ಬೆಂಗಳೂರು,ಫೆ.16- ದೇಶವನ್ನೇ ಬೆಚ್ಚಿ ಬೀಳಿಸಿದ್ದ 400 ಕೋಟಿ ಹಣ ದರೋಡೆ ಪ್ರಕರಣಕ್ಕೆ ರೋಚಕ ತಿರುವು ಪಡೆದುಕೊಂಡಿದ್ದು, ಹಣ ದರೋಡೆಯಾಗಿರುವುದಕ್ಕೆ ಈತನಕ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಇದು ಕಟ್ಟುಕಥೆ ಎಂಬುವುದು ಮಹಾರಾಷ್ಟ್ರ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಕರ್ನಾಟಕ- ಗೋವಾ ಗಡಿಯಲ್ಲಿ ಕಳೆದ ಅ.25 ರಂದು 400 ಕೋಟಿ ಹಣ ದರೋಡೆ ನಡೆದಿದೆ ಎಂಬುವುದೇ ಸುಳ್ಳು ಎಂಬುವುದು ದೃಢಪಟ್ಟಿದೆ.ಅಂದು ಬೆಳಗಾವಿ ಸಮೀಪದ ಗಡಿ ಪ್ರದೇಶದಲ್ಲಿ ಹಣ ಸಾಗಿಸುತ್ತಿದ್ದ ಎರಡು ಕಂಟೈನರ್ಗಳನ್ನು ದರೋಡೆ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೂರಿನ ಆಧಾರದ ಮೇಲೆ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಎಸ್ಐಟಿ ರಚಿಸಿತ್ತು.ಎಸ್ಐಟಿ ಪೊಲೀಸರು ಸತತವಾಗಿ ಕಾರ್ಯಾಚರಣೆ ಕೈಗೊಂಡು ಹಲವು ಮಾಹಿತಿಗಳನ್ನು ಕಲೆ ಹಾಕಿದರಾದರೂ ಬೆಳಗಾವಿಯ ಖಾನಾಪುರ ತಾಲ್ಲೂಕಿನ ಚೋರ್ಲಾಘಾಟ್ ಬಳಿ ಇಷ್ಟೊಂದು ಭಾರಿ ಮೊತ್ತದ ಹಣ ದರೋಡೆಯಾಗಿರುವ ಬಗ್ಗೆ ಯಾವುದೇ ಕುರುಹು ಸಿಗಲಿಲ್ಲ.
ದೂರು ನೀಡಿದ್ದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ನೀಡಿದ ಹೇಳಿಕೆಗೂ ದರೋಡೆ ನಡೆದ ಸ್ಥಳಕ್ಕೂ ಯಾವುದೇ ಸಾಮ್ಯತೆ ಕಂಡು ಬಂದಿಲ್ಲ. ಅಲ್ಲದೇ ಆತನ ಕರೆ ವಿವರಗಳನ್ನು ಪರಿಶೀಲಿಸಿದರಾದರೂ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ.ಹಾಗಾಗಿ ಚೋರ್ಲಾಘಾಟ್ನಲ್ಲಿ ಹಣ ದರೋಡೆ ನಡೆದಿದೆ ಎಂಬುವುದು ಸುಳ್ಳು ಎಂಬ ದೃಢನಿರ್ಧಾರಕ್ಕೆ ಎಸ್ಐಟಿ ಬಂದಿದೆ.
ಈ ಪ್ರಕರಣ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಇದೀಗ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ಸಾಕ್ಷಿಗಳ ಕೊರತೆ ಹಿನ್ನಲೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಎಸ್ಐಟಿ ಪೊಲೀಸರು ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ ದಾಖಲೆಗಳು ನನ್ನ ಬಳಿ ಇವೆ. ಆ ದಾಖಲೆಗಳ ಆಧಾರದಲ್ಲಿ ಮರು ತನಿಖೆ ನಡೆಸಬೇಕೆಂದು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಂದೀಪ್ ದತ್ತಾ ಪಾಟೀಲ್ ಒತ್ತಾಯಿಸಿದ್ದಾರೆ.
ಘಟನೆ ವಿವರ:
ಬೆಳಗಾವಿಯ ಚೋರ್ಲಾಘಾಟ್ ಪ್ರದೇಶದಲ್ಲಿ ಕಳೆದ ಅ.25 ರಂದು ಮಹಾರಾಷ್ಟ್ರದ ನಾಸಿಕ್ ಮೂಲದ ಉದ್ಯಮಿ ಸಂದೀಪ್ ದತ್ತಾ ಪಾಟೀಲ್ ಎಂಬಾತ 400 ಕೋಟಿ ಹಣ ದರೋಡೆಯಾಗಿದೆ ಎಂದು ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ದರೋಡೆಯಾದ ಹಣವು ಗುಜರಾತ್ ಮೂಲದ ಬಿಲ್ಡರ್ ಕಿಶೋರ್ ಸವಲಾ ಸೇಠ್ ಎಂಬುವವರಿಗೆ ಸೇರಿದ್ದಾಗಿದ್ದು, ಅದರಲ್ಲಿ ರದ್ದಾದ 2 ಸಾವಿರ ಮುಖಬಲೆಯ ನೋಟುಗಳು ಇದ್ದವು ಎಂದು ದೂರು ನೀಡಿ ಪೊಲೀಸರ ತನಿಖೆಯ ಹಾದಿ ತಪ್ಪಿಸಿದ್ದರು.ಇದೀಗ ಈ ದರೋಡೆಯಾಗಿರುವುದೇ ಸುಳ್ಳು ಎಂಬುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
