ನವದೆಹಲಿ, ಜು.21- ಶಾಂತಿಯುತ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ದೆಹಲಿಯಲ್ಲಿ ಪೊಲೀಸರು ಮೇಲೆ ಲಾಠಿಚಾರ್ಜ್ ಮಾಡಿ, ಅಶ್ರುವಾಯು ಪ್ರಯೋಗಿಸಿ ದೌರ್ಜನ್ಯ ಎಸಗಿದ ಹಿನ್ನೆಲೆಯಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ 84 ನೇ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಇಂದು ಸಂಭ್ರಮದ ದಿನವಲ್ಲ. ಸರ್ಕಾರದಿಂದ ಉತ್ತರದಾಯಿತ್ವ ಕೇಳುವ ಹಾಗೂ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸುವ ದಿನ ಎಂದು ಹೇಳಿದ್ದಾರೆ.
ಸೋಮವಾರ ನಡೆದ ಸಂಸದ್ ಚಲೋ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳು ನ್ಯಾಯಕ್ಕಾಗಿ ನಡೆಸಿದ ಶಾಂತಿಯುತ ಪ್ರತಿಭಟನೆಗೆ ಸರ್ಕಾರ ಉತ್ತರ ನೀಡುವ ಬದಲು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗದ ಮೂಲಕ ಪ್ರತಿಕ್ರಿಯಿಸಿದೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದ ತಾಯಿ ಎಂದು ಕರೆಸಿಕೊಳ್ಳುವ ದೇಶದಲ್ಲಿ ಆಡಳಿತ ನಡೆಸುವ ಸರ್ಕಾರ ತನ್ನ ಯುವ ನಾಗರಿಕರನ್ನು ಹೀಗೆ ನಡೆಸಿಕೊಳ್ಳುವುದಿಲ್ಲ. ಈ ನೋವಿನ ಪರಿಸ್ಥಿತಿಯಲ್ಲಿ ಇಂದು ನನ್ನ ಹುಟ್ಟುಹಬ್ಬವನ್ನು ಆಚರಿಸದಿರಲು ತೀರ್ಮಾನಿಸಿದ್ದೇನೆ ಎಂದು ಖರ್ಗೆ ಹೇಳಿದ್ದಾರೆ. ತಮಗೆ ಶುಭಾಶಯ ಕೋರಿದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಬೆಂಬಲಿಗರು ಹಾಗೂ ದೇಶದ ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದ ಅವರು, ನಿಮ ಪ್ರೀತಿ ಮತ್ತು ಶುಭಾಶಯಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಆದರೆ ಇಂದು ಸಂಭ್ರಮಿಸುವ ದಿನವಲ್ಲ, ಸರ್ಕಾರದಿಂದ ಉತ್ತರದಾಯಿತ್ವ ಕೇಳುವ ದಿನ ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ಖರ್ಗೆ ಪ್ರಶ್ನೆಗಳು:
ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಧ್ವನಿ ಎತ್ತಿದಾಗ ಅವರಿಗೆ ಏಕೆ ಲಾಠಿ ಮತ್ತು ಅಶ್ರುವಾಯುವಿನಿಂದ ಉತ್ತರ ನೀಡಲಾಯಿತು? ಸಂಸತ್ ಪ್ರದೇಶವನ್ನು ಏಕೆ ಬಹುತೇಕ ಸೀಲ್ ಮಾಡಲಾಯಿತು? ಇಂಟರ್ನೆಟ್ ಸೇವೆಯನ್ನು ಏಕೆ ಸ್ಥಗಿತಗೊಳಿಸಲಾಯಿತು? ಪದೇಪದೇ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆಗಳಿಗೆ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಂಕಷ್ಟಕ್ಕೆ ಯಾರು ಹೊಣೆ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಈ ವಿಷಯದ ಕುರಿತು ಸಂಸತ್ನಲ್ಲಿ ಸಮಗ್ರ ಚರ್ಚೆಗೆ ತಕ್ಷಣ ಅವಕಾಶ ನೀಡಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹಾಗೂ ರಾಜಕೀಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಖರ್ಗೆ ಆಗ್ರಹಿಸಿದರು.ಸುರಕ್ಷಿತ ಡಿಜಿಟಲ್ ಪ್ರಶ್ನೆಪತ್ರಿಕೆ ಬ್ಯಾಂಕ್ ಹಾಗೂ ಯಾದೃಚ್ಛಿಕ (ರ್ಯಾಂಡಮೈಸ್ಡ್) ಪ್ರಶ್ನೆಪತ್ರಿಕೆ ವ್ಯವಸ್ಥೆಯೊಂದಿಗೆ 21ನೇ ಶತಮಾನಕ್ಕೆ ಹೊಂದುವ ವಿದ್ಯಾರ್ಥಿ-ಕೇಂದ್ರಿತ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಆರ್ಎಸ್ಎಸ್ನ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾದ, ಅರ್ಹತೆ ಆಧಾರಿತ ಸ್ವತಂತ್ರ ಶಿಕ್ಷಣ ವ್ಯವಸ್ಥೆ ನಿರ್ಮಾಣವಾಗಬೇಕು. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಪರೀಕ್ಷಾ ಅಕ್ರಮಗಳು ನಡೆದಾಗ ಕಡ್ಡಾಯ ಮರುಪರೀಕ್ಷೆ ಹಾಗೂ ವಿದ್ಯಾರ್ಥಿಗಳಿಗೆ ಪರಿಹಾರ ನೀಡುವಂತೆ ಕಾನೂನುಬದ್ಧ ರಕ್ಷಣೆಯನ್ನು ಕಲ್ಪಿಸಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ. ನಮ್ಮ ಮಕ್ಕಳ ಹಕ್ಕುಗಳನ್ನು ದಮನ ಮಾಡುವುದಲ್ಲ. ಅವರಿಗೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ. ಹುಟ್ಟು ಹಬ್ಬದ ಅಂಗವಾಗಿ ಶುಭ ಹಾರೈಸಲು ಅಭಿಮಾನಿಗಳು ಪುಷ್ಟಗುಚ್ಚ ನೀಡಲು ಮುಂದಾದಾಗ ಖರ್ಗೆ ಅವರು ಅದನ್ನು ನಿರಾಕರಿಸಿದ್ದಾರೆ.
ಕಾಂಗ್ರೆಸ್ನ ಟೀಕೆ:
ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ದೌರ್ಜನ್ಯ ಯುವಕರ ಮೇಲೆ ಕೇಂದ್ರ ಸರ್ಕಾರ ನಡೆಸಿದ ಅನ್ಯಾಯಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ.ಅಧಿಕಾರದಲ್ಲಿರುವವರ ಆದೇಶದ ಮೇರೆಗೆ ದೇಶದ ಯುವಜನರ ಮೇಲೆ ಲಾಠಿ ಬೀಸಿದವರು ಒಂದು ದಿನ ಸಂವಿಧಾನದ ಲಾಠಿಯನ್ನು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
