ಬೆಂಗಳೂರು, ಮಾ.14- ಇಂದಿರಾ ಕ್ಯಾಂಟೀನ್ಗಳಿಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗ್ಯಾಸ್ ಪೂರೈಸುವ ಭರವಸೆ ನೀಡಿರುವುದರಿಂದ ಸ್ಥಗಿತಗೊಂಡಿರುವ ಕ್ಯಾಂಟೀನ್ಗಳು ಪುನರಾರಂಭಗೊಳ್ಳಲಿವೆ.
ನಗರದಲ್ಲಿ ವಾಣಿಜ್ಯ ಗ್ಯಾಸ್ ಕೊರತೆಯ ಪರಿಣಾಮವಾಗಿ ಅನೇಕ ಹೋಟೆಲ್ಗಳು ಹಾಗೂ ಇಂದಿರಾ ಕ್ಯಾಂಟೀನ್ಗಳು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ನಗರದ ಇಂದಿರಾ ಕ್ಯಾಂಟೀನ್ಗಳಿಗೆ ಗ್ಯಾಸ್ ಪೂರೈಕೆ ಮಾಡಲು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಮ್ಮತಿ ನೀಡಿರುವ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಬಂದ್ ಆಗಿರುವ ಕ್ಯಾಂಟೀನ್ಗಳನ್ನು ಮರುಪ್ರಾರಂಭಿಸುವ ಸಾಧ್ಯತೆ ಇದೆ.
ನಗರದಲ್ಲಿ ಇಂದಿರಾ ಕ್ಯಾಂಟೀನ್ಗಳ ಆಹಾರ ತಯಾರಿಕೆಗೆ ಪ್ರತಿದಿನ ಸುಮಾರು 80 ಗ್ಯಾಸ್ ಸಿಲಿಂಡರ್ಗಳ ಅಗತ್ಯವಿದೆ. ಈ ಅಗತ್ಯತೆಯನ್ನು ಪೂರೈಸಲು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಒಪ್ಪಿಕೊಂಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ಅದರಲ್ಲಿ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ಗಳಿಗೆ ಗ್ಯಾಸ್ ಪೂರೈಕೆ ಮಾಡುವ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ.
ಇದರಿಂದ ನಗರದಲ್ಲಿ ಗ್ಯಾಸ್ ಕೊರತೆಯಿಂದ ಬಂದ್ ಆಗಿರುವ 60ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ಗಳು ಇನ್ನೆರಡು ದಿನಗಳಲ್ಲಿ ಯಥಾಸ್ಥಿತಿಗೆ ಮರಳುವ ನಿರೀಕ್ಷೆಯಿದೆ. ಗ್ಯಾಸ್ ಕೊರತೆಯಿಂದ ಆಹಾರ ತಯಾರಿಕೆಯಲ್ಲಿ ಉಂಟಾದ ಅಡಚಣೆಯಿಂದ ಕೆಲವು ದಿನಗಳಿಂದ ಕ್ಯಾಂಟೀನ್ಗಳು ಕಾರ್ಯನಿರ್ವಹಿಸಲು ಸಾಧ್ಯವಾಗಿರಲಿಲ್ಲ.
ಈಗ ಗ್ಯಾಸ್ ಪೂರೈಕೆ ಸಮಸ್ಯೆ ಪರಿಹಾರವಾಗುತ್ತಿರುವ ಹಿನ್ನೆಲೆ, ಶೀಘ್ರದಲ್ಲೇ ನಾಗರಿಕರಿಗೆ ಮತ್ತೆ ಕಡಿಮೆ ದರದಲ್ಲಿ ಆಹಾರ ಲಭ್ಯವಾಗಲಿದೆ ಎಂದು ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ ರಾವ್ ತಿಳಿಸಿದರು.
