Homeರಾಷ್ಟ್ರೀಯತಕ್ಷಣವೇ ಇರಾನ್‌ ತೊರೆಯಲು ಭಾರತೀಯರಿಗೆ ಸೂಚನೆ

ತಕ್ಷಣವೇ ಇರಾನ್‌ ತೊರೆಯಲು ಭಾರತೀಯರಿಗೆ ಸೂಚನೆ

Indians advised to leave Iran immediately

ನವದೆಹಲಿ, ಜೂ.8- ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ತಕ್ಷಣವೇ ಆ ದೇಶವನ್ನು ತೊರೆಯುವಂತೆ ಸಲಹೆ ನೀಡಿದೆ.

ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಂಘರ್ಷದ ಸಾಧ್ಯತೆಯನ್ನು ಪರಿಗಣಿಸಿ, ಭಾರತೀಯ ನಾಗರಿಕರು ಇರಾನ್‌‍ನಲ್ಲಿ ತಮ್ಮ ಸುರಕ್ಷತೆಯ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕೆಂದು ಮತ್ತು ಸಾಧ್ಯವಾದಷ್ಟು ಬೇಗ ದೇಶವನ್ನು ತೊರೆಯಬೇಕೆಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ ನೀಡಿದೆ.

ಇರಾನ್‌ಗೆ ಅಗತ್ಯವಿಲ್ಲದ ಪ್ರಯಾಣವನ್ನು ಮಾಡದಂತೆಯೂ ಸರ್ಕಾರವು ಭಾರತೀಯರಿಗೆ ಸೂಚಿಸಿದೆ. ಇರಾನ್‌ನಲ್ಲಿರುವ ಭಾರತೀಯ ನಾಗರಿಕರು ಅಲ್ಲಿನ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಮತ್ತು ಅಲ್ಲಿನ ಹೈ ಕಮಿಷನ್‌ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಇರಾನ್‌ ಮತ್ತು ಇಸ್ರೇಲ್‌ ನಡುವಿನ ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ, ಈ ಪ್ರದೇಶದಲ್ಲಿರುವ ಭಾರತೀಯರ ಸುರಕ್ಷತೆಗಾಗಿ ಭಾರತವು ಈ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದೆ. ಪ್ರಸ್ತುತ ಇರಾನ್‌ನಲ್ಲಿರುವವರು ಲಭ್ಯವಿರುವ ಯಾವುದೇ ಮಾರ್ಗಗಳ ಮೂಲಕ ದೇಶವನ್ನು ತೊರೆಯುವಂತೆಯೂ ಅದು ಒತ್ತಾಯಿಸಿದೆ.

ಈ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಇರಾನ್‌ಗೆ ಯಾವುದೇ ಪ್ರಯಾಣವನ್ನು ಮಾಡದಿರುವಂತೆ ಎಲ್ಲಾ ಭಾರತೀಯ ಪ್ರಜೆಗಳಿಗೆ ರಾಯಭಾರ ಕಚೇರಿಯು ತನ್ನ ಹಿಂದಿನ ಸಲಹೆಯನ್ನು ಪುನರುಚ್ಚರಿಸುತ್ತದೆ. ಪ್ರಸ್ತುತ ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳು ಲಭ್ಯವಿರುವ ಸಾರಿಗೆ ವಿಧಾನಗಳ ಮೂಲಕ ದೇಶವನ್ನು ತೊರೆಯಲು ಸೂಚಿಸಲಾಗಿದೆ ಎಂದು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಫೆಬ್ರವರಿ 28 ರಂದು ಇರಾನ್‌ ಮೇಲೆ ಅಮೆರಿಕ-ಇಸ್ರೇಲ್‌ ದಾಳಿಯಿಂದಾಗಿ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಾದ ನಂತರ, ಭಾರತವು ನಾಗರಿಕರು ಪ್ರಯಾಣವನ್ನು ತಪ್ಪಿಸಿ ಸಾಧ್ಯವಾದಷ್ಟು ಬೇಗ ದೇಶವನ್ನು ತೊರೆಯುವಂತೆ ಒತ್ತಾಯಿಸಿ ಹಲವಾರು ಸಲಹೆಗಳನ್ನು ನೀಡಿತ್ತು.

ಯುದ್ಧ ಪ್ರಾರಂಭವಾದಾಗಿನಿಂದ 1,800 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ದೇಶದಿಂದ ಸ್ಥಳಾಂತರಿಸಲಾಗಿತ್ತು. ಫೆಬ್ರವರಿ 28 ರಿಂದ ಪಶ್ಚಿಮ ಏಷ್ಯಾದಿಂದ ಸುಮಾರು 6.49 ಲಕ್ಷ ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಏಪ್ರಿಲ್‌‍ನಲ್ಲಿ ತಿಳಿಸಿದ್ದು, ಕೊಲ್ಲಿ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅಲ್ಲಿ ವಾಸಿಸುವ ಬಹುಸಂಖ್ಯೆಯ ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದೆ ಎಂದು ಹೇಳಿದೆ.

ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್‌ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್‌ ಇಸ್ರೇಲ್‌ ಗುರಿಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದ ನಂತರ ಇಂದು ಉದ್ವಿಗ್ನತೆ ತೀವ್ರವಾಗಿ ಹೆಚ್ಚಾಯಿತು. ಯುದ್ಧವನ್ನು ಕೊನೆಗೊಳಿಸಲು ಒಪ್ಪಂದಕ್ಕೆ ಅವಕಾಶ ನೀಡಲು ಲೆಬನಾನ್‌ನಲ್ಲಿ ದಾಳಿಗಳನ್ನು ನಿಲ್ಲಿಸುವಂತೆ ಟ್ರಂಪ್‌ ಇಸ್ರೇಲ್‌‍ಗೆ ನಿರ್ದೇಶನ ನೀಡಿದ್ದರೂ ಸಹ ಪ್ರತೀಕಾರವಾಗಿ ಇಸ್ರೇಲ್‌ ಕ್ಷಿಪಣಿ ದಾಳಿ ನಡೆಸಿ, ಇರಾನ್‌ನಲ್ಲಿ 20 ಸ್ಥಳಗಳ ಮೇಲೆ ದಾಳಿ ನಡೆಸಿದೆ.

ಇರಾನ್‌ ಬೆಂಬಲಿತ ಹೌತಿಗಳ ನೆಲೆಯಾದ ಯೆಮೆನ್‌ನಿಂದ ಬಂದ ಕ್ಷಿಪಣಿಯನ್ನು ತಡೆಹಿಡಿದಿರುವುದಾಗಿ ಇಸ್ರೇಲ್‌ ಹೇಳಿದೆ. ಇರಾನ್‌ನ ಮಶಹರ್ನಲ್ಲಿರುವ ಪೆಟ್ರೋಕೆಮಿಕಲ್‌ ಸೌಲಭ್ಯದ ಮೇಲೆಯೂ ಇಸ್ರೇಲ್‌ ದಾಳಿ ನಡೆಸಿ ಭಾಗಶಃ ಹಾನಿಯನ್ನುಂಟುಮಾಡಿದೆ. ಏತನಧ್ಯೆ, ಇಸ್ರೇಲ್‌ ಮತ್ತು ಇರಾನ್‌ನ ಹೊಸ ದಾಳಿಗಳು ಟೆಹ್ರಾನ್‌ನೊಂದಿಗಿನ ತನ್ನ ಆಡಳಿತದ ಶಾಂತಿ ಮಾತುಕತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ.
ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ನಿರ್ಣಾಯಕ ಹಾರ್ಮುಜ್‌ ಜಲಸಂಧಿಯನ್ನು ಮತ್ತೆ ತೆರೆಯಲು ಪ್ರಾಥಮಿಕ ಒಪ್ಪಂದಕ್ಕೆ ಹತ್ತಿರವಾಗಿದ್ದೇವೆ ಎಂದು ಅಮೆರಿಕ ಮತ್ತು ಇರಾನ್‌ ಹೇಳಿದ್ದರೂ, ಅವರು ಪದೇ ಪದೇ ದಾಳಿಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ, ಇತ್ತೀಚಿನ ದಿನಗಳಲ್ಲಿ ಅಮೆರಿಕದ ನೆಲೆಗಳನ್ನು ಹೊಂದಿರುವ ಹತ್ತಿರದ ಗಲ್‌್ಫ ರಾಷ್ಟ್ರಗಳ ಮೇಲಿನ ದಾಳಿಗಳು ಸೇರಿದಂತೆ ಉಲ್ಬಣಗೊಂಡಿಗೊಂಡಿದೆ.

RELATED ARTICLES

Latest News