ಬೆಂಗಳೂರು,ಜು.11- ರಾಜಾಜಿನಗರ 5ನೇ ಬ್ಲಾಕ್ನಲ್ಲಿ ಪ್ರತಿಷ್ಠಿತ ಕೈಗಾರಿಕಾ ವಸಾಹತು ಇರುವ ಪ್ರದೇಶ, ನೂರಾರು ಕಂಪನಿಗಳಿವೆ, ಸಾವಿರಾರು ಜನ ಇಲ್ಲಿ ಕೆಲಸ ಮಾಡುತ್ತಾರೆ. ಸಬ್ರಿಜಿಸ್ಟ್ರಾರ್ ಕಚೇರಿಗೆ ತೆರಳುವ ಮಾರ್ಗದಲ್ಲಿರುವ ಕಾಂಪೌಂಡ್ ಗೋಡೆಯೊಂದು ಸಂಪೂರ್ಣ ಶಿಥಿಲಗೊಂಡಿದೆ.
ಇಲ್ಲಿ ಪ್ರತಿದಿನ ನೂರಾರು ಸಾರ್ವಜನಿಕರು, ವಾಹನ ಸವಾರರು ಓಡಾಡುತ್ತಿರುತ್ತಾರೆ. ಯಾವಾಗ, ಯಾರ ಮೇಲೆ ಬಿದ್ದು, ಯಾವ ಅನಾಹುತವನ್ನು ಉಂಟು ಮಾಡುತ್ತದೆ ಎಂಬ ಆತಂಕ ಎದುರಾಗಿದೆ.ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಹಲವರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಇನ್ನೂ ಮಾಸಿಲ್ಲ.
ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಆಗ್ರೋಫುಡ್್ಸಗೆ ಹೊಂದಿಕೊಂಡಂತಿರುವ ಕಾಂಪೌಂಡ್ ಗೋಡೆ ಶಿಥಿಲಗೊಂಡು ಅದೆಷ್ಟೋ ವರ್ಷಗಳಾಗಿವೆ. ಅದೇ ರೀತಿ ಸುಮಾರು 200 ಮೀಟರ್ನಷ್ಟು ಉದ್ದದ ಕಲ್ಲಿನ ಗೋಡೆ ಹಾಳಾಗಿ ಸಂಪೂರ್ಣವಾಗಿ ಬಾಗಿದೆ. ಹಲವೆಡೆ ಬಿದ್ದು ಹೋಗಿದೆ. ಆದರೆ ಈವರೆಗೆ ಯಾರೂ ದುರಸ್ಥಿಯ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.
ಇಲ್ಲಿ ನಡೆದಾಡುವವರು, ವಾಹನ ಸವಾರರ ಮೇಲೆ ಗೋಡೆ ಬಿದ್ದರೂ ಬೀಳಬಹುದು.
ಗೋಡೆ ಬಿದ್ದು ಅನಾಹುತಗಳಾದ ಮೇಲೆ ಪರಿತಪಿಸುವುದಕ್ಕಿಂತ ಮೊದಲೇ ಎಚ್ಚೆತ್ತುಕೊಂಡು ಕಾಂಪೌಂಡ್ ಗೋಡೆಯನ್ನು ಸೂಕ್ತ ರೀತಿಯಲ್ಲಿ ರಿಪೇರಿ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
