Saturday, May 18, 2024
Homeರಾಜಕೀಯಲೋಕಸಭೆಗೆ 14 ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್..?

ಲೋಕಸಭೆಗೆ 14 ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್..?

ಬೆಂಗಳೂರು,ಮಾ.8- ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗಾಗಿ ದೆಹಲಿಯಲ್ಲಿ ನಡೆದ ಕಸರತ್ತು ತಾರ್ಕಿಕ ಹಂತಕ್ಕೆ ಬಂದಿದ್ದು, ರಾಜ್ಯದ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಆಖೈರುಗೊಳಿಸಲಾಗಿದೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಅವರ ಮನವೊಲಿಸಲು ರಾಜ್ಯ ನಾಯಕರು ಹರಸಾಹಸ ನಡೆಸುತ್ತಿದ್ದಾರೆ.

ನಿನ್ನೆ ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಿತು. ಅದರಲ್ಲಿ ಸೋನಿಯಾಗಾಂಧಿ, ಅಂಬಿಕಾ ಸೋನಿ, ಕೆ.ಸಿ.ವೇಣುಗೋಪಾಲ್, ರಾಜ್ಯದಿಂದ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಹಿರಿಯ ನಾಯಕರ ಪೈಕಿ ಸೋನಿಯಾಗಾಂಧಿ ಲೋಕಸಭೆ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಕೂಡ ಚುನಾವಣೆಯಲ್ಲಿ ಸ್ರ್ಪಧಿಸಲು ನಿರಾಕರಿಸಿದ್ದಾರೆ.

ದೆಹಲಿಯಲ್ಲಿ ಬೀಡುಬಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬೆಳಿಗ್ಗೆ ಮಲ್ಲಿಕಾರ್ಜುನ ಖರ್ಗೆಯವರ ಮನೆಗೆ ಭೇಟಿ ನೀಡಿ ಚುನಾವಣೆಯಲ್ಲಿ ಸ್ರ್ಪಧಿಸುವಂತೆ ಮನವೊಲಿಸುವ ಯತ್ನ ನಡೆಸಿದರು. ಆದರೆ ಅದಕ್ಕೆ ಒಪ್ಪದ ಖರ್ಗೆಯವರು, ತಮ್ಮ ರಾಜ್ಯಸಭೆಯ ಅಕಾರಾವ ಇನ್ನೂ 4 ವರ್ಷ ಇದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇ ಆದರೆ ದೇಶದಾದ್ಯಂತ ಪ್ರವಾಸಕ್ಕೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ.

ಹೀಗಾಗಿ ನಾನು ಸ್ರ್ಪಧಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೂ ಬೆನ್ನುಬಿಡದ ಡಿ.ಕೆ.ಶಿವಕುಮಾರ್, ನೀವು ಸ್ಪರ್ಧೆ ಮಾಡಿ, ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆ ನಮ್ಮದು ಎಂದು ಮನವೊಲಿಸುತ್ತಿದ್ದಾರೆಂದು ತಿಳಿದುಬಂದಿದೆ. ಕಲಬುರಗಿ ಕ್ಷೇತ್ರದಲ್ಲಿ ಖರ್ಗೆಯವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸುವ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಮತ್ತೊಂದೆಡೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ಮೊದಲ ಸುತ್ತಿನಲ್ಲಿ ಚರ್ಚೆ ನಡೆಸಿದ್ದಂತೆ 14 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಆಖೈರುಗೊಳಿಸುವ ನಿಟ್ಟಿನಲ್ಲಿ ನಿನ್ನೆ ಚರ್ಚೆಗಳಾಗಿವೆ.

ಗೆಲ್ಲುವ ಸಾಧ್ಯತೆಯಿರುವ ಹಾಗೂ ಕ್ಷೇತ್ರದ ಜನರ ಜೊತೆ ಸಕ್ರಿಯವಾಗಿ ಸಂಪರ್ಕದಲ್ಲಿರುವ ಸ್ಥಳೀಯ ನಾಯಕರ ಬೆಂಬಲ ಪಡೆದ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಲಿದೆ. ಬಾಕಿ ಉಳಿದ 14 ಕ್ಷೇತ್ರಗಳ ಆಯ್ಕೆಗೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತದ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಿ.ಕೆ.ಸುರೇಶ್, ಮಂಡ್ಯಕ್ಕೆ ಸ್ಟಾರ್ ಚಂದ್ರು, ತುಮಕೂರಿಗೆ ಎಸ್.ಪಿ.ಮುದ್ದಹನುಮೇಗೌಡ, ಬೆಂಗಳೂರು ದಕ್ಷಿಣಕ್ಕೆ ಸೌಮ್ಯರೆಡ್ಡಿ, ಹಾಸನಕ್ಕೆ ಶ್ರೇಯಸ್ ಪಟೇಲ್, ಶಿವಮೊಗ್ಗಕ್ಕೆ ಗೀತಾ ಶಿವರಾಜ್‍ಕುಮಾರ್, ಚಿತ್ರದುರ್ಗಕ್ಕೆ ಬಿ.ಎನ್.ಚಂದ್ರಪ್ಪ, ದಕ್ಷಿಣ ಕನ್ನಡಕ್ಕೆ ವಿನಯಕುಮಾರ್ ಸೊರಕೆ, ಬೀದರ್‍ಗೆ ರಾಜಶೇಖರ್ ಪಾಟೀಲ್, ಮೈಸೂರಿಗೆ ಎಂ.ಲಕ್ಷ್ಮಣ್, ದಾವಣಗೆರೆಗೆ ಪ್ರಭಾ ಮಲ್ಲಿಕಾರ್ಜುನ್, ಉತ್ತರ ಕನ್ನಡಕ್ಕೆ ಅಂಜಲಿ ನಿಂಬಾಳ್ಕರ್, ವಿಜಯಪುರಕ್ಕೆ ರಾಜು ಅಲಗೂರು, ಕೊಪ್ಪಳಕ್ಕೆ ರಾಜಶೇಖರ್ ಹಿಟ್ನಾಳ್ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆಯಿದೆ.

RELATED ARTICLES

Latest News