ಬೆಂಗಳೂರು, ಫೆ.11- ಅಧಿಕಾರ ಹಂಚಿಕೆ ಕುರಿತಂತೆ ಕಾಲವೇ ಉತ್ತರ ನೀಡುತ್ತದೆ. ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಗಳು ಬೇಡ. ಸ್ವಲ್ಪ ತಾಳ್ಮೆಯಿಂದ ಇರಿ, ನಾನೇ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುತೂಹಲ ಕೆರಳಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಿನ್ನೂ ಯಾವ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಿಲ್ಲ. ಇನ್ನೂ ಅಸ್ಸಾಂ ವಿಧಾನಸಭೆ ಚುನಾವಣೆ ತಯಾರಿಯ ಜಂಜಾಟದಲ್ಲೇ ಇದ್ದೇನೆ ಎಂದರು.
ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದಾಗಿ ವದ್ಧಂತಿಗಳಿವೆ ಎಂಬುದಕ್ಕೆ ನಗುತ್ತಲೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ನಿನ್ನೆ ನಾನು ಪಕ್ಷದ ಕಚೇರಿಗೆ ಭೇಟಿ ನೀಡಿದ್ದೇನೆ. ಯಾರನ್ನ ಭೇಟಿ ಮಾಡಿದ್ದೇನೆ, ಏನು ಚರ್ಚೆ ಮಾಡಿದ್ದೇನೆ ಎಂಬ ವಿಚಾರಗಳಲ್ಲಿ ಬೇರೆ ಬೇರೆ ರೀತಿಯ ವ್ಯಾಖ್ಯಾನಗಳಾಗುವುದು ಬೇಡ. ನಾನೇ ಮಾತನಾಡುತ್ತೇನೆ. ಸ್ವಲ್ಪ ಸಮಯ ಕಾದು ನೋಡಿ ಎಂದಿದ್ದಾರೆ.
ದೆಹಲಿಯ ಭೇಟಿಯಲ್ಲಿ ಪಕ್ಷದ ವರಿಷ್ಠ ನಾಯಕರು ಡಿ.ಕೆ.ಶಿವಕುಮಾರ್ ಅವರ ಖುದ್ದು ಭೇಟಿಗೆ ಸಮಯ ನೀಡಿಲ್ಲ ಎಂಬ ಅಸಮಧಾನಗಳ ನಡುವೆ ಖುಷಿಯಿಂದಲೇ ಮಾಧ್ಯಮದವರ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಪತ್ರಿಕ್ರಿಯಿಸಿದ್ದಾರೆ. ಏನನ್ನೋ ಹೇಳಲು ಹೋಗಿ ಅರ್ಧದಲ್ಲೇ ತಡೆ ಹಿಡಿದಿದ್ದಾರೆ. ಸಮಯ ಬಂದಾಗ ಉತ್ತರ ಸಿಗುತ್ತದೆ ಎಂದು ಉಗುಳು ನುಂಗಿದ್ದಾರೆ.
ನಿಧಾನವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಬೆಂಗಳೂರಿನಲ್ಲಿ ಹೇಳಿರುವುದಕ್ಕೆ ಪ್ರತಿಕ್ರಿಯೆಸಿದ ಡಿ.ಕೆ.ಶಿವಕುಮಾರ್, ನಾನು ಕಾಲ ಉತ್ತರ ಕೊಡಲಿದೆ ಎಂದು ಹೇಳಿದ್ದೇನೆ. ನಾನು ಮತ್ತು ಸಿದ್ದರಾಮಯ್ಯ ಏನೆಲ್ಲಾ ಚರ್ಚೆ ಮಾಡಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತು ಎಂದು ಕೂಡ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡೋಣ. ಮಾತನಾಡುವ ಕಾಲ ಯಾವಾಗ ಬರುತ್ತದೆ ಎಂಬುದನ್ನು ಸಮಯ ನೋಡಿ ಹೇಳುತ್ತೇನೆ ಎಂದು ಮುಗುಮಾಗಿ ನುಡಿಸಿದ್ದಾರೆ.
ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆಯನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರ ಈಗ ಆದೇಶ ಹೊರಡಿಸಿರಬಹುದು ಆದರೆ ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ವಂದೇ ಮಾತರಂಗೆ ಬುನಾದಿ ಹಾಕಿದೆ. ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನ ತಂದುಕೊಟ್ಟವರು ಕಾಂಗ್ರೆಸ್ಸಿಗರು. ಬೇರೆಯವರು ನಮನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಎಸ್.ಎಂ.ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ವಿರಚಿತ ಸರ್ವ ಜನಾಂಗದ ಶಾಂತಿಯ ತೋಟ ಹಾಡನ್ನು ನಾಡಗೀತೆಯನ್ನಾಗಿ ಮಾಡಲಾಗಿದೆ. ಅದರಲ್ಲಿ ಏನೇಲ್ಲಾ ಹೇಳಬೇಕೋ ಅದನ್ನೆಲ್ಲಾ ಹೇಳಿದ್ದೇವೆ. ಹಿಂದು, ಕ್ರೈಸ್ತ, ಮುಸಲಾನ ಸೇರಿ ಎಲ್ಲ ಧರ್ಮಗಳನ್ನು ಗೌರವಿಸಲಾಗಿದೆ. ನಮ ಆ ರೀತಿಯ ಪರಂಪರೆ. ನಮ ರಾಜ್ಯ ಶಾಂತಿಯ ತೋಟ ಎಂದು ಹೆಮೆಯಿಂದ ಹೇಳಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಎರಡನ್ನು ಆಡಬೇಕಾದ ಅನಿವಾರ್ಯತೆ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
