ಬೆಂಗಳೂರು, ಮೇ 25- ರಾಜ್ಯದ ವಿವಿಧೆಡೆ ಪೂರ್ವ ಮುಂಗಾರು ಚುರುಕುಗೊಂಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.ಆದರೆ ಉಳುಮೆ ಮಾಡಲು ಟ್ರ್ಯಾಕ್ಟರ್ಗಳಿಗೆ ಡೀಸೆಲ್ ಸಿಗದೆ ಮಾಲೀಕರು ಹಾಗೂ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಇಂಧನ ಕೊರತೆ ಉಂಟಾಗಿದ್ದು, ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುತ್ತಿದ್ದು, ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದೆ.
ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಹಾಸನ, ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಮುಂಗಾರು ಹಂಗಾಮು ಚಟುವಟಿಕೆಗಳು ಪ್ರಾರಂಭವಾಗಿವೆ.
ಕೃಷಿಭೂಮಿಯನ್ನು ಹದ ಮಾಡಿಕೊಳ್ಳಲು ರೈತರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಟ್ರ್ಯಾಕ್ಟರ್ಗಳಿಗೆ ಡೀಸೆಲ್ ಸಿಗದೆ ಪರದಾಡುವಂತಾಗಿದೆ.ಪೆಟ್ರೋಲ್ ಬಂಕ್ಗಳ ಮುಂದೆ ಕ್ಯಾನ್ಗಳನ್ನು ಹಿಡಿದು ಸರದಿ ಸಾಲಿನಲ್ಲಿ ನಿಂತ ದೃಶ್ಯಗಳು ಗದಗ, ಹಾವೇರಿ, ಬೆಳಗಾವಿ, ಬೀದರ್ ಭಾಗಗಳಲ್ಲಿ ಕಂಡುಬಂದವು.
ದೊಡ್ಡದೊಡ್ಡ ಕ್ಯಾನ್ಗಳನ್ನು ಹಿಡಿದು ರೈತರು, ಚಾಲಕರು ಹಾಗೂ ಮಾಲೀಕರು ಪೆಟ್ರೋಲ್ ಬಂಕ್ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಕೆಲವು ಬಂಕ್ಗಳಲ್ಲಿ ಜನರನ್ನು ನಿಯಂತ್ರಿಸಲು ಬಂಕ್ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಕೆಲವರು ಟ್ರ್ಯಾಕ್ಟರ್ಗಳನ್ನೇ ಬಂಕ್ಗಳಿಗೆ ತಂದು ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ.
ಬೆಲೆ ಏರಿಕೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ದೊಡ್ಡ ದೊಡ್ಡ ಬ್ಯಾರೆಲ್ಗಳಲ್ಲೇ ಡೀಸೆಲ್ ತುಂಬಿಸಿಕೊಂಡು ಹೋಗುತ್ತಿದ್ದ ದೃಶ್ಯಗಳು ರಾಜ್ಯದ ವಿವಿಧೆಡೆ ಕಂಡುಬಂದವು.
ಉಳುಮೆ ದುಬಾರಿ :
ಡೀಸೆಲ್ ಬೆಲೆ ಏರಿಕೆಯಿಂದ ಈ ಬಾರಿ ಮಾಲೀಕರು ಬೆಲೆ ಹೆಚ್ಚಳ ಮಾಡಿದ್ದು, ಗಂಟೆಗೆ 1400 ರಿಂದ 1500 ರೂ.ವರೆಗೂ ಬೆಲೆ ನಿಗದಿ ಮಾಡಿದ್ದಾರೆ. ಕಳೆದ ವರ್ಷ ಗಂಟೆಗೆ 1200 ರೂ. ಇತ್ತು. ಆದರೆ ಈ ಬಾರಿ ಅನಿವಾರ್ಯವಾಗಿ ಬೆಲೆ ಹೆಚ್ಚಳ ಮಾಡಬೇಕಾಗಿದೆ ಎಂದು ಟ್ರ್ಯಾಕ್ಟರ್ ಮಾಲೀಕರು ತಿಳಿಸಿದ್ದಾರೆ.
