ಬೆಂಗಳೂರು,ಪೆ.11- ಕೆಎಂಎಫ್ ಅಧ್ಯಕ್ಷ ಗಾದಿಯ ಆಕಾಂಕ್ಷಿ ನಾನಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. ಮಾ.6ಕ್ಕೆ ಚುನಾವಣೆ ನಡೆಯಬಹುದು. ಈ ಬಗ್ಗೆ ಪಕ್ಷ ತೀರ್ಮಾನ ಮಾಡಬೇಕು. ಏನು ತೀರ್ಮಾನ ಮಾಡುತ್ತಾರೆ ಎಂಬುದು ಮುಖ್ಯ.
ಈ ವಿಷಯದಲ್ಲಿ ಲಾಬಿ ಅಥವಾ ರಾಜಕೀಯ ಮಾಡುವುದಲ್ಲ. ರಾಜ್ಯದ ಹಿತ ಕಾಪಾಡುವುದು ಮುಖ್ಯ ಎಂದರು. ತಮಗೆ ಈಗಿರುವ ಜವಾಬ್ದಾರಿ ನಿಭಾಯಿಸುವುದೇ ಕಷ್ಟ. ಒಬ್ಬೊಬ್ಬರಿಗೆ ಒಂದು ಅಧಿಕಾರ ಬೇಕು. ಕೆಎಂಎಫ್ನ ಬ್ರ್ಯಾಂಡ್ ನಂದಿನಿ ಉತ್ಪನ್ನವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಬೇಕಾದ ದೊಡ್ಡ ಜವಾಬ್ದಾರಿ ಇದೆ. ನಾನ ಯಾವುದನ್ನು ಆಸೆಪಟ್ಟು ಕೇಳುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.
ಲೋಕಸಭಾ ಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಸಂಸದನಾಗಿದ್ದವನು. ಪ್ರಧಾನಿಯವರ ಮೇಲೆ ಹಲ್ಲೆ ಮಾಡುವ ಯತ್ನದ ಆರೋಪ ಅಧಿವೇಶನದ ದಿಕ್ಕು ತಪ್ಪಿಸುವ ಹುನ್ನಾರ. ಅವರು ಮಾಡಿರುವ ಆರೋಪ ಆಧಾರರಹಿತ. ಅವಿಶ್ವಾಸ ಮಾಡುವುದು, ಬಿಡುವುದು ಮುಖ್ಯವಲ್ಲ. ಸದನಕ್ಕೆ ಸ್ಪೀಕರ್ಗೌರವ ನೀಡಬೇಕು ಎಂದರು.
ಮಹಿಳಾ ಸಂಸದರು ಹಲ್ಲೆ ಮಾಡುತ್ತಾರಾ? ವಿನಾಕಾರಣ ಆರೋಪ ಸರಿಯಲ್ಲ. ಸಭಾಧ್ಯಕ್ಷರು ನೈತಿಕತೆಯಿಂದ ಸದನಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಅವರಿಗೆ ಬಹುಮತವಿದ್ದರೆ ಸ್ಪೀಕರ್ ಆಗಿ ಉಳಿಯುತ್ತಾರೆ ಅದರಂತೆ ಅವರು ನಡೆದುಕೊಳ್ಳಬೇಕು ಎಂದರು.
ಕೌಶಲ್ಯಾಭಿವೃದ್ದಿ ಇಲಾಖೆಯಲ್ಲಿನ ಅವ್ಯವಹಾರ ಆರೋಪಕ್ಕೆ ಪ್ರತಿಕ್ರಿಯಿಸಿದ ಸುರೇಶ್, ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯಾಗಿದೆ. ಇದರಿಂದ ಉದ್ಯೋಗ ಕೂಡ ಸರಿಯಾಗಿ ದೊರೆತಿಲ್ಲ. ಇದರ ಹಣ ಎಲ್ಲಿಗೆ ಹೋಯಿತು? ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಆಗಿರುವುದು. ಫಲಾನುಭವಿಗಳ ಹೆಸರಲ್ಲಿ ಬಿಜೆಪಿ ಕೈವಾಡವಿದೆ. ಇದರ ಬಗ್ಗೆ ಖಂಡಿತವಾಗಲೂ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
