ಬೆಂಗಳೂರು,ಜೂ.28- ಬಿಡದಿ ಟೌನ್ಶಿಪ್ ವಿರೋಧಿಸುತ್ತಿರುವ ರೈತರ ಭಾವನೆಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದ್ದು, ಅಂತಿಮವಾಗಿ ಈ ವಿಚಾರ ನ್ಯಾಯಾಲಯದಲ್ಲೇ ತೀರ್ಮಾನವಾಗಬೇಕಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೌನ್ಶಿಪ್ ವಿರೋಧಿಸಿ 475 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ನಡೆಸುವವರು ಈ ಯೋಜನೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಟೌನ್ಶಿಪ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಅಕ್ರಮಕ್ಕೆ ಬಾಗಿಲು ತೆರೆದಿದ್ದಾರೆ ಎಂದು ಆರೋಪಿಸಿದರು.
ಫಲವತ್ತಾದ ಭೂಮಿಯನ್ನು ಅಭಿವೃದ್ದಿ ಹೆಸರಿನಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಬೆಳೆ ಬೆಳೆಯಲಾಗದ ಕಡೆಗಳಲ್ಲಿ ಯೋಜನೆ ಕೈಗೊಳ್ಳಲಿ. ಆದರೆ ಬಿಡದಿಯಲ್ಲಿ ಸರ್ಕಾರಿ ಭೂಮಿಯನ್ನು ಲಪಟಾಯಿಸಲು ಮಧ್ಯವರ್ತಿಗಳಿಗೆ ಬೆಂಬಲ ಕೊಡುತ್ತಿದೆ ಎಂದು ಟೀಕಿಸಿದರು.
ಪ್ರಚೋದನೆಗೆ ಒಳಗಾಗಬೇಡಿ: ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಮುಖಂಡನನ್ನು ಬಂಧಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರು ಉದ್ವೇಗಕ್ಕೆ ಒಳಗಾಗುವುದು ಬೇಡ. ಪ್ರಚೋದನೆ ಮಾಡಲೆಂದೇ ಒಂದು ಗುಂಪು ಕೆಲಸ ಮಾಡುತ್ತಿದೆ. ಚಪ್ಪಲಿ ಎಸೆಯುವುದು ನಮ ಸಂಸ್ಕೃತಿಯಲ್ಲ. ಯಾರ ವಿರುದ್ಧವೂ ಧಿಕ್ಕಾರ ಕೂಗುವುದು ಬೇಡ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದು ಬೇಡ ಎಂದು ಕಿವಿಮಾತು ಹೇಳಿದರು.
ಪ್ರಚೋದನೆಗೆ ಒಳಗಾಗದೇ ಶಾಂತಚಿತ್ತದ ನಡವಳಿಕೆಯನ್ನು ರೂಢಿಸಿಕೊಳ್ಳಿ ಎಂದ ಅವರು, ಶಾಸಕ ಪ್ರದೀಪ್ ಈಶ್ವರ್ ನಡವಳಿಕೆ ಬಗ್ಗೆ ಪ್ರತಿಕ್ರಿಯಿಸದೆ ಕೈಮುಗಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರು ಅಡ್ಡಮತದಾನ ಮಾಡಿರುವ ವಿಚಾರಕ್ಕೆ ಹೆಚ್ಚು ಮಹತ್ವ ಕೊಡದೆ ಇಲ್ಲಿಗೆ ಕೈಬಿಡಬೇಕು ಎಂದರು.
ಮನೆ ಬಾಗಿಲಿಗೆ ಬಂದವರು ಯಾರು?
2013ರಲ್ಲಿ ಹಲವು ಭಾಗ್ಯದ ಯೋಜನೆಗಳನ್ನು ಜಾರಿ ಮಾಡಿದರೂ 2018ರಲ್ಲಿ ಕಾಂಗ್ರೆಸ್ ನಾಯಕರು ಯಾರ ಮನೆ ಬಾಗಿಲಿಗೆ ಬಂದಿದ್ದರು ಎಂದು ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದರು. ಅಂದು ನಿಮ ಅಸ್ತಿತ್ವ ಉಳಿಸಿಕೊಳ್ಳಲು ನಮ ಮನೆ ಬಾಗಿಲಿಗೆ ಬಂದಿದ್ದೀರಿ. ಮುಂದಿನ ಚುನಾವಣೆಯಲ್ಲಿ ಜನ ನಿಮನ್ನು ತಿರಸ್ಕಾರ ಮಾಡುತ್ತಾರೆ.
ಜನರ ಪರವಾಗಿ ಹೋರಾಟ ಮಾಡುವ ಪಕ್ಷ ನಮದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾವೇರಿ ವಿಚಾರದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಕಾಂಗ್ರೆಸ್ನವರಿಗೆ ಅಗತ್ಯ ಬಿದ್ದಾಗ ಯಾರ ಕಾಲನ್ನೂ ಬೇಕಾದರೂ ಹಿಡಿಯುತ್ತಾರೆ. ತಮಿಳುನಾಡಿನ ಡಿಎಂಕೆ ಜೊತೆ ಸೇರಿದ್ದವರು. ಈಗ ಅಧಿಕಾರಕ್ಕೆ ಬಂದ ಟಿಎಂಕೆ ಜೊತೆ ಹೋಗಿದ್ದಾರೆ. ನಿಮ ಪಕ್ಷದ ಬಗ್ಗೆ ಚರ್ಚೆ ಮಾಡಬೇಕೆ ಎಂದು ಖಾರವಾಗಿ ಪ್ರತಿಕ್ರಿಸಿದರು.
