ಠಾಣೆ, ಮಾ.15- ನವಿ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ಕಾಲ್ ಸೆಂಟರ್ ಅನ್ನು ಪೊಲೀಸರು ಬಯಲಿಗೆಳೆದಿದ್ದು, ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭದ ಭರವಸೆ ನೀಡಿ ಜನರಿಂದ 1 ಕೋಟಿಗೂ ಹೆಚ್ಚು ಹಣ ವಂಚಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಹಣಕಾಸು ಗುಪ್ತಚರ ಮತ್ತು ಸೈಬರ್ ವಿಭಾಗದ ಪೊಲೀಸರು ಮಾರ್ಚ್ 12ರಂದು ರಬಾಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾಪೆ ಕೈಗಾರಿಕಾ ಪ್ರದೇಶದಲ್ಲಿರುವ ಕಾಲ್ಸೆಂಟರ್ ಮೇಲೆ ದಾಳಿ ನಡೆಸಿದ್ದರು.
ದಾಳಿಯಲ್ಲಿ 22 ಮಂದಿ ಸಿಬ್ಬಂದಿ ಪತ್ತೆ:
ದಾಳಿಯ ವೇಳೆ 22 ಯುವಕರು ಮತ್ತು ಯುವತಿಯರು ಕಾಲ್ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದು, ಕಂಪ್ಯೂಟರ್ ಬಳಸಿ ವಾಟ್ಸಾಪ್ ಚಾಟ್ ಹಾಗೂ ಫೋನ್ ಕರೆಗಳ ಮೂಲಕ ಗ್ರಾಹಕರೊಂದಿಗೆ ಸಂಪರ್ಕದಲ್ಲಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಸಂಸ್ಥೆ ತನ್ನನ್ನು ಷೇರು ಮಾರುಕಟ್ಟೆ ಸಂಶೋಧನಾ ಕಂಪನಿ ಎಂದು ಪರಿಚಯಿಸಿಕೊಂಡು, ಇಂಟ್ರಾಡೇ ಮತ್ತು ಇಕ್ವಿಟಿ ಟ್ರೇಡಿಂಗ್ನಲ್ಲಿ ಹೂಡಿಕೆಗಳಿಗೆ ಅವಕಾಶಗಳಿವೆ ಎಂದು ಹೇಳಿ ಜನರನ್ನು ಸಂಪರ್ಕಿಸುತ್ತಿತ್ತು.
ಕಂಪ್ಯೂಟರ್ಗಳಲ್ಲಿ ಪತ್ತೆಯಾದ ಚಾಟ್ಗಳ ಪ್ರಕಾರ, ಕಂಪನಿಯ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಗ್ರಾಹಕರುಗಳಿಗೆ ಭರವಸೆ ನೀಡಲಾಗುತ್ತಿತ್ತು. ನಂತರ ಹಣವನ್ನು ನಿರ್ದಿಷ್ಟ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲು ಸೂಚಿಸಲಾಗುತ್ತಿತ್ತು.
ಪ್ರಾಥಮಿಕ ತನಿಖೆಯ ಪ್ರಕಾರ, ಪಾವತಿ ಲಿಂಕ್ಗಳನ್ನು ಕಳುಹಿಸಿ ಮತ್ತು ಕಂಪನಿಯ ಖಾತೆಗಳ ಜೊತೆಗೆ ಇನ್ನೂ 18 ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸುವ ಮೂಲಕ ಕನಿಷ್ಠ 1.02 ಕೋಟಿ ರೂ. ವಂಚನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸೈಬರ್ ಕ್ರೈಂ ವರದಿ ಪೋರ್ಟಲ್ನಲ್ಲಿ ಈ ಖಾತೆಗಳನ್ನು ಪರಿಶೀಲಿಸಿದಾಗ ದೇಶದ ವಿವಿಧ ಭಾಗಗಳಿಂದ ಕನಿಷ್ಠ ಐದು ಸೈಬರ್ ವಂಚನೆ ಪ್ರಕರಣಗಳು ಈ ಖಾತೆಗಳೊಂದಿಗೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ.
ಬಂಧಿತ ಆರೋಪಿಗಳನ್ನು ಶಿವಮ್ ವಿನೋದಕುಮಾರ್ ದುಬೆ (29) ಮತ್ತು ಸುಜಿತ್ ಮಸಿಚರಣ್ ವರಿಮಿಕಿ (30) ಎಂದು ಗುರುತಿಸಲಾಗಿದ್ದು, ಇಬ್ಬರೂ ಜಿಲ್ಲೆಯ ಠಾಣೆ ನಿವಾಸಿಗಳಾಗಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಅವನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
