Saturday, April 27, 2024
Homeರಾಜ್ಯಆನ್‍ಲೈನ್ ರಮ್ಮಿ ಸಾಲ ತೀರಿಸಲು ಎಳನೀರು ಕಳ್ಳತನ

ಆನ್‍ಲೈನ್ ರಮ್ಮಿ ಸಾಲ ತೀರಿಸಲು ಎಳನೀರು ಕಳ್ಳತನ

ಬೆಂಗಳೂರು, ನ.22- ಆನ್‍ಲೈನ್ ರಮ್ಮಿ ಆಟಕ್ಕೆ ಮಾಡಿಕೊಂಡಿದ್ದ ಸಾಲ ತೀರಿಸಲು ರಾತ್ರಿ ವೇಳೆ ಎಳನೀರು ಕಳ್ಳತನ ಮಾಡಿ ಬೆಳಗ್ಗೆ ಮಾರಾಟ ಮಾಡುತ್ತಿದ್ದ ಟ್ಯಾಕ್ಸಿ ಚಾಲಕನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಮೋಹನ್ ಬಂಧಿತ ಆರೋಪಿ. ಈತ ನಗರದಲ್ಲಿ ವಾಸವಾಗಿದ್ದು, ಟ್ಯಾಕ್ಸಿ ಚಾಲಕ ವೃತ್ತಿ ಮಾಡುತ್ತಿದ್ದಾನೆ. ಆರೋಪಿ ಮೋಹನ್ ಈ ಹಿಂದೆ ಎಳನೀರು ವ್ಯಾಪಾರ ಮಾಡುತ್ತಿದ್ದನು. ಬಿಡುವಿನ ಸಮಯದಲ್ಲಿ ಆನ್‍ಲೈನ್‍ನಲ್ಲಿ ರಮ್ಮಿ ಆಟವಾಡಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಕಾರು ಬಾಡಿಗೆ ಪಡೆದು ಟ್ಯಾಕ್ಸಿ ಚಾಲಕ ವೃತ್ತಿ ಮಾಡುತ್ತಿದ್ದನು. ಕಾರಿನಲ್ಲಿ ಹೋಗುವಾಗ ಫುಟ್‍ಪಾತ್‍ನಲ್ಲಿ ಎಳನೀರನ್ನು ಸಂಗ್ರಹಿಸಿಟ್ಟಿರುವುದನ್ನು ಗಮನಿಸಿದ್ದಾನೆ. ಹೇಗಾದರೂ ಮಾಡಿ ಎಳನೀರನ್ನು ಕಳ್ಳತನ ಮಾಡಿ ಮಾರಾಟ ಮಾಡಿ ಬಂದ ಹಣದಿಂದ ಸಾಲ ತೀರಿಸಲು ನಿರ್ಧರಿಸಿದ್ದಾನೆ.

ನ. 6ರಂದು ಮಂಜುಳಾ ಅವರ ಪತಿ ರಾಜಣ್ಣ ಅವರು ಮಂಕುತಿಮ್ಮ ಪಾರ್ಕ್ ಹತ್ತಿರ ಫುಟ್‍ಪಾತ್ ಮೇಲೆ ಎಳನೀರು ವ್ಯಾಪಾರ ಮಾಡಿ ಉಳಿದ 1150 ಎಳನೀರನ್ನು ಟಾರ್ಪಲ್‍ನಿಂದ ಮುಚ್ಚಿ ಮನೆಗೆ ಹೋಗಿದ್ದರು. ಮಾರನೇ ದಿನ ಬೆಳಗ್ಗೆ ಬಂದು ನೋಡಿದಾಗ ಫುಟ್‍ಪಾತ್‍ನಲ್ಲಿದ್ದ ಎಳನೀರು ಮಾಯವಾಗಿತ್ತು.
ಯಾರೋ ಎಳನೀರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಅವರು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಜಾತಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಬೇಕು ಎಂಬುದು ಸಮುದಾಯದ ಅಭಿಪ್ರಾಯ: ಡಿ.ಕೆ.ಶಿವಕುಮಾರ್

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿ ಆರೋಪಿಯನ್ನು ಬಂಧಿಸಿ 8.75 ಲಕ್ಷ ರೂ. ಬೆಲೆಬಾಳುವ 90 ಎಳನೀರುಗಳು, ಒಂದು ರಾಯಲ್ ಎನ್‍ಫೀಲ್ಡ್ ದ್ವಿಚಕ್ರ ವಾಹನ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ರಾಹುಲ್ ಕುಮಾರ್ ಶಹಪುರ ವಾಡ್, ವಿವಿಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಾಗರಾಜು ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಸಂದೀಪ್ ಕುಮಾರ್ ನೇತೃತ್ವದ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತರಾದ ದಯಾನಂದ, ಅಪರ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್ ಅವರು ಶ್ಲಾಘಿಸಿದ್ದಾರೆ.

RELATED ARTICLES

Latest News