ಬೆಂಗಳೂರು,ಫೆ.17- ದೇಶದಲ್ಲೇ ಅತೀ ದೊಡ್ಡದಾದ ರೈಲ್ವೆ ಕೋಚಿಂಗ್ ಟರ್ಮಿನಲ್ ಅನ್ನು ರಾಜ್ಯದಲ್ಲಿ ನಿರ್ಮಾಣ ಮಾಡಲಿದ್ದು, ರೈಲ್ವೆ ಯೋಜನೆಗೆ ಇದು ಹೊಸ ಮುನ್ನುಡಿ ಬರೆಯಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಲಹಂಕದಲ್ಲಿ 5,754 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗಲಿದ್ದು, ಇದು ಭಾರತದ ಅತಿದೊಡ್ಡ ಕೋಚಿಂಗ್ ಟರ್ಮಿನಲ್ ಆಗಲಿದೆ ಎಂದು ತಿಳಿಸಿದರು.
ಈ ಮೊದಲು ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ ಈ ಪ್ರದೇಶವು ದೂರ ಎಂಬ ಕಾರಣಕ್ಕಾಗಿ ಯಲಹಂಕದಲ್ಲೇ ಪ್ರಾರಂಭಿಸಲು ಕೇಂದ್ರ ರೈಲ್ವೆ ಮಂಡಳಿಯು ತೀರ್ಮಾನಿಸಿದೆ. ಕೇಂದ್ರ ಸರ್ಕಾರವು ರಾಜ್ಯದ ರೈಲ್ವೆ ಯೋಜನೆಗಳಿಗೆ ಹಣ ನೀಡುತ್ತಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಪದಲ್ಲಿ ಸತ್ಯಾಂಶವಿಲ್ಲ. ವಾಸ್ತವವಾಗಿ ಹೇಳಬೇಕಾದರೆ ರಾಜ್ಯ ಸರ್ಕಾರವು ರೈಲ್ವೆ ಯೋಜನೆಗೆ ಅಸಹಕಾರ ನೀಡುತ್ತದೆ. ಇವರ ಬಳಿ ಹಣ ಇಲ್ಲವೇ? ಎಂದು ಪ್ರಶ್ನಿಸಿದರು.
ಹಿಂದಿನಂತೆ ನಾವು ಗುದ್ದಲಿ ಪೂಜೆ ಮಾಡುವುದು ಒಬ್ಬರು , ಉದ್ಘಾಟನೆ ಮಾಡುವುದು ಇನ್ನೊಬ್ಬರು ಎಂಬ ನೀತಿ ಹೋಗಿದೆ. ಗುದ್ದಲಿ ಪೂಜೆ ಮಾಡುವುದೂ ನಾವೇ, ಉದ್ಘಾಟನೆ ಮಾಡುವುದೂ ನಾವೇ. ಇದು ಪ್ರಧಾನಿ ನರೇಂದ್ರ ಮೋದಿಯವರ ನೀತಿ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ರಾಜ್ಯದ ರೈಲ್ವೆ ಯೋಜನೆಗಳಿಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿದೆ. ತುಮಕೂರು-ಬೆಂಗಳೂರು ನಡುವೆ ನಾಲ್ಕು ಪಥದ ರೈಲ್ವೆ ಹಳಿಗೆ ಅನುಮೋದನೆ ನೀಡಲಾಗಿದೆ. ಇದೇ ರೀತಿ ಮೆಜೆಸ್ಟಿಕ್ ಹಾಗೂ ವೈಟ್ಫೀಲ್ಡ್ ನಡುವೆ ಕೂಡ ನಾಲ್ಕು ಪಥದ ಟ್ರಾಕ್ ಆಗಲಿದೆ ಎಂದು ವಿವರಿಸಿದರು.
ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 485 ಕೋಟಿ ರೂ. ಹಣವನ್ನು ಖರ್ಚು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವ ರೀತಿ ಅನ್ಯಾಯ ಮಾಡಿದೆ ಎಂದು ಸೋಮಣ್ಣ ಪ್ರಶ್ನೆ ಮಾಡಿದರು.
ಪ್ರಧಾನಿ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಏಕೆಂದರೆ ಒಟ್ಟು ನಾಲ್ಕು ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಚಾಲನೆ ಕೊಟ್ಟಿದ್ದೇವೆ. ಸಾಂಕೇತಿಕವಾಗಿ ಮೈಸೂರು-ಬಾಗಲಕೋಟೆ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಲಾಗಿದೆ.
ಇದರಲ್ಲಿ ಸಮಯದ ಮಾಹಿತಿ ಕಲೆ ಹಾಕುವುದಕ್ಕೆ ಸೂಚನೆ ನೀಡಲಾಗಿದೆ. ಮೆಜೆಸ್ಟಿಕ್ ರೈಲು ನಿಲ್ದಾಣದ ಮೇಲೆ ಇರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಿಂದಿನ ಯುಪಿಎ ಸರ್ಕಾರ ರಾಜ್ಯಕ್ಕೆ 800 ಕೋಟಿ ರೂ. ಹಣವನ್ನು ರೈಲ್ವೆ ಯೋಜನೆಗಳಿಗೆ ನೀಡಿತ್ತು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ 7748 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. 52 ಸಾವಿರ ಕೋಟಿಯ ಯೋಜನೆಗಳು ಚಾಲ್ತಿಯಲ್ಲಿವೆ. 707 ಮೇಲ್ಸೇತುವೆ ನಿರ್ಮಾಣ ಮಾಡಿದ್ದೇವೆ, 12 ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ದೇಶದಲ್ಲೇ ಅತೀ ಹೆಚ್ಚು ವಂದೇ ಭಾರತ್ ರೈಲು ಸಂಚರಿಸುವುದು ಕರ್ನಾಟಕದಲ್ಲೇ. ಆದರೆ ನಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಲೆ ಬುಡ ಇಲ್ಲದಂತೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.
100 ಕೋಟಿ ರೂ. ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗುತ್ತದೆ. ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಕಷ್ಟದಲ್ಲಿದ್ದ ವೇಳೆ ಅಲ್ಲಿಯ ಜನ ನನ್ನನ್ನು ಗೆಲ್ಲಿಸಿದ್ದಾರೆ. ಅವರ ಋಣವನ್ನು ತೀರಿಸುವ ಕೆಲಸ ನನ್ನ ಮೇಲಿದೆ ಎಂದು ಭಾವುಕರಾಗಿ ಹೇಳಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ 1,370 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮಾಸ್ಟರ್ ಪ್ಲಾನ್ ಅನುಮೋದನೆ ಹಂತದಲ್ಲಿದೆ.
ವೈಟ್ಫೀಲ್ಡ್ ನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದವರೆಗಿನ ನಾಲ್ಕು ಪಥದ ರೈಲ್ವೆ ಮಾರ್ಗ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ತುಮಕೂರು-ಬೆಂಗಳೂರು ನಾಲ್ಕು ಪಥದ ಯೋಜನೆಗೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಿ ಕ್ಯಾಬಿನೆಟ್ಗೆ ಸಲ್ಲಿಸಲಾಗಿದೆ. ವೈಟ್ಫೀಲ್್ಡನಿಂದ ಕೋಲಾರಕ್ಕೆ ನೇರ ರೈಲು ಸಂಪರ್ಕಕ್ಕಾಗಿ ಸಮೀಕ್ಷೆ ನಡೆಸಲು ಡಿಆರ್ಎಂ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಾಯಂಡಹಳ್ಳಿ ಯಲ್ಲಿ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಗೆ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ ತೋರಿದರು. ಇಲ್ಲಿ ಈವರೆಗೂ ಪ್ಯಾಸೆಂಜರ್ ರೈಲುಗಳು ಮಾತ್ರ ನಿಲುಗಡೆಯಾಗುತ್ತಿದ್ದವು. ಹಲವಾರು ವರ್ಷಗಳ ಕಾಲ ಪ್ರಯಾಣಿಕರು ಎಕ್್ಸಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು.
