ಬೆಂಗಳೂರು, ಫೆ.13-ಇಂದು ಮುಂಜಾನೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಹೊಸಕೋಟೆಯ ಹೊರವಲಯದಲ್ಲಿ ನಡೆದಿದೆ. ಹೊಸಕೋಟೆ -ದಾಬಸ್ಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು, ಬೈಕ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ನಗರದ ಆರು ಮಂದಿ ಹಾಗೂ ಬೈಕ್ ಸವಾರ ಸೇರಿ ಏಳು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಮೃತಪಟ್ಟವರ ವಿವರಗಳು :
1.ಅಶ್ವಿನ್ ನಾಯರ್ (ತಂದೆ: ಅಜಿತ್ ನಾಯರ್), 17 ವರ್ಷ, ಪ್ರಥಮ ಪಿಯುಸಿ, ಆರ್ವಿ ಪಿಯು ಕಾಲೇಜು ಯಲಹಂಕ, ವಿಳಾಸ: ಕೊತ್ತನೂರು.
2.ಇಥನ್ (ತಂದೆ: ಜೋನ್ ಜಾರ್ಜ್), 17 ವರ್ಷ, ಪ್ರಥಮ ಪಿಯುಸಿ, ಆರ್ವಿ ಪಿಯು ಕಾಲೇಜು ಯಲಹಂಕ, ವಿಳಾಸ: ಹುಳಿಮಾವು, ಹೆಣ್ಣೂರು ರಸ್ತೆ.
3.ಅಹ್ರಾಮ್ ಷರೀಫ್ (ತಂದೆ: ನೂರುಲ್ಲಾ ಷರೀಫ್), 16 ವರ್ಷ, 10ನೇ ತರಗತಿ, ಅಒಖ ಶಾಲೆ, ವಿಳಾಸ: ಊಗಿಖ ಲೇಔಟ್.
4.ಅಯನ್ ಅಲಿ (ತಂದೆ: ಅಜ್ಗರ್ ಅಲಿ), 17 ವರ್ಷ, 10ನೇ ತರಗತಿ, ಅಒಖ ಶಾಲೆ, ವಿಳಾಸ: ಕೊತ್ತನೂರು.
5.ಭರತ್ (ತಂದೆ: ಗೋಪಿ), 17 ವರ್ಷ, 10ನೇ ತರಗತಿ, ಶೋಭನಾ ಸ್ಮಾರಕ ಶಾಲೆ, ಫ್ರೇಜರ್ ಟೌನ್, ವಿಳಾಸ: ಫ್ರೇಜರ್ ಟೌನ್.
6.ಫರ್ಹಾನ್ (ತಂದೆ: ಫಿಯಾರೋಜ್), 18 ವರ್ಷ, ವಿಳಾಸ: ಕಮ್ಮನಹಳ್ಳಿ.
7.ಮೃತ ವ್ಯಕ್ತಿ ಗಗನ್ (ತಂದೆ: ನಾಗರಾಜಪ್ಪ), 26 ವರ್ಷ, ಸಫೂಲ್ ಮಾರ್ಕೆಟ್ ಮೇಲ್ವಿಚಾರಕ, ವಿಳಾಸ: ದೇವನಾಯಕನಹಳ್ಳಿ, ಚೆನ್ನರಾಯಪಟ್ಟಣ, ದ್ವಿಚಕ್ರ ವಾಹನ ಸಂಖ್ಯೆ: ಏಂ43ಐ2913.
ಗಾಯಗೊಂಡವರು :
ಗಾಯಗೊಂಡ ಬಾಲಸುಬ್ರಮಣ್ಯಂ (ತಂದೆ: ರಂಗನಾಥ್), 32 ವರ್ಷ, ಬಾಲಾಜಿಗ ಜಾತಿ, ಸಂತೆ ಹಳ್ಳಿ ಗ್ರಾಮ, ಕಸಬಾ ಹೋಬಳಿ, ಮಾಲೂರು ತಾಲ್ಲೂಕು, ಕ್ಯಾಂಟರ್ ವಾಹನ ಸಂಖ್ಯೆ: ಏಂ 08 6942.
ಹೆಚ್ಬಿಆರ್ ಲೇಔಟ್ ,ಫ್ರೇಜರ್ಟೌನ್, ಹೆಣ್ಣೂರು ಹಾಗೂ ಕೊತ್ತನೂರು ಸುತ್ತಮುತ್ತ ಪ್ರದೇಶದಲ್ಲಿ ವಾಸಿಸುತ್ತಿದ್ದ ಇವರೆಲ್ಲರೂ ಎಸ್ಎಸ್ಎಲ್ಸಿ, ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಬೆಳಗಿನ ಜಾವ 1 ಗಂಟೆ ಸುಮಾರಿನಲ್ಲಿ ಇವರೆಲ್ಲರೂ ಜಾಲಿರೇಡ್ಗಾಗಿ ತಮ ತಮ ಮನೆಗಳಿಂದ ಹೊರ ಬಂದು ಕಾರಿನಲ್ಲಿ ಹೋಗಿದ್ದಾರೆ.
ಹೊಸಕೋಟೆ-ದಾಬಸ್ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸಕೋಟೆಯಿಂದ ಎಸ್ಯುವಿ ಕಾರು ಮುಂಜಾನೆ 4.30ರ ಸುಮಾರಿನಲ್ಲಿ ದೇವನಹಳ್ಳಿ ಕಡೆಗೆ ಹೋಗುತ್ತಿದ್ದಾಗ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಎಂ ಸತ್ಯವಾರ ಗ್ರಾಮದ ಬಳಿ ಮುಂದೆಸಾಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದು, ನಂತರ ನಿಯಂತ್ರಣ ತಪ್ಪಿ ಕ್ಯಾಂಟರ್ಗೂ ಅಪ್ಪಳಿಸಿದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸೂಲಿಬೆಲೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಏಳು ಮಂದಿಯ ಮೃತದೇಹಗಳನ್ನು ಹೊಸಕೋಟೆಯ ಸರ್ಕಾರಿ ಆಸ್ಪತೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಎಸ್ಯುವಿ ಕಾರು ಚಾಲಕನ ಅತಿ ವೇಗ ಚಾಲನೆಯಿಂದಾಗಿ ನಿಯಂತ್ರಣ ತಪ್ಪಿ ಮೊದಲು ಬೈಕ್ಗೆ ಡಿಕ್ಕಿ ಹೊಡೆದ ನಂತರ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಮತ್ತೊಂದು ಕಾರು ಕೂಡ ಇದೇ ವಾಹನಗಳಿಗೆ ಗುದ್ದಿ ತೀವ್ರ ಜಖಂ ಗೊಂಡಿದೆ.
ಎಸ್ಯುವಿ ಕಾರಿನಲ್ಲಿದ್ದ ಆರು ಮಂದಿ ಮತ್ತು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕ್ಯಾಂಟರ್ನ ಎಕ್ಸ್ ಎಲ್ ಕಟ್ಟಾಗಿ ಚಕ್ರಗಳು ಬೇರ್ಪಟ್ಟು ಪಲ್ಟಿಯಾಗಿದ್ದು, ಕಾರು ಹಾಗೂ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ವಾಹನಗಳ ಬಿಡಿ ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿತು. ಈ ಸರಣಿ ಅಪಘಾತದ ಸಂದರ್ಭದಲ್ಲಿ ಮತ್ತೊಂದು ಕಾರಿನ ಮುಂಭಾಗಕ್ಕೂ ಹಾನಿಯಾಗಿದ್ದು, ಅದರಲ್ಲಿದ್ದವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಐಜಿ ಲಾಭೂರಾಮ್, ಎಸ್ಪಿ ಚಂದ್ರಕಾಂತ್, ಡಿವೈಎಸ್ಪಿ ಮಲ್ಲೇಶ್ ಸೇರಿದಂತೆ ಸೂಲಿಬೆಲೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರಣಿ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಗಂಟೆಗಳ ಕಾಲ ಈ ಮಾರ್ಗದಲ್ಲಿ ಹೋಗಬೇಕಾಗಿದ್ದ ವಾಹನಗಳು ನಿಂತಲ್ಲೇ ನಿಂತಿದ್ದವು. ತದ ನಂತರ ಪೊಲೀಸರು ಕ್ರೇನ್ ಮೂಲಕ ರಸ್ತೆಯಿಂದ ಜಖಂಗೊಂಡಿದ್ದ ವಾಹನಗಳನ್ನು ಪಕ್ಕಕ್ಕೆ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಮುಳುವಾದ ಜಾಲಿರೈಡ್ : ಪೋಷಕರ ಆಕ್ರಂದನ
ಇಂದು ಮುಂಜಾನೆ ನಡೆದ ಸರಣಿ ಅಪಘಾತ ದಲ್ಲಿ ಜಾಲಿರೇಡ್ಗೆ ಕಾರಿನಲ್ಲಿ ಹೋಗಿದ್ದ 6 ಮಂದಿ ವಿದ್ಯಾರ್ಥಿಗಳು ಒಟ್ಟಾಗಿ ಪ್ರಾಣ ಕಳೆದುಕೊಂಡಿ ರುವುದು ದುರ್ದೈವ. ಈ ಆರು ಮಂದಿ ಅಪ್ರಾಪ್ತರು ನಗರದ ಫ್ರೇಜರ್ಟೌನ್, ಹೆಚ್ಬಿಆರ್ ಲೇಔಟ್ ಹೆಣ್ಣೂರು, ಕೊತ್ತನೂರು ಸುತ್ತಮುತ್ತಲಿನ ನಿವಾಸಿಗಳು .
ಇವರೆಲ್ಲರೂ ಜಾಲಿರೇಡ್ಗೆ ಹೋಗಲು ಇಂದು ಬೆಳಗಿನ ಜಾವ 1 ಗಂಟೆ ಸುಮಾರಿನಲ್ಲಿ ತಮ ತಮ ಮನೆಗಳಿಂದ ಹೊರಬಂದು ಒಟ್ಟಾಗಿ ಒಂದು ಕಡೆ ಸೇರಿದ್ದಾರೆ.ಇವರು ಜಾಲಿರೇಡ್ಗೆ ಆಯ್ದುಕೊಂಡಿದ್ದು, ಹೊಸ ಹೈವೇ ಹೊಸಕೋಟೆ ಹೆದ್ದಾರಿಯನ್ನು.
ಇವರಲ್ಲಿ ಒಬ್ಬ ಕಾರು ಚಾಲನೆ ಮಾಡಿಕೊಂಡು ತನ್ನ ಸಹಪಾಟಿಗಳನ್ನು ಕರೆದುಕೊಂಡು ಈ ಹೈವೇಗೆ ಹೋಗಿದ್ದು, 150 ಕಿ.ಮೀ. ಗೂ ಹೆಚ್ಚಿನ ವೇಗದಲ್ಲಿ ಹೋಗಿದ್ದಾರೆ.
ಆ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ಮೊದಲು ಬೈಕ್ಗೆ ಡಿಕ್ಕಿ ಹೊಡೆದು ನಂತರ ಕ್ಯಾಂಟರ್ಗೆ ಅಪ್ಪಳಿಸಿ ಸುಮಾರು 350 ರಿಂದ 400 ಮೀಟರ್ ದೂರ ಹೋಗಿ ಕಾರು ಉರುಳಿ ಬಿದ್ದ ಪರಿಣಾಮ ಸ್ನೇಹಿತರೆಲ್ಲರೂ ದಾರುಣವಾಗಿ ಮೃತಪಟ್ಟಿರುವುದು ಕಂಡು ಬಂದಿದೆೆ.
ಈ ಅಪಘಾತದಿಂದಾಗಿ ಆರು ಮಂದಿ ವಿದ್ಯಾರ್ಥಿಗಳ ಕುಟುಂಬಗಳು ಹಾಗೂ ಬೈಕ್ ಸವಾರನ ಕುಟುಂಬ ಕಣ್ಣೀರ ಕೋಡಿ ಹರಿಸಿದೆ.
