ಬೆಂಗಳೂರು, ಮಾ.17- ರಾಯಚೂರು ಜಿಲ್ಲೆಯಲ್ಲಿ ಕೆಎಸ್ಆರ್ಪಿ ಬೆಟಾಲಿ ಯನ್ ಸ್ಥಾಪಿಸಲು ಆರ್ಥಿಕ ಇಲಾಖೆಯ ಅನುಮೋದನೆ ಪಡೆದ ಬಳಿಕ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರದ ಅವಧಿ ಯಲ್ಲಿ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರವಿಹಾಳ ಅವರು, ತಮ ಕ್ಷೇತ್ರದ ವಟಗಲ್ ಗ್ರಾಮದಲ್ಲಿ 750 ಎಕರೆ ಜಮೀನು ಲಭ್ಯವಿದೆ. ಅಲ್ಲಿ ಕೆಎಸ್ಆರ್ಪಿ ತುಕಡಿ ಸ್ಥಾಪಿಸುವಂತೆ ಮನವಿ ಮಾಡಿದರು. ಕಾಂಗ್ರೆಸ್ನ ಸದಸ್ಯ ಬಸನಗೌಡ ಯತ್ನಾಳ್, ಜೆಡಿಎಸ್ ಶರಣಗೌಡ ಕಂದಕೂರ ಮತ್ತಿತರರು ಧ್ವನಿಗೂಡಿಸಿದರು.
ಈ ಭಾಗದಲ್ಲಿ ಕೆಎಸ್ಆರ್ಪಿ ಬೆಟಾಲಿಯನ್ಗೆ ಹೆಚ್ಚಿನ ಬೇಡಿಕೆ ಇದೆ. ಒಂದು ವೇಳೆ ಆರ್ಥಿಕ ಇಲಾಖೆ ಒಪ್ಪದೆ ಇದ್ದರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನವನ್ನು ಬಳಸಿಕೊಂಡು ಬೆಟಾಲಿಯನ್ ಅನ್ನು ಆರಂಭಿಸಬೇಕು ಎಂದು ಸಲಹೆ ನೀಡಿದರು.
ಸಚಿವ ಡಾ.ಜಿ.ಪರಮೇಶ್ವರ್ ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಬೆಳಗಾವಿ, ಕಲಬುರಗಿ, ಹಾಸನ, ತುಮಕೂರು, ಶಿಗ್ಗಾಂವಿ ಸೇರಿದಂತೆ 12 ಕಡೆಗಳಲ್ಲಿ ಕೆಎಸ್ಆರ್ಪಿ ತುಕಡಿಗಳಿವೆ. ಜೊತೆಗೆ ಮುನೀರಾಬಾದ್ ನಲ್ಲಿ ಕೇಂದ್ರ ಸರ್ಕಾರದ ಐಆರ್ಬಿ ಸ್ಥಾಪನೆಯಾಗಿದೆ. ಕೆಜಿಎಫ್ ಮತ್ತು ಅವತಿಯಲ್ಲೂ ಹೊಸದಾಗಿ ಐಆರ್ಬಿ ಸ್ಥಾಪನೆಯಾಗುತ್ತಿದೆ ಎಂದರು.
ರಾಯಚೂರಿನಲ್ಲಿ ಕೆಎಸ್ಆರ್ಪಿ ತುಕಡಿ ಆರಂಭವಾಗಬೇಕು ಎಂದು ಮೂವತ್ತು ಶಾಸಕರು ತಮಗೆ ಪತ್ರ ಬರೆದಿದ್ದಾರೆ ಎಂದು ವಿವರಿಸಿದರು. ಈಗಾಗಲೇ ಕಲಬುರಗಿಯಲ್ಲಿ ಒಂದು ಕಡೆ ಇದೆ. ಹೀಗಾಗಿ ರಾಯಚೂರಿನಲ್ಲಿ ಸ್ಥಾಪಿಸುವ ಅಗತ್ಯ ಇದೆಯೇ ಎಂಬ ಬಗ್ಗೆ ಚರ್ಚೆಗಳು ನಡೆದಿದೆ.
ರಾಯಚೂರು ವಿಶ್ವವಿಖ್ಯಾತವಾದ ಧಾರ್ಮಿಕ ಕೇಂದ್ರಗಳನ್ನು ಹಾಗೂ ಜಲ ಸಂಪನೂಲ ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಕೆಎಸ್ಆರ್ಆಪಿ ಅಗತ್ಯ ಇದೆ ಎಂದು ಆರ್ಥಿಕ ಇಲಾಖೆಗೆ ಮನವರಿಕೆ ಮಾಡಿಕೊಡಲಾಗುವುದು. ಅನುಮೋದನೆ ಸಿಕ್ಕ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
