ಬೆಂಗಳೂರು,ಮಾ.24- ಮಹಾ ನಗರದ ವಿವಿಧೆಡೆ ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಮಂಗಳವಾರದಿಂದ ಮರು ಪ್ರಾರಂಭವಾಗಿದೆ. ಅತಿ ಕಡಿಮೆ (ನಾಮಿನಲ್) ಬೆಲೆಗೆ ಗುಣಮಟ್ಟದ ಊಟ ಹಾಗೂ ಉಪಹಾರ ನೀಡುವ ಕ್ಯಾಂಟೀನ್ಅನ್ನು ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಅವರು 2017 ರಿಂದ ಸ್ವಂತ ಖರ್ಚಿನಲ್ಲಿ ನಡೆಸುತ್ತಿದ್ದಾರೆ.
ಪ್ರತಿ ದಿನ ಸಾವಿರಾರು ಜನ ಇದರ ಪ್ರಯೋಜನ ಪಡೆಯುತ್ತಿದ್ದರು. ಕ್ಯಾಂಟೀನ್ ಬೆಂಗಳೂರಿನ ವಿವಿಧೆಡೆ ಹಸಿದವರ ಆಹಾರ ತಾಣವಾಗಿತ್ತು. ಆದರೆ, ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದ ಪರಿಣಾಮ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಇದರಿಂದ ಕಳೆದ ವಾರ ಅನಿವಾರ್ಯವಾಗಿ ಅಪ್ಪಾಜಿ ಕ್ಯಾಂಟೀನ್ ಸ್ಥಗಿತ ಮಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು. ಸಿಲಿಂಡರ್ ಪೂರೈಕೆ ಲಭ್ಯವಾಗುತ್ತಿದ್ದಂತೆ ಮತ್ತೆ ಕ್ಯಾಂಟೀನ್ ಕಾರ್ಯ ನಿರ್ವಹಣೆಯನ್ನು ಮರು ಪ್ರಾರಂಭಿಸಲಾಗಿದೆ.
ಅಪ್ಪಾಜಿ ಕ್ಯಾಂಟೀನ್ ಎಂದಿನಂತೆ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ನೀಡಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
