Sunday, April 28, 2024
Homeರಾಷ್ಟ್ರೀಯಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ, ಕರ್ನಾಟಕದ ಯೋಧನಿಗೆ ಗಂಭೀರ ಗಾಯ

ಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ, ಕರ್ನಾಟಕದ ಯೋಧನಿಗೆ ಗಂಭೀರ ಗಾಯ

ಶ್ರೀನಗರ,ಅ.27- ಜಮ್ಮುವಿನ ಅರ್ನಿಯಾ ಮತ್ತು ಆರ್‍ಎಸ್ ಪುರ ಸೆಕ್ಟರ್‌ಗಳ ಅಂತಾರಾಷ್ಟ್ರೀಯ ಗಡಿ (ಐಬಿ)ಯಲ್ಲಿರುವ ಐದು ಬಿಎಸ್‍ಎಫ್ ಪೋಸ್ಟ್‍ಗಳ ಮೇಲೆ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ದಾಳಿಯಲ್ಲಿ ಗಡಿ ಭದ್ರತಾ ಪಡೆಯ ಇಬ್ಬರು ಯೋಧರು, ಮೂವರು ನಾಗರೀಕರು ಗಾಯಗೊಂಡಿದ್ದಾರೆ.

ಕರ್ನಾಟಕ ಮೂಲದ ಬಿಎಸ್‍ಎಫ್ ಯೋಧ ಬಸವರಾಜ್.ಎಸ್.ಆರ್ ಮತ್ತು ಶೇರ್ ಸಿಂಗ್ ಎಂಬುವರು ತೀವ್ರವಾಗಿ ಗಾಯಗೊಂಡು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್‍ಎಸ್‍ಪುರ ಸೆಕ್ಟರ್‍ನ ಅಂತಾರಾಷ್ಟ್ರೀಯ ಗಡಿಭಾಗದ ಕದನ ವಿರಾಮ ಘೋಷಿತ ಪ್ರದೇಶದಲ್ಲಿ ಪಾಕಿಸ್ತಾನ ಈ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನಾ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ.

ರಾತ್ರಿ 8 ಗಂಟೆ ಸುಮಾರಿಗೆ ಅರ್ನಿಯಾ ಪ್ರದೇಶದಲ್ಲಿನ ಬಿಎಸ್‍ಎಫ್ ಪೋಸ್ಟ್‍ಗಳ ಮೇಲೆ ಪಾಕ್ ರೇಂಜರ್‍ಗಳು ಅಪ್ರಚೋದಿತ ಗುಂಡಿನ ದಾಳಿ ಪ್ರಾರಂಭಿಸಿದರು. ಮುಂಜಾನೆ 3 ಗಂಟೆವರೆಗೂ ಎರಡು ಕಡೆ ಭಾರೀ ಗುಂಡಿನ ದಾಳಿ ಕಾಳಗ ನಡೆದಿದ್ದು, ಪ್ರಸ್ತುತ ಗಡಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ.

ಲೂಟಿ ಹೊಡೆಯಲು ಬೆಂಗಳೂರಿನಲ್ಲಿ ಸುರಂಗ ಮಾರ್ಗ : ಬಿಜೆಪಿ ಆರೋಪ

ಗಾಯಗೊಂಡ ಯೋಧರನ್ನು ಚಿಕಿತ್ಸೆಗಾಗಿ ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅರ್ನಿಯಾ, ಸುಚ್ಟಗಢ್, ಸಿಯಾ, ಜಬೋವಾಲ್ ಮತ್ತು ಟ್ರೆವಾ ಪೋಸ್ಟ್‍ಗಳು ದಾಳಿಗೊಳಗಾಗಿವೆ ಎಂದು ಅವರು ತಿಳಿಸಿದ್ದಾರೆ. ಪಾಕಿಸ್ತಾನದ ರೇಂಜರ್‍ಗಳು ಜನವಸತಿ ಪ್ರದೇಶಗಳಲ್ಲಿ ಮಾರ್ಟರ್ ಶೆಲ್‍ಗಳನ್ನು ಹಾರಿಸಿದ್ದಾರೆ. ಇದರಿಂದ ಗಡಿ ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಪಾಕಿಸ್ತಾನದ ದಾಳಿಯಿಂದ ಅರ್ನಿಯಾ ಮತ್ತು ಜಬೋವಾಲ್ನಲ್ಲಿನ ಜನರು, ವಿಶೇಷವಾಗಿ ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತೊರೆಯುತ್ತಿದ್ದು, ಗಡಿಭಾಗದ ವಿವಿಧ ಗ್ರಾಮಗಳಲ್ಲಿ ಹಲವಾರು ಕುಟುಂಬಗಳು ಬಂಕರ್‍ಗಳಲ್ಲಿ ಆಶ್ರಯ ಪಡೆದಿವೆ ಎಂದು ವರದಿಗಳು ತಿಳಿಸಿವೆ. ಪಾಕಿಸ್ತಾನ ರೇಂಜರ್‍ಗಳು 82 ಮತ್ತು 120 ಎಂಎಂ ಮಾರ್ಟರ್ ಶೆಲ್‍ಗಳು ಮತ್ತು ಗುಂಡಿನ ದಾಳಿಯನ್ನು ಪ್ರಮುಖವಾಗಿ ವಲಸೆ ಕಾರ್ಮಿಕರನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ್ದಾರೆ ಇದರಿಂದ ಗಡಿ ಭಾಗದಲ್ಲಿರುವ ಕುಗ್ರಾಮಗಳನ್ನು ಗ್ರಾಮಸ್ಥರು ತೊರೆದಿದ್ದು, ಬಂಕರ್‍ಗಳು, ದೇವಸ್ಥಾನಗಳಲ್ಲಿ ಆಶ್ರಯ ಪಡೆದಿದ್ದಾರೆ.

ನಾವು ಇದುವರೆಗೂ ಗುಂಡಿನ ದಾಳಿ ಮತ್ತು ಶೆಲ್‍ಗಳನ್ನು ಟಿವಿಗಳಲ್ಲಿ ನೋಡುತ್ತಿದ್ದೆವು. ಕಳೆದ ರಾತ್ರಿ ಊಟ ಮಾಡುವ ವೇಳೆ ಏಕಾಏಕಿ ಭಾರೀ ಪ್ರಮಾಣದ ಶಬ್ದ ಕೇಳಿತು. ನೋಡು ನೋಡುತ್ತಿದ್ದಂತೆ ಗುಂಡುಗಳು ತೂರಿಬಂದವು.

ತಕ್ಷಣವೇ ಆಹಾರ ಸೇವಿಸುವುದನ್ನು ಬಿಟ್ಟು ಕುಟುಂಬದ ಸದಸ್ಯರೆಲ್ಲರೂ ಸುರಕ್ಷಿತ ತಾಣಗಳಿಗೆ ಓಡಿ ಹೋದೆವು ಎಂದು ಬಿಹಾರದ ಕಾರ್ಮಿಕ ಜೋಗಿಂದರ್ ಕುಮಾರ್ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 51 ಕಾರ್ಮಿಕರು ಅರ್ನಿಯಾದ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ದೇವರ ದಯೆಯಿಂದ ನಾವು ಜೀವಂತವಾಗಿ ಬದುಕಿದ್ದೇವೆ. ಭಾರತೀಯ ಸೇನೆ ಮತ್ತು ಸ್ಥಳೀಯರು ನಮಗೆ ಆಶ್ರಯ ನೀಡಿದ್ದಾರೆ. ಇದಕ್ಕಾಗಿ ನಾವು ಋಣಿಯಾಗಿರುತ್ತೇವೆ ಎಂದು ಮತ್ತೊಬ್ಬ ಕಾರ್ಮಿಕ ಹೇಳಿದ್ದಾನೆ.

ಪಾಕಿಸ್ತಾನ ಗಡಿಯಲ್ಲಿ ಅಕ್ಟೋಬರ್‍ನಲ್ಲಿ ಇದು ಎರಡನೇ ಕದನ ವಿರಾಮ ಉಲ್ಲಂಘನೆಯಾಗಿದೆ. ಅಕ್ಟೋಬರ್ 19ರಂದು, ಅರ್ನಿಯಾ ಸೆಕ್ಟರ್‍ನ ಐಬಿ ಉದ್ದಕ್ಕೂ ವಿಕ್ರಮ್ ಪೋಸ್ಟ್‍ನಲ್ಲಿ ಪಾಕಿಸ್ತಾನ ರೇಂಜರ್‍ಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಬಿಎಸ್‍ಎಫ್ ಯೋಧರು ಗಾಯಗೊಂಡಿದ್ದರು.

ಕನಕಪುರವನ್ನು ಬೆಂಗಳೂರಿಗೆ ವಿಚಾರ ಖಂಡಿಸಿದ ಅಶ್ವಥ್ ನಾರಾಯಣ್

ಭಾರತ ಮತ್ತು ಪಾಕಿಸ್ತಾನವು ಫೆಬ್ರವರಿ 25, 2021ರಂದು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದವು, ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ವಲಯಗಳಲ್ಲಿ ನಿಯಂತ್ರಣ ರೇಖೆಯ (ಎಲ್‍ಒಸಿ) ಉದ್ದಕ್ಕೂ ಕದನ ವಿರಾಮದ ಎಲ್ಲಾ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಗಮನಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ.

RELATED ARTICLES

Latest News