Monday, May 13, 2024
Homeರಾಜ್ಯಬಿಜೆಪಿಯಲ್ಲಿ ನಿಲ್ಲದ ಬಡಿದಾಟ: ದೆಹಲಿಯತ್ತ ಅತೃಪ್ತರ ಬಣ

ಬಿಜೆಪಿಯಲ್ಲಿ ನಿಲ್ಲದ ಬಡಿದಾಟ: ದೆಹಲಿಯತ್ತ ಅತೃಪ್ತರ ಬಣ

ಬೆಂಗಳೂರು,ನ.25- ವಿಧಾನಸಭೆ ಚುನಾವಣೆ ಹೀನಾಯ ಸೋಲಿನ ನಂತರ ಉಂಟಾಗಿರುವ ವಿದ್ಯಮಾನಗಳ ಕುರಿತು ಡಿ.7ರಂದು ವರಿಷ್ಠರ ಜೊತೆ ಕೆಲವು ಅಸಮಾಧಾನಿತ ನಾಯಕರು ದೆಹಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಸೇರಿದಂತೆ ಹಲವರನ್ನು ಮಾಜಿ ಸಚಿವರಾದ ವಿ.ಸೋಮಣ್ಣ, ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಅವರುಗಳು ಡಿ.7, 8 ಮತ್ತು 9ರಂದು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಆರ್.ಅಶೋಕ್ ಅವರನ್ನು ನೇಮಕ ಮಾಡಿರುವುದಕ್ಕೆ ಬಿಜೆಪಿಯೊಳಗಿನ ಒಂದು ಬಣ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದೆ.

ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ: ಬಿಎಸ್‌ವೈ ಗರಂ

ವರಿಷ್ಠರು ಆಯ್ಕೆ ಮಾಡುವ ಮುನ್ನ ಸೌಜನ್ಯಕ್ಕಾದರೂ ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಿಲ್ಲ. ಹಿರಿಯರನ್ನು ಕಡೆಗಣಿಸಿ ಕೇವಲ ಯಡಿಯೂರಪ್ಪ ಪುತ್ರ ಎಂಬ ಒಂದೇ ಕಾರಣಕ್ಕಾಗಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ವಿರೋಧಿ ಬಣ ಅಸಮಾಧಾನಗೊಂಡಿದೆ.

ಇದರ ನಡುವೆಯೇ ಅತ್ಯಂತ ಮಹತ್ವದ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಆರ್.ಅಶೋಕ್ ಅವರನ್ನು ನೇಮಕ ಮಾಡಿರುವುದಕ್ಕೂ ವಿರೋಧಿ ಬಣ ಕುದಿಯುತ್ತಿದೆ. ಅದರಲ್ಲೂ ವಿರೋಧ ಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅಂತೂ ವರಿಷ್ಠರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಒಂದು ಹಂತದಲ್ಲಿ ಬಿ.ವೈ. ವಿಜಯೇಂದ್ರ ಯತ್ನಾಳ್ ಅವರ ಮನೆಗೆ ಹೋಗಿ ಸಂಧಾನ ನಡೆಸುವ ಪ್ರಯತ್ನ ಮಾಡಿದರೂ ಫಲ ಕೊಟ್ಟಿಲ್ಲ. ನನ್ನ ಮನೆಗೆ ಅವರು ಬರುವ ಅಗತ್ಯವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.
ಈ ಅಸಮಾಧಾನ ಇನ್ನಷ್ಟು ಬೆಳೆಯಬಹುದೆಂಬ ಆತಂಕಕ್ಕೆ ಒಳಗಾಗಿರುವ ವರಿಷ್ಠರು ಮಾತುಕತೆಗೆ ಬನ್ನಿ ಎಂದು ಸೋಮಣ್ಣ ಯತ್ನಾಳ್, ರಮೇಶ್ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್ ಸೇರಿದಂತೆ ಮತ್ತಿತರರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.

ವಿಜಯೇಂದ್ರ ಮತ್ತು ಆರ್.ಅಶೋಕ್ ಅವರನ್ನು ಎರಡು ಪ್ರಮುಖ ಸ್ಥಾನಗಳಿಗೆ ಆಯ್ಕೆ ಮಾಡಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿರುವುದರಿಂದ ರಾಷ್ಟ್ರೀಯ ನಾಯಕರ ಭೇಟಿ ಮಹತ್ವ ಪಡೆದುಕೊಂಡಿದೆ.
ಭೇಟಿ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆ ವೇಳೆ ತಮಗೆ ಪಕ್ಷದಲ್ಲಿ ಯಾವ ರೀತಿ ಹಿನ್ನಡೆಯಾಯಿತು, ಇದಕ್ಕೆ ಯಾರು ಕಾರಣ ಎಂಬ ಇತ್ಯಾದಿ ವಿಷಯಗಳನ್ನು ವರಿಷ್ಟರ ಗಮನಕ್ಕೆ ತರಲು ಮುಂದಾಗಿದ್ದಾರೆ.

ಕೆಲವರು ತಮ್ಮ ಸ್ವಾರ್ಥಕ್ಕಾಗಿ ಹಾಗೂ ಕುಟುಂಬದ ಹಿತ ಕಾಪಾಡಲು ಒಳ ಒಪ್ಪಂದ ಮಾಡಿಕೊಂಡು ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡಿದರೂ ಪುನಃ ಇಂಥವರಿಗೆ ಪಕ್ಷದಲ್ಲಿ ಮಣೆ ಹಾಕಿದರೆ ನಾವು ಹೇಗೆ ರಾಜಕಾರ ಮಾಡಬೇಕೆಂಬ ಪ್ರಶ್ನೆಯನ್ನು ಮುಂದಿಡಲಿದ್ದಾರೆ.

ಸುರಂಗ ಕಾರ್ಯಾಚರಣೆಗೆ ಮತ್ತೆ ಅಡ್ಡಿ

ಒಂದು ರಾಜಕೀಯ ಪಕ್ಷ ಕೇವಲ ಕುಟುಂಬಕ್ಕೆ ಸೀಮಿತವಾಗಬಾರದು. ಕುಟುಂಬ ರಾಜಕಾರಣವನ್ನು ವಿರೋಸುವ ಬಿಜೆಪಿಯೇ ಯಾರದೋ ಒತ್ತಡಕ್ಕೆ ಮಣಿದು ಇಡೀ ಪಕ್ಷವನ್ನೇ ಅವರ ಸುಪರ್ದಿಗೆ ನೀಡಿದರೆ ನಮ್ಮ ಗತಿ ಏನು? ಎಂಬ ಮೂಲ ಪ್ರಶ್ನೆಯನ್ನು ಮಾಡಲಿದ್ದಾರೆ ಎನ್ನಲಾಗಿದೆ.

RELATED ARTICLES

Latest News