Saturday, July 27, 2024
Homeರಾಷ್ಟ್ರೀಯರಾಯ್‌ಬರೇಲಿಯಿಂದ ರಾಹುಲ್‌ ಸ್ಪರ್ಧೆ, ಅಮೇಥಿಯಿಂದ ಕೆ.ಎಲ್‌.ಶರ್ಮಾ ಕಣಕ್ಕೆ

ರಾಯ್‌ಬರೇಲಿಯಿಂದ ರಾಹುಲ್‌ ಸ್ಪರ್ಧೆ, ಅಮೇಥಿಯಿಂದ ಕೆ.ಎಲ್‌.ಶರ್ಮಾ ಕಣಕ್ಕೆ

ನವದೆಹಲಿ,ಮೇ.3– ಕುಟುಂಬದ ಭದ್ರಕೋಟೆಯಾದ ರಾಯ್‌ಬರೇಲಿಯಿಂದ ಸಂಸದ ರಾಹುಲ್‌ ಗಾಂಧಿ ಸ್ಪರ್ಧಿಸಲಿದ್ದು, ಹಿರಿಯ ನಾಯಕ ಕೆ.ಎಲ್‌.ಶರ್ಮಾ ಅಮೇಥಿಯಿಂದ ಕಣಕ್ಕಿಳಿಯಲಿದ್ದಾರೆ.

11 ಗಂಟೆಗಳ ಸುದೀರ್ಘ ಸಮಾಲೋಚನೆ ಬಳಿಕ ಅಮೇಥಿ ಮತ್ತು ರಾಯ್‌ಬರೇಲಿ ಲೋಕಸಭಾ ಕ್ಷೇತ್ರಗಳ ನಿರ್ಧಾರವನ್ನು ಶುಕ್ರವಾರ ಮುಂಜಾನೆ ಪ್ರಕಟಿಸಿದ್ದು, ಕೈ ಪಕ್ಷ ಅಚ್ಚರಿಯ ನಡೆ ಅನುಸರಿಸಿದೆ. ಅಮೇಥಿ ಲೋಕಸಭೆ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದ ರಾಹುಲ್‌ ಗಾಂಧಿ , ರಾಯ್‌ಬರೇಲಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಕಾಂಗ್ರೆಸ್‌ ಘೋಷಿಸಿದೆ.

ಸೋನಿಯಾ ಗಾಂಧಿ ಅವರು ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಯ್ಬರೇಲಿ ಕ್ಷೇತ್ರ ಖಾಲಿಯಾಗಿತ್ತು.ರಾಹುಲ್‌ ಗಾಂಧಿ ಮತ್ತು ಕಿಶೋರಿ ಲಾಲ್‌ ಶರ್ಮಾ ಇಬ್ಬರೂ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುವ ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಈ ಎರಡೂ ಕ್ಷೇತ್ರಗಳಲ್ಲಿ ಮೇ 20ರಂದು ಐದನೇ ಹಂತದ ಚುನಾವಣೆ ನಡೆಯಲಿದೆ. ರಾಹುಲ್‌ ಗಾಂಧಿ ಅವರು ಹಾಲಿ ಸಂಸದರಾಗಿರುವ ಕೇರಳದ ವಯನಾಡು ಕ್ಷೇತ್ರದಿಂದಲೂ ಸ್ಪರ್ಧಿಸಿದ್ದು, ಈಗಾಗಲೇ ಅಲ್ಲಿ ಮತದಾನ ನಡೆದಿದೆ. ಆದರೆ ಎಡಪಕ್ಷಗಳು ಮೈತ್ರಿ ಒಪ್ಪಂದಕ್ಕೆ ಒಪ್ಪದೆ ಅಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಹೀಗಾಗಿ ರಾಹುಲ್‌ ಗಾಂಧಿ ಅವರಿಗೆ ಅಲ್ಲಿ ಗೆಲುವು ಸುಲಭವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಅವರು ಇನ್ನೊಂದು ಸುರಕ್ಷಿತ ಕ್ಷೇತ್ರ ಹುಡುಕುವುದು ಅನಿವಾರ್ಯವಾಗಿತ್ತು. ರಾಯ್ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುವ ಬಗ್ಗೆ ವದಂತಿ ದಟ್ಟವಾಗಿತ್ತು. ಆದರೆ ತಾಯಿ ಸೋನಿಯಾ ಪರವಾಗಿ ಈ ಕ್ಷೇತ್ರದಲ್ಲಿ ದಶಕದಿಂದಲೂ ಹೆಚ್ಚು ಸಮಯದಿಂದ ಓಡಾಡಿದ್ದ ಪ್ರಿಯಾಂಕಾ, ಚುನಾವಣಾ ಅಖಾಡಕ್ಕೆ ಇಳಿಯಲು ಈ ಬಾರಿ ಕೂಡ ನಿರಾಕರಿಸಿದ್ದಾರೆ.

ಎರಡೂ ಸ್ಥಾನಗಳನ್ನು ಗಾಂಧಿ -ನೆಹರು ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಗಾಂಧಿ ಕುಟುಂಬಸ್ಥರು ಹಲವಾರು ದಶಕಗಳಿಂದ ಈ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದಾರೆ.

ರಾಯ್‌ಬರೇಲಿ ಕ್ಷೇತ್ರವು ಕಾಂಗ್ರೆಸ್‌ಗೆ ಪ್ರತಿಷ್ಠಿತ ಕ್ಷೇತ್ರವಾಗಿದೆ ಏಕೆಂದರೆ ಇದನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮೂರು ಬಾರಿ ಮತ್ತು ಇಂದಿರಾ ಅವರ ಪತಿ ಫಿರೋಜ್‌ ಗಾಂಧಿ ಯವರು 1952 ಮತ್ತು 1957 ರಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಸೋನಿಯಾ ಗಾಂಧಿ 2004 ರಿಂದ 2024 ರವರೆಗೆ ಪ್ರತಿನಿಧಿಸಿದ್ದರು.

ರಾಹುಲ್‌ ಗಾಂಧಿಯವರು 2004 ರಿಂದ 2019 ರವರೆಗೆ ಮೂರು ಬಾರಿ ಅಮೇಥಿಯನ್ನು ಪ್ರತಿನಿಧಿಸಿದ್ದರು ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು 50,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. ಇರಾನಿ ವಿರುದ್ಧ ಗಾಂಧಿ ಕುಟುಂಬದ ಆಪ್ತ ಕೆ.ಎಲ್‌.ಶರ್ಮಾ ಕಣಕ್ಕಿಳಿದಿದ್ದಾರೆ. ಮೇ 20 ರಂದು ಐದನೇ ಹಂತದಲ್ಲಿ ಅಮೇಥಿ ಮತ್ತು ರಾಯ್‌ ಬರೇಲಿ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ.

ರಾಹುಲ್‌ಗೆ ದಿನೇಶ್‌ ಪ್ರತಾಪ್‌ ಸಿಂಗ್‌ ಸವಾಲು :
ಸೋನಿಯಾ ಗಾಂಧಿ ಅವರು ಸತತ ನಾಲ್ಕು ಬಾರಿ ಲೋಕಸಭೆ ಪ್ರವೇಶಿಸಿದ್ದ ರಾಯ್‌ಬರೇಲಿ ಕ್ಷೇತ್ರದಿಂದ ಬಿಜೆಪಿಯು ದಿನೇಶ್‌ ಪ್ರತಾಪ್‌ ಸಿಂಗ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ದಿನೇಶ್‌ ಪ್ರತಾಪ್‌ ಸಿಂಗ್‌ ಅವರು ಪ್ರಸ್ತುತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿಯೂ ಅವರು ಸೋನಿಯಾ ಗಾಂಧಿ ಎದುರು ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಅವರ ಮಗನಿಗೆ ಸವಾಲು ಹಾಕುತ್ತಿದ್ದಾರೆ. ಸಿಂಗ್‌ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರು. 2010 ಮತ್ತು 2016ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದರು. 2018ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. 2019ರ ಚುನಾವಣೆಯಲ್ಲಿ ಸೋತ ಅವರನ್ನು 2022ರಲ್ಲಿ ಮತ್ತೆ ವಿಧಾನ ಪರಿಷತ್‌ ಸದಸ್ಯರನ್ನಾಗಿ ಬಿಜೆಪಿ ಆಯ್ಕೆ ಮಾಡಿತ್ತು.

ನಾನು ಸೋನಿಯಾ ಗಾಂಧಿ ವಿರುದ್ಧ ಹೋರಾಡಿದ್ದೇನೆ. ಹೀಗಾಗಿ ಈಗ ಪ್ರಿಯಾಂಕಾ ಅಥವಾ ರಾಹುಲ್‌ ಗಾಂಧಿ ಯಾರೇ ಬರಲಿ, ನನಗೆ ಮುಖ್ಯವಲ್ಲ. ಯಾವ ಗಾಂಧಿ ಬಂದರೂ ರಾಯ್ಬರೇಲಿಯಲ್ಲಿ ಸೋಲುತ್ತಾರೆ ಎಂದು ಸಿಂಗ್‌ ಹೇಳಿದ್ದಾರೆ.

ಅಮೇಥಿಯಲ್ಲಿ ಸ್ಮೃತಿಗೆ ಸುಲಭ ತುತ್ತು? :
2019ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಅವರು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಎದುರು ಸೋಲು ಅನುಭವಿಸಿದ್ದರು. ಈ ಬಾರಿ ಅಮೇಥಿಯಲ್ಲಿ ಮತ್ತೆ ವಿಜಯಮಾಲೆ ಧರಿಸಲು ಸ್ಮೃತಿ ಇರಾನಿ ಬಯಸಿದ್ದಾರೆ. ಅವರಿಗೆ ಕಿಶೋರಿ ಲಾಲ್‌ ಶರ್ಮಾ ಪ್ರಬಲ ಎದುರಾಳಿಯಾಗುತ್ತಾರೆಯೇ ಎನ್ನುವುದು ಕುತೂಹಲ ಮೂಡಿಸಿದೆ.

RELATED ARTICLES

Latest News