ಬೆಂಗಳೂರು, ಮೇ 26- ನಾಯಕತ್ವ ವಿವಾದ ಕುರಿತಂತೆ ದೆಹಲಿಯಲ್ಲಿ ಹೈ ವೋಲ್ಟೇಜ್ ಸಭೆಗೂ ಮುನ್ನ ಪ್ರತಿಕ್ರಿಯೆ ನೀಡಲು ನಿರಾಕರಿಸುವ ಮೂಲಕ ಕಾಂಗ್ರೆಸ್ ನಾಯಕರು ಮೌನ ಸಂಗ್ರಾಮ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಅಗಮಿಸಿದ್ದಕ್ಕಾಗಿ ಕರ್ನಾಟಕ ಭವನದಲ್ಲಿ ಅವರಿಗೆ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಬಳಿಕ ಅಲ್ಲಿಂದ ಮುಂದೆ ಹೋಗಲು ಹೆಜ್ಜೆ ಹಾಕಿದ ಸಿದ್ದರಾಮಯ್ಯ ಅವರ ಸುತ್ತಲೂ ನೂರಾರು ಕ್ಯಾಮೆರಾ, ಮೈಕುಗಳು ಎದುರಾದವು.
5 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸುತ್ತೀರಾ? ಇವತ್ತಿನ ಸಭೆಯಲ್ಲಿ ಯಾವ ನಿರ್ಣಯವಾಗಲಿವೆೆ? ನಿಮ ನಿಲುವುಗಳೇನು? ಎಂಬೆಲ್ಲಾ ಪ್ರಶ್ನೆಗಳು ಎದುರಾಗುತ್ತಲೇ ಇದ್ದವು. ಯಾವುದಕ್ಕೂ ಪ್ರತಿಕ್ರಿಯಿಸದೇ ಸಿದ್ದರಾಮಯ್ಯ ಕಾರಿನತ್ತಾ ಹೆಜ್ಜೆ ಹಾಕಿದರು.
ಅಲ್ಲಿಂದ ಕರ್ನಾಟಕ ಭವನದಲ್ಲೂ ಮಾಧ್ಯಮದವರು ಸುತ್ತುವರೆದರು. ಮಾತನಾಡುವ ಬದಲಾಗಿ ಸಿದ್ದರಾಮಯ್ಯ ಏಯ್ ದಾರಿ ಬಿಡಿ ಎಂದರೆ… ಎಂದು ಗದರುವ ಮೂಲಕ ತಮ ಪಾಡಿಗೆ ತಾವು ಮುಂದೆ ಹೆಜ್ಜೆ ಹಾಕಿದರು. ಪೊಲೀಸ್ ಅಧಿಕಾರಿಗಳು ಅವರಿಗೆ ದಾರಿ ಮಾಡಿಕೊಡಲು ಹರಸಾಹಸ ಪಟ್ಟರು.
ಇದಕ್ಕೂ ಮೊದಲು ದೆಹಲಿಯಲ್ಲಿ ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಕ್ಕೆ ಉತ್ತರ ನೀಡಲಾಗದೆ ತಮ ಪಾಡಿಗೆ ತಾವು ತೆರಳಿದರು.
ಸಚಿವರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್ ಸುದ್ದಿಗಾರರ ಜೊತೆ ಮಾತನಾಡಿದರಾದರೂ ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧ, ಹೆಚ್ಚಿನ ಮಾತನಾಡಲು ತಮಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿ ನುಣುಚಿಕೊಂಡರು.
