Monday, May 20, 2024
Homeರಾಷ್ಟ್ರೀಯಕಾಂಗ್ರೆಸ್‌ ಶಹಜಾದೆ ಇದ್ದಕ್ಕಿದ್ದಂತೆ ಅಂಬಾನಿ-ಅದಾನಿ ಜಪ ನಿಲ್ಲಿಸಿದ್ದೇಕೆ..? : ಮೋದಿ ವಾಗ್ದಾಳಿ

ಕಾಂಗ್ರೆಸ್‌ ಶಹಜಾದೆ ಇದ್ದಕ್ಕಿದ್ದಂತೆ ಅಂಬಾನಿ-ಅದಾನಿ ಜಪ ನಿಲ್ಲಿಸಿದ್ದೇಕೆ..? : ಮೋದಿ ವಾಗ್ದಾಳಿ

ಹೈದರಾಬಾದ್‌, ಮೇ 8-ಐದು ವರ್ಷದಿಂದ ಅಂಬಾನಿ ಮತ್ತು ಅದಾನಿಯನ್ನು ಬಯ್ಯುತ್ತಲೇ ಬಂದಿದ್ದ ಕಾಂಗ್ರೆಸ್‌ ಶಹಜಾದೆ (ರಾಹುಲ್‌ ಗಾಂಧಿ ) ರಾತ್ರೋರಾತ್ರಿ ಬಯ್ಯೋದನ್ನೇ ನಿಲ್ಲಿಸಿದ್ದಾರೆ. ಅವರಿಂದ ಎಷ್ಟು ಕಪ್ಪು ಹಣ ಇವರಿಗೆ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ.

ತೆಲಂಗಾಣದ ರಾಜನ್ನ ಸಿರಿಸಿಲ್ಲ ಜಿಲ್ಲೆಯ ವೇಮುಲವಾಡ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ನರೇಂದ್ರಮೋದಿ, ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಅಂಬಾನಿ, ಅದಾನಿ ಜಪ ಮಾಡುವುದನ್ನು ರಾಹುಲ್‌ ಗಾಂಧಿ ನಿಲ್ಲಿಸಿದ್ದು ಯಾಕೆ ಎಂದು ಕೇಳಿದ್ದಾರೆ. ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಬಳಸುತ್ತಿದ್ದ ಅಂಬಾನಿ, ಅದಾನಿ ಅಸ್ತ್ರವನ್ನು ಅವರಿಗೇ ತಿರುಗಿಸಿದ್ದಾರೆ.

ಕಾಂಗ್ರೆಸ್‌ನ ಶಹಜಾದೆ ಕಳೆದ 5 ವರ್ಷದಿಂದ ಬೆಳಗ್ಗೆಯಾದರೆ ಜಪ ಮಾಡುತ್ತಿದ್ದ ರಫೇಲ್‌ ವಿಚಾರ ಬಿದ್ದುಹೋಯಿತು?. ಐವರು ಉದ್ಯಮಿಗಳು, ಐವರು ಉದ್ಯಮಿಗಳು ಎಂದು ಐದು ವರ್ಷದಿಂದ ಒಂದೇ ಜಪ ಮಾಡುತ್ತಿದ್ದರು. ಬಳಿಕ ಅಂಬಾನಿ ಅಡಾನಿ, ಅಂಬಾನಿ ಅಡಾಣಿ, ಅಂಬಾನಿ ಅಡಾಣಿ ಎಂದು ಹೇಳೋಕೆ ಶುರು ಮಾಡಿದರು?

ಚುನಾವಣೆ ಘೋಷಣೆ ಆದ ಬಳಿಕ ಅಂಬಾನಿ ಅದಾಣಿ ಅವರನ್ನು ಬಯ್ಯೋದು ನಿಲ್ಲಿಸಿ ಬಿಟ್ಟರು. ಅಂಬಾನಿ, ಅದಾನಿಯಿಂದ ನೀವು ಎಷ್ಟು ಹಣ ಪಡೆದಿದ್ದೀರಿ ಹೇಳಿ? ರಾತ್ರೋರಾತ್ರಿ ಇವರು ಅಂಬಾನಿ ಅಡಾಣಿ ಬಯ್ಯೋದನ್ನು ನಿಲ್ಲಿಸಿದ್ದಾರೆಂದರೆ ಏನೋ ಇರಬೇಕು. ಯಾವುದೋ ಕಳ್ಳ ಮಾಲು ಟೆಂಪೋದೊಳಗೆ ತುಂಬಿ ಬಂದಿರಬೇಕು ಎಂದು ನರೇಂದ್ರಮೋದಿ ಶಂಕಿಸಿದ್ದಾರೆ.

ಪ್ರಧಾನಿ ಮೋದಿ ಅವರು ಸಿರಿಸಿಲ್ಲ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಆರಂಭಿಸುವ ಮುನ್ನ ವೇಮುಲವಾಡದ ರಾಜನ್ನ ದೇವಸ್ಥಾನದಲ್ಲಿ ನಂದಿಯ ದರ್ಶನ ಮಾಡಿದರು. ದರಾಬಾದ್‌ನಿಂದ ಇಲ್ಲಿಗೆ ಬಂದ ಮೋದಿ, ಬಳಿಕ ರಾಜಂಪೇಟಾಗೆ ತೆರಳಲಿದ್ದಾರೆ.ಬಳಿಕ ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆ ಮತ್ತು ವಿಜಯವಾಡ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಇಂದು ತೆಲಂಗಾಣದಲ್ಲಿ ಪ್ರತ್ಯೇಕವಾಗಿ ಚುನಾವಣಾ ಪ್ರಚಾರ ಸಭೆ ನಡೆಸುತ್ತಿದ್ದಾರೆ.

RELATED ARTICLES

Latest News