ಬೆಂಗಳೂರು, ಮಾ.17- ಬೆಳಗಾವಿ ಮತ್ತು ಹುಬ್ಬಳ್ಳಿ ಧಾರವಾಡಗಳನ್ನು ಐಟಿ ಹಬ್ಗಳನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರ ನೀಡಿದ ಸಚಿವರು, ಲೋಕಲ್ ಎಕನಾಮಿಕ್ ಆಕ್ಸಲರೇಟಿವ್ ಪ್ರೋಗ್ರಾಮ್ ಯೋಜನೆಯ (ಲೀಪ್) ಅಡಿಯಲ್ಲಿ ಬೆಳಗಾವಿ ಮತ್ತು ಹುಬ್ಬಳ್ಳಿ ಧಾರವಾಡಗಳನ್ನು ಕ್ಲಸ್ಟರ್ಗಳೆಂದು ಪರಿಗಣಿಸಲಾಗಿದೆ.
ಬೆಳಗಾವಿ ಹೊರ ವಲಯದಲ್ಲಿ ಇದಕ್ಕಾಗಿ ಜಮೀನು ಗುರುತಿಸಲಾಗಿತ್ತು. ಅದು ದೂರ ಎಂದು ಉದ್ಯಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಗರದ ಒಳಗೆ ಜಮೀನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಶಾಸಕ ಅಭಯ್ ಪಾಟೀಲ್ ಮತ್ತು ಕಾಂಗ್ರೆಸ್ನ ಸದಸ್ಯರ ಜೊತೆ ಸೇರಿ ಜಂಟಿಯಾಗಿ ಹುಡುಕಾಟ ನಡೆದಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ದಿಗೆ ತಮ ಸರ್ಕಾರ ಆದ್ಯತೆ ನೀಡಿದೆ. ಹುಬ್ಬಳ್ಳಿಯಲ್ಲಿರುವ ಐಐಐಟಿಯಲ್ಲಿ ಕ್ವಾಂಟಮ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಕೋರ್ಸ್ ಗಳಿಗೆ ಹಾಗೂ ಜ್ಯೇಷ್ಠ ಕೇಂದ್ರಗಳಿಗೆ ಒತ್ತು ನೀಡಲಾಗಿದೆ.
ಬೆಳಗಾವಿಯಲ್ಲಿ ಕಾಂಪೋನೆಂಟ್ ಉತ್ಪಾದನೆಗೆ ಉತ್ತಮ ವಾತಾವರಣ ಇದೆ. ಪ್ರತಿಭೆ ಇರುವ ಕಡೆಯಲ್ಲಿ ನಾವು ಉದ್ಯಮಗಳನ್ನು ಆರಂಭಿಸುವ ಇಚ್ಛಾಶಕ್ತಿ ಹೊಂದಿದ್ದೇವೆ, ಇದಕ್ಕಾಗಿ ಹಣಕಾಸಿನ ಕೊರತೆ ಇಲ್ಲ ಎಂದು ಹೇಳಿದರು.
