ಬೆಂಗಳೂರು, ಮೇ 26- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಮಾಧ್ಯಮಗಳ ಸರಣಿ ಪ್ರಶ್ನೆಗಳಿಗೆ ಉತ್ತರ ನೀಡದೇ, ನಗುತ್ತಲೇ ತೆರಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಬೆಳಗ್ಗೆ 11 ಗಂಟೆಗೆ ದೆಹಲಿಯ ಎಐಸಿಸಿ ಕಚೇರಿ ಇಂದಿರಾ ಭವನದಲ್ಲಿ ನಿಗದಿಯಾಗಿದ್ದ ಹೈ ವೊಲ್ಟೇಜ್ ಸಭೆಗೆ ಸಿಎಂ ಸಿದ್ದರಾಮಯ್ಯ ತೆರಳಿದರು. ಇತ್ತ ದೆಹಲಿಯ ತಮ ನಿವಾಸದಿಂದ ಡಿ.ಕೆ.ಶಿವಕುಮಾರ್ ಕರ್ನಾಟಕ ಭವನಕ್ಕೆ ಆಗಮಿಸಿದರು.
ಅವರನ್ನು ಮುತ್ತಿಕೊಂಡ ಮಾಧ್ಯಮದವರು, ಸಭೆಯ ಬಗ್ಗೆ ಪ್ರಶ್ನೆಗಳ ಸುರಿಮಳೆ ಗೈದರು. ಇದ್ಯಾವುದಕ್ಕೂ ಉತ್ತರ ನೀಡದೆ ಡಿ.ಕೆ.ಶಿವಕುಮಾರ್ ನಗುತ್ತಲೇ ತಮ ಪಾಡಿಗೆ ತಾವು ಮುಂದೆ ಹೆಜ್ಜೆ ಹಾಕಿದರು.
ಮಾಧ್ಯಮದವರು ಹೈ ವೋಲ್ಟೇಜ್ ಮೀಟಿಂಗ್ ಬಗ್ಗೆ ಪ್ರಶ್ನೆ ಕೇಳಿದರೆ, ಡಿ.ಕೆ.ಶಿವಕುಮಾರ್, ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್ ಕರ್ನಾಟಕದ ಪರವಾಗಿ ತೀರ್ಪು ನೀಡಿದೆ. ಅದರ ಬಗ್ಗೆ ನಿಮಗೆ ಮಾಹಿತಿ ಇದೆಯೇ ಎಂದು ಮರುಪ್ರಶ್ನಿಸಿದರು. ಸಭೆಯ ಬಗ್ಗೆ ಎಷ್ಟೇ ಪ್ರಶ್ನೆ ಕೇಳಿದರೂ ಉತ್ತರ ನೀಡಲಿಲ್ಲ, ನಗುತ್ತಲೇ ಮುಂದೆ ಹೋದರು.
ಇದಕ್ಕೂ ಮುನ್ನ ತಮ ಮನೆಯ ಬಳಿ ಮಾಧ್ಯಮದವರನ್ನು ಕಂಡ ಡಿ.ಕೆ.ಶಿವಕುಮಾರ್ ನೀವು ಇಲ್ಲಿಯವರೆಗೂ ಏಕೆ? ಬಂದಿದ್ದೀರಾ ಎಂದು ನಯವಾಗಿಯೇ ಗದರಿದರು. ನೀವು ಮುಖ್ಯಮಂತ್ರಿಯಾಗುತ್ತೀರಾ ಎಂದು ಪ್ರಶ್ನಿಸಿದಾಗ, ಅದಕ್ಕೂ ನಗುತ್ತಲೇ ಯಾವುದೇ ಪ್ರತಿಕ್ರಿಯೆ ನೀಡದೆ ಪ್ರಯಾಣ ಮುಂದುವರೆಸಿದರು.
