ಕರಾಕಾಸ್,ಜೂ.25- ವೆನೆಜುವೆಲಾದ ಕರಾವಳಿ ಪ್ರದೇಶದ ಸಮೀಪ ಸತತವಾಗಿ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ದೇಶಾದ್ಯಂತ ಭಾರೀ ಆತಂಕ ಮತ್ತು ಹಾನಿಯನ್ನುಂಟುಮಾಡಿವೆ. ಹಲವು ಕಟ್ಟಡಗಳು ಕುಸಿದಿದ್ದು, ಸಾವಿರಾರು ಜನರು ಭಯಭೀತರಾಗಿ ಮನೆಗಳಿಂದ ಹೊರಬಂದು ರಸ್ತೆಗಳಲ್ಲಿ ಆಶ್ರಯ ಪಡೆದಿದ್ದಾರೆ.
ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿರೋಡ್ರಿಗಸ್ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ಹಲವು ರಾಜ್ಯಗಳಲ್ಲಿ ಹಾನಿಯಾಗಿರುವುದನ್ನು ದೃಢಪಡಿಸಿದ್ದಾರೆ. ಆದರೆ ಸಾವು-ನೋವು ಅಥವಾ ಹಾನಿಗೊಳಗಾದ ಕಟ್ಟಡಗಳ ನಿಖರ ಸಂಖ್ಯೆಯನ್ನು ಇನ್ನೂ ಪ್ರಕಟಿಸಿಲ್ಲ.
ದೇಶದ ಪ್ರಮುಖ ಸೈಮನ್ ಬೊಲಿವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭೂಕಂಪದಿಂದ ಹಾನಿಗೊಳಗಾಗಿದ್ದು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಶಾಲಾ-ಕಾಲೇಜುಗಳಿಗೂ ಕೆಲ ದಿನಗಳ ರಜೆ ಘೋಷಿಸಲಾಗಿದೆ. ರಾಜ್ಯದ ಗವರ್ನರ್ ಅವರ ಪ್ರಕಾರ, ಕನಿಷ್ಠ 32 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭೂಕಂಪ ಸಂಭವಿಸಿ ನಾಲ್ಕು ಗಂಟೆಗಳಾದ ಬಳಿಕವೂ 15 ಮಂದಿ ಅವಶೇಷಗಳಡಿ ಸಿಲುಕಿರುವ ಮಾಹಿತಿ ಲಭ್ಯವಾಗಿದೆ.
ಫಾಲ್ಕನ್ ರಾಜಧಾನಿ ವಿಕ್ಟರ್ ಕ್ಲಾರ್ಕ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ತೀವ್ರವಾಗಿ ನಡುಗಿದ್ದು, ಕೆಲವು ಕಡೆ ಗೋಡೆಗಳು ಕುಸಿದಿವೆ. ವಿದ್ಯುತ್ ಕಂಬಗಳು ಉರುಳಿದ್ದು, ಅವಶೇಷಗಳು ರಸ್ತೆಗಳನ್ನು ಆವರಿಸಿವೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಮೊಬೈಲ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.
ಅಮೆರಿಕದಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಮೊದಲ ಭೂಕಂಪದ ತೀವ್ರತೆ 7.2 ಆಗಿದ್ದು, ಅದರ ಕೇಂದ್ರಬಿಂದು ಕರಾಕಾಸ್ನ ಪಶ್ಚಿಮಕ್ಕೆ ಸುಮಾರು 168 ಕಿ.ಮೀ ದೂರದಲ್ಲಿರುವ ಮೊರೋನ್ ಸಮೀಪದಲ್ಲಿತ್ತು. ಇದರ ಆಳ 22 ಕಿ.ಮೀ ಆಗಿತ್ತು.
ಅದಾದ ಕೇವಲ ಒಂದು ನಿಮಿಷದ ಬಳಿಕ 7.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದು, ಅದರ ಕೇಂದ್ರಬಿಂದು ಮೊರೋನ್ನ ದಕ್ಷಿಣ-ಪಶ್ಚಿಮಕ್ಕೆ 16 ಕಿ.ಮೀ ದೂರದಲ್ಲಿತ್ತು. ಎರಡನೇ ಭೂಕಂಪದ ಆಳ 10 ಕಿ.ಮೀ ಆಗಿತ್ತು.
ಬ್ರೆಜಿಲ್ ಮತ್ತು ಕೊಲಂಬಿಯಾದಲ್ಲೂ ಕಂಪನದ ಅನುಭವ ಭೂಕಂಪದ ಪರಿಣಾಮ ಸುಮಾರು 1,700 ಕಿ.ಮೀ ದೂರದ ಬ್ರೆಜಿಲ್ ದೇಶದ ಅಮೆಜಾನ್ ಪ್ರದೇಶಗಳಾದ ಮನೌಸ್, ಬೆಲೆಮ್ ಮತ್ತು ಮಕಾಪಾ ನಗರಗಳಲ್ಲೂ ಕಂಪನದ ಅನುಭವವಾಗಿದೆ. ಸುರಕ್ಷತಾ ಕ್ರಮವಾಗಿ ಹಲವು ಕಟ್ಟಡಗಳನ್ನು ಖಾಲಿ ಮಾಡಲಾಗಿದೆ. ಕೊಲಂಬಿಯಾ ದೇಶದ ಕರೀಬಿಯನ್ ಹಾಗೂ ಈಶಾನ್ಯ ಭಾಗಗಳಲ್ಲೂ ಕಂಪನ ಅನುಭವವಾಗಿದ್ದರೂ, ಯಾವುದೇ ಹಾನಿ ವರದಿಯಾಗಿಲ್ಲ.
ಸುನಾಮಿ ಎಚ್ಚರಿಕೆ :
ಭೂಕಂಪದ ನಂತರ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ವರ್ಜಿನ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ. ಡೊಮಿನಿಕನ್ ರಿಪಬ್ಲಿಕ್ ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಹವಾಮಾನ ಬದಲಾವಣೆ ಮತ್ತು ಪ್ರಕೃತಿ ವಿಕೋಪಗಳ ಆತಂಕ :
ತಜ್ಞರ ಪ್ರಕಾರ ವೆನೆಜುವೆಲಾದಲ್ಲಿ ಇಂತಹ ಪ್ರಬಲ ಭೂಕಂಪಗಳು ಅಪರೂಪ. ದೇಶವು ಭೂಪಟಲದ ದೋಷರೇಖೆಗಳ ಸಮೀಪದಲ್ಲಿದ್ದರೂ, ದಕ್ಷಿಣ ಅಮೆರಿಕ ಮತ್ತು ಕರೀಬಿಯನ್ ಭೂಫಲಕಗಳ ಸ್ಥಾನಮಾನದಿಂದ ಇಲ್ಲಿ ದೊಡ್ಡ ಭೂಕಂಪಗಳು ಕಡಿಮೆ ಸಂಭವಿಸುತ್ತವೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
