ಬೆಂಗಳೂರು, ಮಾ.16- ಮಧ್ಯಪ್ರಾಚ್ಯ ಯುದ್ಧ ರಾಜ್ಯದ ತರಕಾರಿ ಮಾರುಕಟ್ಟೆಯ ಮೇಲೂ ಭಾರೀ ಪರಿಣಾಮ ಬೀರಿದೆ. ಸಿಲಿಂಡರ್ ಕೊರತೆಯಿಂದ ಹಲವಾರು ಹೋಟೆಲ್ಗಳು ತಮ್ಮ ಮೆನುಗಳನ್ನು ಕಡಿತಗೊಳಿಸಿದ್ದು, ಕೆಲವೆಡೆ ಹೋಟೆಲ್ಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ದರ ಪರಿಣಾಮವಾಗಿ ದಿನನಿತ್ಯ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದ ತರಕಾರಿಗಳ ಬೇಡಿಕೆ ಏಕಾಏಕಿ ಕುಸಿದಿದೆ. ಪರಿಣಾಮವಾಗಿ ಮಾರುಕಟ್ಟೆಗಳಲ್ಲಿ ತರಕಾರಿ ಉಳಿದುಕೊಳ್ಳುತ್ತಿದ್ದು, ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ವ್ಯಾಪಾರಿಗಳ ಪ್ರಕಾರ, ಕಳೆದ ಎರಡು ಮೂರು ತಿಂಗಳ ಹಿಂದೆ ಕೆಜಿಗೆ ಸುಮಾರು 800 ರೂಪಾಯಿವರೆಗೆ ಏರಿಕೆಯಾಗಿದ್ದ ನುಗ್ಗೆಕಾಯಿ ದರ ಕಳೆದ ವಾರ 100 ರೂಪಾಯಿಗೆ ಇಳಿಕೆಯಾಗಿತ್ತು. ಇದೀಗ ಮತ್ತಷ್ಟು ಕುಸಿದು ಕೆಜಿಗೆ ಸುಮಾರು 60 ರೂಪಾಯಿಗೆ ಮಾರಾಟವಾಗುತ್ತಿದೆ. ಅದೇ ರೀತಿ ಬಟಾಣಿ ಕೆಜಿಗೆ 40 ರೂಪಾಯಿಗೆ ಲಭ್ಯವಿದೆ. ಈರುಳ್ಳಿ ಮತ್ತು ಟಮೋಟೋಗಳ ಬೆಲೆ ಕೂಡ ಕೆಜಿಗೆ ಕೇವಲ 15 ರಿಂದ 20 ರೂಪಾಯಿಗೆ ಇಳಿದಿದೆ.
ಇದರ ಜೊತೆಗೆ ಬಹುತೇಕ ತರಕಾರಿಗಳು ಕೆಜಿಗೆ ಸುಮಾರು 30 ರೂಪಾಯಿ ದರದಲ್ಲೇ ಮಾರಾಟವಾಗುತ್ತಿವೆ. ಕೊತ್ತಂಬರಿ ಹಾಗೂ ಪುದೀನಾ ಒಂದು ಕಟ್ಟಿಗೆ 5ರಿಂದ 10 ರೂಪಾಯಿಗೆ ಸಿಗುತ್ತಿವೆ. ಹೋಟೆಲ್ಗಳು ಮತ್ತು ವಿವಿಧ ಕಾರ್ಯಕ್ರಮಗಳು ಸಿಲಿಂಡರ್ ಕೊರತೆಯಿಂದ ಬಂದ್ ಆಗಿರುವುದೇ ಈ ಪರಿಸ್ಥಿತಿಗೆ ಪ್ರಮುಖ ಕಾರಣ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಸದ್ಯ ಇರುವ ತರಕಾರಿ ದರಗಳು ಈ ಕೆಳಗಿನಂತಿವೆ:
ಈರುಳ್ಳಿ -20.
ಟಮೋಟೋ- 20
ಬೀನ್್ಸ – 40
ಕ್ಯಾರೆಟ್ -50
ನುಗ್ಗೆಕಾಯಿ -60
ಬೀಟ್ರೂಟ್ -30
ಗೆಡ್ಡೆಕೋಸು -20
ಎಲೆಕೋಸು -20
ಸೋರೆಕಾಯಿ -30 ಹಾಗೂ
ಹಿರೇಕಾಯಿ ಬೆಲೆ 30 ರೂ.ಗಳಿಗೆ ಕುಸಿದಿದೆ.
ಇದೇ ಪರಿಸ್ಥಿತಿ ಮುಂದುವರಿದರೆ ತರಕಾರಿ ಬೆಲೆ ಇನ್ನಷ್ಟು ಇಳಿದು ರೈತರು ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಬೆಂಗಳೂರಿನ ಮಾರುಕಟ್ಟೆಯವರೆಗೂ ತಲುಪಿದ್ದು, ಹೋಟೆಲ್ ಉದ್ಯಮ, ವ್ಯಾಪಾರಿಗಳು ಮತ್ತು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿರುವುದು ಸ್ಪಷ್ಟವಾಗಿದೆ.
