Homeರಾಷ್ಟ್ರೀಯವಿಜಯ್‌ ಪ್ರಧಾನಿ ಅಭ್ಯರ್ಥಿ ವಿಚಾರ : ಕಾಂಗ್ರೆಸ್‌‍-ಟಿವಿಕೆ ನಡುವೆ ಹೆಚ್ಚಿದ ಸಂಘರ್ಷ, ಸೆ.9ರ ಸಮನ್ವಯ ಸಭೆ

ವಿಜಯ್‌ ಪ್ರಧಾನಿ ಅಭ್ಯರ್ಥಿ ವಿಚಾರ : ಕಾಂಗ್ರೆಸ್‌‍-ಟಿವಿಕೆ ನಡುವೆ ಹೆಚ್ಚಿದ ಸಂಘರ್ಷ, ಸೆ.9ರ ಸಮನ್ವಯ ಸಭೆ

ಚೆನ್ನೈ, ಸೆ.5- 2029ರ ಲೋಕಸಭಾ ಚುನಾವಣೆಗೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್‌ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಪ್ರಯತ್ನಗಳಿಗೆ ಕಾಂಗ್ರೆಸ್‌ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೆಪ್ಟೆಂಬರ್‌ 9ರಂದು ತನ್ನ ಎರಡನೇ ಸಮನ್ವಯ ಸಭೆ ಕರೆದಿದೆ. ಈ ಬೆಳವಣಿಗೆ ರಾಜ್ಯದ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

2029ರ ಸಾರ್ವತ್ರಿಕ ಚುನಾವಣೆಯಲ್ಲಿ ಮುಖ್ಯಮಂತ್ರಿ ವಿಜಯ್‌ ಅವರನ್ನು ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಒತ್ತಾಯ ಟಿವಿಕೆ ಪಾಳಯದಲ್ಲಿ ಕೇಳಿಬರುತ್ತಿದೆ. ಆದರೆ, ಮಿತ್ರಪಕ್ಷವಾಗಿರುವ ಕಾಂಗ್ರೆಸ್‌ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರೇ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಪಟ್ಟುಹಿಡಿದಿದೆ.

ಟಿವಿಕೆ ರಾಹುಲ್‌ ಗಾಂಧಿ ಅವರನ್ನು ಬೆಂಬಲಿಸದಿದ್ದರೆ ಮೈತ್ರಿಕೂಟದಿಂದ ಹೊರಬರುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನೂ ಕಾಂಗ್ರೆಸ್‌ ನೀಡಿದೆ ಎಂದು ವರದಿಯಾಗಿದೆ.

ತಮಿಳುನಾಡು ಕಾಂಗ್ರೆಸ್‌ ನಾಯಕರು ವಿಜಯ್‌ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಪ್ರಸ್ತಾಪವನ್ನು ಅಭಿಮಾನಿಗಳ ಆಶಯಕ್ಕೆ ಸೀಮಿತವಾದ ವಿಚಾರ ಎಂದು ತಳ್ಳಿಹಾಕಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕಿ ಥರಾಹೈ ಕತ್ಬರ್ಟ್‌ ಈ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳೇ ಈ ಹಿಂದೆ ರಾಹುಲ್‌ ಗಾಂಧಿ ಅವರನ್ನು ಮೈತ್ರಿಕೂಟದ ಉದ್ದೇಶಿತ ಅಭ್ಯರ್ಥಿ ಎಂದು ಒಪ್ಪಿಕೊಂಡಿದ್ದಾರೆ. ವೈಯಕ್ತಿಕ ಶಾಸಕರ ಆಶಯಗಳು ಪಕ್ಷದ ಒಪ್ಪಿತ ನಾಯಕತ್ವದ ತಂತ್ರವನ್ನು ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೈತ್ರಿಯ ಭವಿಷ್ಯದ ಬಗ್ಗೆ ಕುತೂಹಲ

ಈ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೇ ಸೆಪ್ಟೆಂಬರ್‌ 9ರಂದು ನಡೆಯಲಿರುವ ಟಿವಿಕೆ ಸಮನ್ವಯ ಸಭೆ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಮೈತ್ರಿಕೂಟದ ಮುಂದಿನ ಕಾರ್ಯತಂತ್ರ ಹಾಗೂ ನಾಯಕತ್ವದ ವಿಚಾರಗಳ ಕುರಿತು ಚರ್ಚೆಯಾಗುವ ಸಾಧ್ಯತೆಯಿದ್ದು, ಮೈತ್ರಿಯ ಭವಿಷ್ಯದ ದಿಕ್ಕಿನ ಬಗ್ಗೆ ಸ್ಪಷ್ಟತೆ ದೊರೆಯಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸಿ. ಜೋಸೆಫ್‌ ವಿಜಯ್‌ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಸರ್ಕಾರ ರಚನೆಗೆ ಅಗತ್ಯವಿರುವ ಸ್ಪಷ್ಟ ಬಹುಮತ ಇಲ್ಲದ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ವಿದುತಲೈ ಚಿರುತೈಗಲ್‌ ಕಚ್ಚಿ (ವಿಸಿಕೆ), ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಹಾಗೂ ಎಡಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ.

ಸಭೆಗೂ ಮುನ್ನ ಶುಕ್ರವಾರ ಟಿವಿಕೆಯ ಪ್ರಮುಖ ಸಚಿವರಾದ ಎನ್‌. ಆನಂದ್‌, ಆಧವ್‌ ಅರ್ಜುನ, ಆರ್‌. ನಿರ್ಮಲ್‌ ಕುಮಾರ್‌ ಹಾಗೂ ಎ. ರಾಜಮೋಹನ್‌ ಅವರು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣುಗಂ ಮತ್ತು ಸಿಪಿಐ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡ್ಯನ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಇದಲ್ಲದೆ, ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ ಅವರನ್ನೂ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಎಡಪಕ್ಷಗಳು ಸರ್ಕಾರಕ್ಕೆ ಔಪಚಾರಿಕವಾಗಿ ಸೇರ್ಪಡೆಯಾಗುವಂತೆ ಟಿವಿಕೆ ನಾಯಕರು ಒತ್ತಡ ಹೇರಿದ್ದಾರೆ ಎಂದು ವರದಿಯಾಗಿದೆ.

RELATED ARTICLES
spot_img

Latest News