ವಯನಾಡ್, ಜ. 17 (ಪಿಟಿಐ) ಕೇರಳದಲ್ಲಿ 14 ವರ್ಷದ ಬಾಲಕಿಯೊಬ್ಬಳ ಮೇಲೆ ಆಸಿಡ್ ದಾಳಿ ನಡೆದಿದೆ. ಕೇರಳದ ವಯನಾಡ್ ಜಿಲ್ಲೆಯಲ್ಲಿ ಬಾಲಕಿಯ ಪಕ್ಕದ ಮನೆ ವ್ಯಕ್ತಿ ಆಸಿಡ್ ದಾಳಿ ನಡೆಸಿರುವುದರಿಂದ ಆಕೆ ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದಾಳೆ ಎಂದು ಪೊಲೀಸರುತಿಳಿಸಿದ್ದಾರೆ.
ಕಿಡಿಗೇಡಿಯ ಕುಕೃತ್ಯದಿಂದ ಸುಟ್ಟ ಗಾಯಗಳಿಂದ ನರಳುತ್ತಿರುವ ಬಾಲಕಿಯನ್ನು ಎಂಟನೆ ತರಗತಿ ವಿದ್ಯಾರ್ಥಿನಿ ಮಹಾಲಕ್ಷ್ಮೀ ಎಂದು ಗುರುತಿಸಲಾಗಿದೆ. ಪುಲ್ಪಳ್ಳಿಯ ಮರಕಾವುವಿನ ಪ್ರಿಯದರ್ಶಿ ಉನತಿ ನಿವಾಸಿ ಆರೋಪಿ ರಾಜು ಜೋಸ್ (53) ಎಂಬಾತನನ್ನು ಬಂಧಿಸಲಾಗಿದೆ. ಅಕ್ಕ ಪಕ್ಕದ ಮನೆಯವರ ಗಲಾಟೆ ಹಿನ್ನೆಲೆಯಲ್ಲಿ ಜೋಸ್ 14 ವರ್ಷದ ಬಾಲಕಿ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ.
ಸಂತ್ರಸ್ತೆಯನ್ನು ಮೊದಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಕೆಯ ಮುಖದ ಮೇಲಿನ ಗಾಯಗಳು ಸೇರಿದಂತೆ ಸುಮಾರು ಶೇ. 40 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ದಾಳಿಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಆದರೆ ಇಂದು ಮುಂಜಾನೆ ಆತನನ್ನು ಬಂಧಿಸಲಾಗಿದೆ.
ದಾಳಿಯ ಹಿಂದಿನ ನಿಖರವಾದ ಉದ್ದೇಶವನ್ನು ತಿಳಿಯಲು ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ವಿಚಾರಣೆಯ ಭಾಗವಾಗಿ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
