ಬೆಂಗಳೂರು, ಮಾ.16- ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ತಾಲ್ಲೂಕುಗಳ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಗೆಲ್ಲಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್, ಬೆಂಗಳೂರು ವಿಭಜನೆಯ ಬಳಿಕ ನಡೆಯಲಿರುವ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತ ಪ್ರತಿಷ್ಠಾಪಿಸುವುದನ್ನು ಸವಾಲಾಗಿ ಸ್ವೀಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪಾಲಿಕೆಗಳ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳಿಗೆ ಡಿ.ಕೆ.ಶಿವಕುಮಾರ್ ನಿನ್ನೆ ಶಿಸ್ತು ಮತ್ತು ಚುನಾವಣಾ ತಂತ್ರಗಳ ಪಾಠ ಮಾಡಿದ್ದಾರೆ.
ಬಹುತೇಕ ಡಿಸೆಂಬರ್ ವೇಳೆಗೆ ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಸರಿಸುಮಾರು 9 ತಿಂಗಳ ಕಾಲಾವಕಾಶವಿದೆ. ಆ ವೇಳೆಗೆ ಆಕಾಂಕ್ಷಿಗಳು ಕ್ಷೇತ್ರವನ್ನು ಹದ ಮಾಡಿಕೊಳ್ಳಬೇಕೆಂದು ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ಥಳೀಯ ಜನಪ್ರಿಯತೆ, ಪಕ್ಷ ನಿಷ್ಠೆ ಈ ಹಿಂದೆ ಚುನಾವಣೆಗಳಲ್ಲಿ ತೊಡಗಿಸಿಕೊಂಡಿರುವ ಮಾದರಿಗಳನ್ನು ಆಧರಿಸಿ ಅವಕಾಶ ನೀಡುವುದಾಗಿ ಹೇಳಲಾಗಿದೆ.
ಜೊತೆಗೆ ಅಭ್ಯರ್ಥಿಗಳಾಗುವವರ ಆರ್ಥಿಕ ಸಾಮರ್ಥ್ಯವೂ ಪರಿಗಣನೆಗೆ ಒಳಗಾಗಲಿದೆ. ಹಣ ಇದೆ, ಪ್ರಭಾವಿ ನಾಯಕರು ತಮ ಬೆಂಬಲಕ್ಕಿದ್ದಾರೆ ಎಂಬ ಕಾರಣಕ್ಕೆ ಯಾರೂ ನಿರ್ಲಕ್ಷ್ಯದಿಂದ ಇರಬಾರದು, ತಾವು ಯಾರ ಪ್ರಭಾವಕ್ಕೂ ಮಣಿಯುವುದಿಲ್ಲ. ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಮಾನದಂಡ.
ಸ್ಥಳೀಯವಾಗಿ ಜನರ ನಡುವೆ ಗುರುತಿಸಿಕೊಳ್ಳದೇ ಇದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಡಿ.ಕೆ.ಶಿವಕುಮಾರ್ ಅವರು, ವಿಧಿಸಿರುವ ಕಟ್ಟಲೆಗಳು ಟಿಕೆಟ್ ಆಕಾಂಕ್ಷಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಪ್ರಭಾವಿಗಳ ಹಿಂಬಾಲಕರಾಗಿ ಟಿಕೆಟ್ ಗಿಟ್ಟಿಸುವ ಧೈರ್ಯದಲ್ಲಿದ್ದವರಿಗೆ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದೇ ಇದ್ದರೆ? ಎಂಬ ಗೊಂದಲ ಕಾಡಲಾರಂಭಿಸಿದೆ.ಈ ಹಿನ್ನೆಲೆಯಲ್ಲಿ ಹೀಗಾಗಲೇ ತಮ ಹಿರಿಯ ನಾಯಕರುಗಳ ಬೆನ್ನುಹತ್ತಿರುವ ಅಭ್ಯರ್ಥಿಗಳು ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
