ಬೆಂಗಳೂರು,ಮಾ.12- ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಂಪುಟದಿಂದ ವಜಾ ಮಾಡುವವರೆಗೂ ಆರೋಗ್ಯ ಇಲಾಖೆ ಸುಧಾರಿಸುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ತಮ ಎಕ್್ಸ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ದಿನೇಶ್ ಗುಂಡೂರಾವ್ ಅವರನ್ನು ಅನಾರೋಗ್ಯ ಸಚಿವ ಎಂದು ಜರಿದಿದ್ದಾರೆ. ದಿನಬೆಳಗಾದರೆ ಒಂದೊಂದು ಹೊಸ ಎಡವಟ್ಟುಗಳೊಂದಿಗೆ ಸುದ್ದಿ ಆಗುತ್ತಿರುವ ಆರೋಗ್ಯ ಇಲಾಖೆ, ಇವತ್ತು 230 ಸಮುದಾಯ ಆರೋಗ್ಯ ಕೇಂದ್ರಗಳನ್ನು ಕೆಳದರ್ಜೆಗಿಳಿಸುವ ಆಘಾತಕಾರಿ ನಡೆಗೆ ಸುದ್ದಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಿಎಚ್ಸಿಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಏಕಾಏಕಿ ತಜ್ಞ ವೈದ್ಯರನ್ನು ತಾಲ್ಲೂಕು ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಿದರೆ, ಆರೋಗ್ಯ ಸೇವೆ ಅರಿಸಿ ಸಿಎಚ್ಸಿಗಳಿಗೆ ದಿನನಿತ್ಯ ಭೇಟಿ ನೀಡುವ ನೂರಾರು ಹೊರರೋಗಿಗಳ ಗತಿ ಏನು ಸ್ವಾಮಿ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಲು ಯೋಗ್ಯತೆ ಇಲ್ಲದ ಸರ್ಕಾರ ಈ ರೀತಿ ಏಕಾಏಕಿ ವೈದ್ಯರನ್ನು ಸಿಎಚ್ಸಿಗಳಿಂದ ತಾಲ್ಲೂಕು ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲು ಮುಂದಾಗಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರ ಅರ್ಥಿಕವಾಗಿ ಎಷ್ಟು ದಿವಾಳಿ ಆಗಿದೆ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆಯಾಗಿದೆ ಎಂದು ಅವರು ಆಪಾದಿಸಿದ್ದಾರೆ.
ಅಭಿವೃದ್ಧಿ ಸಾಧ್ಯವಿಲ್ಲ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ, ಕನ್ನಡಿಗರಿಗೆ ನೆಮದಿ ಇಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ತಾನು ಕುರ್ಚಿಯಲ್ಲಿ ಇರುತ್ತೇನೋ ಇಲ್ಲವೋ ಎಂದು ಸ್ಪಷ್ಟನೆ ಕೊಡದೆ ತಮನ್ನ ಲೇಮ್ಡೆಕ್ ಸಿಎಂ ಮಾಡಿರುವ ಹೈಕಮಾಂಡ್ ಮೇಲೆ ಮುಖ್ಯಮಂತ್ರಿಗಳಿಗೆ ಅಸಮಾಧಾನವಿದೆ. ಕೊಟ್ಟ ಮಾತಿಗೆ ತಪ್ಪಿ, ಕುರ್ಚಿ ಬಿಟ್ಟುಕೊಡದೆ ಸತಾಯಿಸುತ್ತಿರುವ ಮುಖ್ಯಮಂತ್ರಿಗಳ ಮೇಲೆ ಉಪಮುಖ್ಯಮಂತ್ರಿಗಳಿಗೆ ಅಸಮಾಧಾನವಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕೈಗೂ ಸಿಗದ, ಫೋನಿಗೂ ಸಿಗದ ಸಚಿವರ ಮೇಲೆ ಶಾಸಕರಿಗೆ ಅಸಮಾಧಾನವಿದೆ. ಮೂರು ವರ್ಷಗಳಿಂದ ನಯಾ ಪೈಸೆ ಅಭಿವೃದ್ಧಿ ಕೆಲಸ ಮಾಡದ ಶಾಸಕರು, ಸರ್ಕಾರದ ಮೇಲೆ ಕನ್ನಡಿಗರಿಗೆ ಬೇಸರವಿದೆ ಎಂದು ಅವರು ಆರೋಪಿಸಿದ್ದಾರೆ.
