ಶಿಮ್ಲಾ, ಮೇ.31- ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಕಾರೊಂದು ತಡರಾತ್ರಿ ಕಂದಕಕ್ಕೆ ಉರುಳಿದ ಬಿದ್ದ ಪರಿಣಾಮ ಅದರಲ್ಲಿದ್ದ ಎಂಟು ಮಂದಿ ಮೃತಪಟ್ಟಿದ್ದಾರೆ. ಈ ದುರ್ಘಟನೆ ಶುಕ್ರವಾರ ತಡರಾತ್ರಿ 11.30ರ ಸಂದರ್ಭದಲ್ಲಿ ಚುರಾಹ್ ಉಪವಿಭಾಗದ ಬೈರ್ಗಢ್ಸಾಚ್ ಪಾಸ್ಕಿಲ್ಲರ್ ರಸ್ತೆಯಲ್ಲಿ ಸಂಭವಿಸಿದೆ. ಆದರೆ ಸ್ಥಳೀಯರಿಗೆ ಈ ವಿಷಯತಡವಾಗಿ ಬೆಳಕಿಗೆ ಬಂದಿದೆ.
ಅಧಿಕಾರಿಗಳ ಪ್ರಕಾರ, ಕಾರು ಹಿಮದಿಂದ ಆವೃತವಾಗಿರುವ ಸಾಚ್ ಪಾಸ್ ಕಡೆಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದೆ. ಸಾಚ್ ಪಾಸ್ ಹಿಮಾಚಲ ಪ್ರದೇಶದ ಅತ್ಯಂತ ಕಠಿಣ ಮತ್ತು ಅಪಾಯಕಾರಿ ಪರ್ವತ ಮಾರ್ಗಗಳಲ್ಲಿ ಒಂದಾಗಿದೆ.
ಚುರಾಹ್ ಕ್ಷೇತ್ರದ ಬಿಜೆಪಿ ಶಾಸಕ ಹನ್್ಸರಾಜ್ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಕಠಿಣವಾದ ಇಳಿಜಾರು ಪ್ರದೇಶ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಕಾರಣ ಮೃತದೇಹಗಳನ್ನು ಹೊರತೆಗೆಯಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಪ್ರದೇಶದ ಭೌಗೋಳಿಕ ಪರಿಸ್ಥಿತಿ ಅತ್ಯಂತ ದುರ್ಗಮವಾಗಿದ್ದು, ಮೊಬೈಲ್ ದೂರವಾಣಿ ಸಂಪರ್ಕವೂ ಲಭ್ಯವಿಲ್ಲ. ಹೀಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ಬೆಳಿಗ್ಗೆ ಆಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
