ಬೆಂಗಳೂರು, ಮೇ 28- ಮುಂದಿನ ಮುಖ್ಯಮಂತ್ರಿಯಾಗಲಿರುವ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕಾರಕ್ಕೆ ಭಾರೀ ತಯಾರಿ ನಡೆಸಿದ್ದಾರೆ. ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರು, ಸಂಪುಟದ ಎಲ್ಲಾ ಸಚಿವರಿಗೂ ಉಪಾಹಾರ ಕೂಟ ಏರ್ಪಡಿಸಿ ತಮ ರಾಜೀನಾಮೆಯನ್ನು ಪ್ರಕಟಿಸಿದರು. ಜೊತೆಯಲ್ಲೇ ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರು.
ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಜೊತೆ ಖಾಸಗಿಯವಾಗಿ ಕೆಲ ಹೊತ್ತು ಮಾತುಕತೆ ನಡೆಸಿದರು. ಉಪಾಹಾರ ಕೂಟ ಮುಗಿಸಿ ಡಿ.ಕೆ.ಶಿವಕುಮಾರ್ ತಮ ಮನೆಗೆ ಮರಳುತ್ತಿದ್ದಂತೆ ಪ್ರಮಾಣವಚನ ಸ್ವೀಕಾರಕ್ಕೆ ಭಾರೀ ತಯಾರಿ ಆರಂಭಿಸಿದರು.
ಮೊನ್ನೆ ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿರುವ ಅಜ್ಜಯ್ಯನ ಪೀಠದ ದರ್ಶನ ಪಡೆದಿದ್ದರು. ಇಂದು ಅಧಿಕಾರ ಖಚಿತವಾಗುತ್ತಿದ್ದಂತೆ ತುಮಕೂರು ಜಿಲ್ಲೆಯ ನೊಣವಿನಕೆರೆಯಲ್ಲಿರುವ ಅಜ್ಜಯ್ಯನ ಮೂಲ ಪೀಠಕ್ಕೆ ಕುಟುಂಬ ಸಮೇತರಾಗಿ ತೆರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಡಿ.ಕೆ.ಶಿವಕುಮಾರ್ ಅವರ ಪತ್ನಿ, ಪುತ್ರಿ ಜೊತೆಯಲ್ಲಿ ತೆರಳಲಿದ್ದಾರೆ ಎನ್ನಲಾಗಿತ್ತು.
ಡಿ.ಕೆ.ಶಿವಕುಮಾರ್ ಅಪಾರ ದೈವ ಭಕ್ತರಾಗಿದ್ದು, ಪ್ರತಿಯೊಂದು ಹಂತದಲ್ಲೂ ಶುಭಗಳಿಗೆ, ಶುಭ ಮುಹೂರ್ತ ಆಧರಿಸಿಯೇ ಮುಂದಿನ ಹೆಜ್ಜೆ ಇಡುತ್ತಾರೆ. ಮುಖ್ಯಮಂತ್ರಿಯಾಗುವ ಮಹತ್ವದ ಗಳಿಗೆಯಲ್ಲಿ ಶುಭಮುಹೂರ್ತಕ್ಕಾಗಿ ತಮ ಕುಟುಂಬದ ಜ್ಯೋತಿಷಿ ದ್ವಾರಕನಾಥ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಅಜ್ಜಯ್ಯನ ಪೀಠಕ್ಕೆ ಹೋಗಿ ಆಶೀರ್ವಚನ ಪಡೆದ ಬಳಿಕ ಮುಹೂರ್ತ ನಿಗದಿಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.ಬಹುತೇಕ ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಶನಿವಾರ ಅಥವಾ ಭಾನುವಾರ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಬದಲಾದ ಶಕ್ತ್ತಿ ಕೇಂದ್ರ:
ಸಿದ್ದರಾಮಯ್ಯ ಅವರು ರಾಜ್ಯ ಕಾಂಗ್ರೆಸ್ನಲ್ಲಿ ಕಳೆದ 15 ವರ್ಷಗಳಿಂದಲೂ ಅನಭಿಷಿಕ್ತ ನಾಯಕತ್ವ ಹೊಂದಿದ್ದರು. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಶಕ್ತಿ ಕೇಂದ್ರದಲ್ಲಿ ವಿಭಜನೆಯಾಗಿತ್ತು. ಆದರೂ ಸಿದ್ದರಾಮಯ್ಯ ಅವರದು ಒಂದು ಕೈಮೇಲೆ ಎಂಬಂತ ಪರಿಸ್ಥತಿ ಇತ್ತು.
ಇಂದು ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದಂತೆ ಇಲ್ಲಿವರೆಗೂ ಸಿದ್ದರಾಮಯ್ಯ ಅವರ ಸುತ್ತಾಮುತ್ತ ಠಳಾಯಿಸುತ್ತಿದ್ದ ಶಾಸಕರು, ನಾಯಕರು ಏಕಾಏಕಿ ಡಿ.ಕೆ.ಶಿವಕುಮಾರ್ ಅವರ ಮನೆಯತ್ತ ವಾಲಿದರು.
ಇದ್ದಕ್ಕಿದ್ದಂತೆ ಸದಾಶಿವನಗರದಲ್ಲಿರುವ ಮನೆ ಬಳಿ ಜನಜಂಗುಳಿಯ ಜಾತ್ರೆಯಾಗಿ ಪರಿವರ್ತನೆಯಾಗಿತ್ತು. ಕಾರ್ಯಕರ್ತರು, ಮುಖಂಡರು, ಸಚಿವ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳ ಆಕಾಂಕ್ಷಿಗಳ ದಂಡೇ ನೆರೆದಿತ್ತು. ಡಿ.ಕೆ.ಶಿವಕುಮಾರ್ ಅವರಿಗೆ ಅಭಿಮಾನದ ಅಭಿನಂದನೆಗಳ ಮಹಾಪೂರವೇ ಕಂಡು ಬಂದಿತ್ತು.
