Tuesday, March 19, 2024
Homeರಾಜ್ಯವಿಧಾನಸಭೆಯಲ್ಲಿ ಆಡಳಿತ ಪಕ್ಷದ ಶಾಸಕರಿಂದಲೇ ಪ್ರತಿಭಟನೆ

ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಶಾಸಕರಿಂದಲೇ ಪ್ರತಿಭಟನೆ

ಬೆಳಗಾವಿ,ಡಿ.13- ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ನ ಶಾಸಕರೆ, ಹಿಂದುಳಿದ ವರ್ಗಗಳ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಟೀಕಾಪ್ರಹಾರ ನಡೆಸಿದ್ದಲ್ಲದೆ, ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ ಘಟನೆ ವಿಧಾನ ಸಭೆಯಲ್ಲಿ ನಡೆಯಿತು. ಪ್ರಶ್ನೋತ್ತರದ ಅವಧಿಯಲ್ಲಿ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜು .ವಿ.ಶಿವಗಂಗಾ ಅವರು, ಸದನಕ್ಕೆ ತಡವಾಗಿ ಬಂದಿದ್ದು, ವಿಳಂಬಕ್ಕೆ ಕಾರಣ ಏನು ಎಂದು ಸಭಾಧ್ಯಕ್ಷರು ಪ್ರಶ್ನಿಸಿದರು. ನಾನು ಬಿಳಿ ಶರ್ಟ್ ಧರಿಸಿ ಬಂದಿದ್ದೆ. ಹಿಂದುಳಿದ ವರ್ಗಗಳ ಇಲಾಖೆ ನಿಷ್ಕ್ರಿಯವಾಗಿದೆ. ಅದರ ವಿರುದ್ಧ ಪ್ರತಿಭಟನೆ ನಡೆಸುವ ಸಲುವಾಗಿ ಕಪ್ಪು ಬಣ್ಣದ ಶರ್ಟ್ ಧರಿಸಿ ಬರಲು ವಿಳಂಬವಾಯಿತು ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಆ ರೀತಿಯೆಲ್ಲಾ ಕಪ್ಪು ಬಟ್ಟೆ ಧರಿಸುವಂತಿಲ್ಲ. ಆದರೂ ಪರವಾಗಿಲ್ಲ. ಕಪ್ಪು ಬಟ್ಟೆ ಚೆನ್ನಾಗಿ ಕಾಣುತ್ತಿದೆ ಎಂದು ಹೇಳಿದರು.ಪ್ರಶ್ನೆಯನ್ನು ಮುಂದುವರೆಸಿದ ಬಸವರಾಜು.ವಿ.ಶಿವಗಂಗಾ, ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಅಭಿವೃದ್ಧಿ ನಿಗಮಗಳ ಸಾಲ ಸೌಲಭ್ಯಕ್ಕೆ ಭೌತಿಕ ಗುರಿ ಈಡೇರದೆ ಬಡವರಿಗೆ ಸೌಲಭ್ಯ ದೊರೆಯದೆ ವಂಚಿತವಾಗುತ್ತಿದೆ ಎಂದು ಆರೋಪಿಸಿದರು.

ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ 12, ಸ್ವಯಂ ಉದ್ಯೋಗಕ್ಕಾಗಿ 4, ಸ್ವಾವಲಂಬಿ ಸಾರಥಿ ಯೋಜನೆಯಡಿ 2 ಫಲಾನುಭವಿಗಳಿಗೆ ಮಾತ್ರ ಮಂಜೂರಾತಿ ಸಿಕ್ಕಿದೆ. ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿರುವ ಅಧಿಕಾರಿ, ನಿಮ್ಮದೇ ಸರ್ಕಾರ, ಹೋಗಿ ಮುಖ್ಯಮಂತ್ರಿಯವರನ್ನೇ ಕೇಳಿ ಎಂದು ಉದ್ಧಟತನದಿಂದ ಉತ್ತರಿಸುತ್ತಾರೆ. ನಾನು ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಸದಸ್ಯನಾಗಿದ್ದೇನೆ. ಇಲಾಖೆ ಅಧಿಕಾರಿಗಳು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಅಲ್ಲದೆ, ಕೋಟ್ಯಂತರ ರೂ. ಖರ್ಚು ಮಾಡಿ ಸಮಾವೇಶ ಮಾಡಲಾಗುತ್ತದೆ, ಬಡವರಿಗೆ ಸೌಲಭ್ಯ ನೀಡಲು ಹಣವಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ತತ್ಕ್ಷಣ ಪ್ರತ್ಯುತ್ತರಿಸಿದ ಸಭಾಧ್ಯಕ್ಷರು ಕೋಟ್ಯಂತರ ರೂ. ಖರ್ಚು ಮಾಡಿ ಶಾಸಕರಾಗಲು ಸಾಧ್ಯವಾಗಿರುವಾಗ ಬಡವರಿಗೆ ಕೊಡಲು ಹಣವಿಲ್ಲವೇ ಎಂದು ಶಾಸಕರಿಗೆ ತಿರುಗೇಟು ನೀಡಿದರು.

BIG NEWS : ಸಂಸತ್‍ನಲ್ಲಿ ಭದ್ರತಾಲೋಪ, ಆತಂಕ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳು..!

ಶಾಸಕ ನರೇಂದ್ರಸ್ವಾಮಿ ಕೂಡ ಇಲಾಖೆಯ ಕಾರ್ಯದರ್ಶಿ ವಿರುದ್ಧ ಆಕ್ರೋಶ ಹೊರಹಾಕಿದರು. ಆಡಳಿತ ಪಕ್ಷದ ಶಾಸಕರ ಅಸಮಾಧಾನಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಶರಣು ಸಲಗಾರ, ಆಡಳಿತ ಪಕ್ಷದ ಶಾಸಕರೇ ಈ ಸರ್ಕಾರ ದಿವಾಳಿಯಾಗಿದೆ, ನಿಷ್ಕ್ರಿಯವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಕಿಚಾಯಿಸಿದರು.

ಆಗ ಕಾಂಗ್ರೆಸ್ನ ಶಾಸಕರಾದ ರೂಪಾ ಶಶಿಧರ್, ಶರತ್ ಬಚ್ಚೇಗೌಡ, ಕೋನರೆಡ್ಡಿ ಮತ್ತಿತರರು ಇದು ಆರು ತಿಂಗಳ ಸಮಸ್ಯೆಯಲ್ಲ. ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಎಂದು ಸಮಜಾಯಿಷಿ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಅರ್ಜಿ ಸಲ್ಲಿಸಿದ ಎಲ್ಲರಿಗೂ ಸೌಲಭ್ಯಗಳನ್ನು ಒದಗಿಸಬೇಕೆಂಬುದು ನಮ್ಮ ಅಭಿಲಾಷೆ ಕೂಡ. ಆದರೆ ಹಣಕಾಸಿನ ಇತಿಮಿತಿಗಳು ಅದಕ್ಕೆ ಸಹಕರಿಸುವುದಿಲ್ಲ. ಲಭ್ಯತೆ ಆಧರಿಸಿ ಆದ್ಯತೆ ಮೇರೆಗೆ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.

ಶಾಸಕರು ಪ್ರಸ್ತಾಪಿಸಿದಂತೆ ನಮ್ಮಲ್ಲಿ ಹಾಸ್ಟೆಲ್ ವಾರ್ಡನ್ಗಳ ಕೊರತೆ ಇರುವುದು ನಿಜ. ಒಬ್ಬೊಬ್ಬರಿಗೆ ನಾಲ್ಕು-ಐದು ಹಾಸ್ಟೆಲ್ಗಳ ಉಸ್ತುವಾರಿ ವಹಿಸಲಾಗಿದೆ. ಬೇರೆ ಇಲಾಖೆಗಳಿಂದಲೂ ಕೂಡ ಅಧಿಕಾರಿಗಳನ್ನು ಎರವಲು ಸೇವೆಯ ಮೇಲೆ ಕರೆಸಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ ದೂರಿನ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಹಣಕಾಸು ಕೊರತೆ ಹಿನ್ನೆಲೆಯಲ್ಲಿ ಕೆಲವು ವೇಳೆ ಶಾಸಕರಿಗೆ ನೋವಾಗುವಂತಹ ಘಟನೆಗಳು ನಡೆದಿವೆ ಎಂದು ಸಚಿವರು ವಿಷಾದಿಸಿದರು.

RELATED ARTICLES

Latest News