Wednesday, May 8, 2024
Homeಬೆಂಗಳೂರುಬೆಂಗಳೂರು : ಮಣ್ಣು ಸುರಿಯುವ ವಿಚಾರಕ್ಕೆ ಜೆಸಿಬಿ ಮಾಲೀಕನ ಕೊಲೆ

ಬೆಂಗಳೂರು : ಮಣ್ಣು ಸುರಿಯುವ ವಿಚಾರಕ್ಕೆ ಜೆಸಿಬಿ ಮಾಲೀಕನ ಕೊಲೆ

ಬೆಂಗಳೂರು,ಮಾ.30- ಖಾಲಿ ಜಾಗದಲ್ಲಿ ಮಣ್ಣನ್ನು ಹಾಕಿ ಮಟ್ಟ ಮಾಡುತ್ತಿದ್ದ ಜೆಸಿಬಿ ಮಾಲೀಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಹೆಮ್ಮಿಗೆಪುರ ನಿವಾಸಿ ಲಿಂಗಮೂರ್ತಿ(38) ಕೊಲೆಯಾಗಿರುವ ಜೆಸಿಬಿ ಹಾಗೂ ಲಾರಿ ಮಾಲೀಕ.

ಲಿಂಗಮೂರ್ತಿ ಅವರು ಮಣ್ಣನ್ನು ಲೋಡ್ ಮಾಡಿದ್ದ ಲಾರಿಯಿಂದ ಖಾಲಿ ಜಾಗಕ್ಕೆ ಸುರಿದು ಮಟ್ಟ ಮಾಡುವ ಕೆಲಸ ಮಾಡಿಕೊಂಡಿದ್ದರು. ನಿನ್ನೆ ರಾತ್ರಿ ಲಾರಿಯಲ್ಲಿ ಮಣ್ಣನ್ನು ತೆಗೆದುಕೊಂಡು ಹೋಗಿ ಹೆಮ್ಮಿಗೆಪುರದ ಐರಾ ಶಾಲೆ ಪಕ್ಕದ ಖಾಲಿ ಜಾಗದಲ್ಲಿ ಅನ್ಲೋಡ್ ಮಾಡುತ್ತಿದ್ದಾಗ ಆರೋಪಿ ಚಿರಂಜೀವಿ ಅಲಿಯಾಸ್ ಚಿರಿ ಎಂಬಾತ ತನ್ನಿಬ್ಬರು ಸ್ನೇಹಿತರೊಂದಿಗೆ ಜಾಗದ ಬಳಿ ಬಂದು ಇಲ್ಲಿ ಮಣ್ಣನ್ನು ಸುರಿಯಬೇಡಿ ಧೂಳು ಬರುತ್ತದೆ ಎಂದು ಹೇಳಿದ್ದಾನೆ.

ಇದೇ ವಿಚಾರವಾಗಿ ಆಗಾಗ್ಗೆ ಇವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ರಾತ್ರಿ ಚಿರಂಜೀವಿ ಹಾಗೂ ಲಿಂಗಮೂರ್ತಿ ನಡುವೆ ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಜಗಳದ ಒಂದು ಹಂತದಲ್ಲಿ ಲಿಂಗಮೂರ್ತಿ ಅವರ ಎದೆಗೆ ಚಿರಂಜೀವಿ ಚಾಕುವಿನಿಂದ ಚುಚ್ಚಿ ತನ್ನಿಬ್ಬರು ಸ್ನೇಹಿತರೊಂದಿಗೆ ಪರಾರಿಯಾಗಿದ್ದಾನೆ.

ಚಾಕು ಇರಿತಕ್ಕೊಳಗಾದ ಲಿಂಗಮೂರ್ತಿ ತಕ್ಷಣ ತನ್ನ ಸಹೋದರ ಗೋವಿಂದರಾಜು ಅವರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇತ್ತ ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದ ಲಿಂಗಮೂರ್ತಿ ಅವರನ್ನು ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮುಂಜಾನೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಗೋವಿಂದರಾಜು ಅವರು ತಲಘಟ್ಟಪುರ ಪೊಲೀಸ್ ಠಾಣೆಗೆ ತೆರಳಿ ತನ್ನ ಅಣ್ಣನನ್ನು ಕೊಲೆ ಮಾಡಿರುವ ಆರೋಪಿ ಚಿರಂಜೀವಿ ಅಲಿಯಾಸ್ ಚಿರಿ ಮತ್ತು ಇತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

RELATED ARTICLES

Latest News