜಗತ್ತನ್ನು ಒಂದು ಕುಟುಂಬವೆಂದು ಪರಿಗಣಿಸುವ ಮನೋಭಾವ ಅಂತರ್ಗತವಾಗಿದೆ ಎಂದರು.

‘ಹಿಂದೂ’ ಎಂಬ ಪದವನ್ನು ನಿರ್ದಿಷ್ಟ ಭಾಷೆ, ಪೂಜಾ ಪದ್ಧತಿ ಅಥವಾ ಜೀವನಶೈತಿಗೆ ಮಾತ್ರ ಸೀಮಿತಗೊಳಿಸಲಾಗದು. ಹಿಂದೂ ತತ್ವಜ್ಞಾನವು ವೈವಿಧ್ಯತೆಯನ್ನು ಗೌರವಿಸುವುದರ ಜತೆಗೆ ಅದನ್ನು ಸ್ವೀಕರಿಸುತ್ತದೆ. ಸಮಾಜದಲ್ಲಿ ನೂರಾರು ಭಾಷೆಗಳು, ಜಾತಿಗಳು ಮತ್ತು ಧರ್ಮಗಳು ಇರುವುದು ಸಹಜ. ಆದರೆ ಈ ಎಲ್ಲ ವೈವಿಧ್ಯತೆಗಳ ಹಿಂದಿರುವ ಆಂತರಿಕ ಏಕತೆಯೇ ಅಂತಿಮ ಸತ್ಯ ಎಂದು ಅವರು ವಿಶ್ಲೇಷಿಸಿದರು.

ಭಾರತೀಯ ಪೂರ್ವಜರು ಮೆಕ್ಸಿಕೋದಿಂದ ಸೈಬೀರಿಯಾ ಹಾಗೂ ಹಿಮಾಲಯದಿಂದ ಆಗ್ನೇಯ ಏಷ್ಯಾದವರೆಗೆ ಸಂಚರಿಸಿದ್ದರೂ ಯಾವುದೇ ಭೂಪ್ರದೇಶವನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಬದಲಾಗಿ ಆಯುರ್ವೇದ, ಖಗೋಳಶಾಸ್ತ್ರ ಸೇರಿದಂತೆ ಜ್ಞಾನ ಮತ್ತು ನಾಗರಿಕತೆಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದರು ಎಂದು ಭಾಗವತ್‌ ಹೇಳಿದರು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪೋಲಿಷ್‌ ನಿರಾಶ್ರಿತರಿಗೆ ಜಾಮ್‌ನಗರದ ಮಹಾರಾಜರು ಆಶ್ರಯ ನೀಡಿದ್ದನ್ನು ಸ್ಮರಿಸಿದ ಅವರು, ಪಾರ್ಸಿಗಳು, ಯಹೂದಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಭಾರತ ಸದಾ ಸುರಕ್ಷಿತ ನೆಲೆಯಾಗಿತ್ತು ಎಂದು ಹೇಳಿದರು.

ವಿಶ್ವದ ಯಾವುದೇ ಭಾಗದಲ್ಲಿ ಬಿಕ್ಕಟ್ಟು ಎದುರಾದಾಗ ಭಾರತ ನೆರವಿನ ಹಸ್ತ ಚಾಚುತ್ತಿದೆ. ಇತ್ತೀಚಿನ ಯುದ್ಧಪೀಡಿತ ಪ್ರದೇಶಗಳಿಂದ ಭಾರತೀಯರ ಜತೆಗೆ ಹಲವು ವಿದೇಶಿ ಪ್ರಜೆಗಳನ್ನೂ ರಕ್ಷಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಮುಕ್ತ ಮನಸ್ಸಿನ ಸಮಾಜ ನಿರ್ಮಾಣಕ್ಕೆ ‘ವಸುಧೈವ ಕುಟುಂಬಕಂ’ ಪರಿಕಲ್ಪನೆ ಅತ್ಯಂತ ಅಗತ್ಯ. ಹಿಂದೂಗಳು ಜಾಗೃತರಾದರೆ ಇಡೀ ಜಗತ್ತೇ ಜಾಗೃತಗೊಳ್ಳಲಿದೆ ಎಂದು ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟರು.

ಸಮಾವೇಶದಲ್ಲಿ ಕೆನಡಾದ ಎಂಟು ಪ್ರಾಂತ್ಯಗಳಿಂದ 2,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಕೆನಡಾದ ಮಾಜಿ ರಕ್ಷಣಾ ಸಚಿವ ಹಾಗೂ ಆಲ್ಬರ್ಟಾದ ಮಾಜಿ ಪ್ರೀಮಿಯರ್‌ ಜೇಸನ್‌ ಕೆನ್ನಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಗಣ್ಯರು ಉಪಸ್ಥಿತರಿದ್ದರು.

RELATED ARTICLES
spot_img

Latest News