ಬೆಂಗಳೂರು,ಫೆ.4- ಪಾಕಿಸ್ತಾನ ಶತ್ರು ರಾಷ್ಟ್ರವೋ ಇಲ್ಲ ಮಿತ್ರ ರಾಷ್ಟ್ರವೋ ಎಂಬುದರ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲವು ಭಾರೀ ಮಾತಿನ ಚಕಮತಿಗೆ ಕಾರಣವಾಯಿತು.
ಬಿಜೆಪಿಯ ನವೀನ್ ಅವರು ಮಾತನಾಡುವ ವೇಳೆ ಕೆಲವರಿಗೆ ಪಾಕಿಸ್ತಾನದ ಮೇಲೆ ಅದು ಏಕೋ ಅತಿಯಾದ ಪ್ರೀತಿ ಪ್ರೇಮವಿದೆ. ಕೆಲವರು ಯಾವಾಗಲೂ ಪಾಕಿಸ್ತಾನವನ್ನು ಜಪಿಸುತ್ತಾರೆ ಎಂದು ಕಾಂಗ್ರೆಸ್ ಸದಸ್ಯರನ್ನು ಕಾಲೆಳೆಯುವ ಪ್ರಯತ್ನ ಮಾಡಿದರು.
ಪಾಕಿಸ್ತಾನ ನಮಗೆ ಶತ್ರು ರಾಷ್ಟ್ರವಲ್ಲ. ಅದು ನಮ ನೆರೆಯ ರಾಷ್ಟ್ರ ಎಂದು ಇಲ್ಲಿನ ಸದಸ್ಯರೇ ಹೇಳಿದ್ದಾರೆ. ಹಾಗಾಗಿ ಅವರಿಗೆ ಯಾವಾಗಲೂ ಪಾಕಿಸ್ತಾನ ಎಂದರೆ ಬಲು ಪ್ರೀತಿ ಎಂದು ವ್ಯಂಗ್ಯವಾಡಿದರು.
ನವೀನ್ ಅವರ ಈ ಮಾತಿಗೆ ತಿರುಗಿಬಿದ್ದ ಕಾಂಗ್ರೆಸ್ ಸದಸ್ಯರು ಕೇಂದ್ರದಲ್ಲಿ ನಿಮದೇ ಸರ್ಕಾರ ಅಧಿಕಾರದಲ್ಲಿದೆ. ಪಾಕಿಸ್ತಾನವನ್ನು ಶತ್ರು ರಾಷ್ಟ್ರ ಎಂದು ಘೋಷಿಸಲು ಹೇಳಿಬಿಡಿ ಎಂದು ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದರು.
ಶತ್ರು ರಾಷ್ಟ್ರ ಎಂದರೆ ಆ ದೇಶದ ಜೊತೆ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಸುವಂತಿಲ್ಲ. ಗೋ ಮಾಂಸದ ರಫ್ತು ಮಾಡುತ್ತಿರುವವರು ಯಾರು? ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇದ. ಪಾಕಿಸ್ತಾನವನ್ನು ನಾಳೆ ಶತ್ರು ರಾಷ್ಟ್ರ ಎಂದು ಘೋಷಿಸಲಿ. ಅದಕ್ಕೆ ನಮದೇನೂ ಅಭ್ಯಂತರವಿಲ್ಲವೆಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದ ಶಿವಕುಮಾರ್ ಮಾತನಾಡಿ, ಪಾಕಿಸ್ತಾನದ ಬಗ್ಗೆ ನಮಗೆ ಯಾವುದೇ ಪ್ರೀತಿಯೂ ಇಲ್ಲ. ಪ್ರೇಮವೂ ಇಲ್ಲ. ಅಲ್ಲಿನ ಪ್ರಧಾನ ಮಂತ್ರಿ ನವಾಜ್ ಷರೀಫ್ ಮಗಳ ಮದುವೆಗೆ ಹೋಗಿ ಬಂದವರು ಯಾರು ನಿಮ ಮೋದಿಯವರಲ್ಲವೇ?ಎಂದು ಬಿಜೆಪಿಗೆ ತಿರುಗೇಟು ನೀಡಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಇನ್ನು ಬಿಜೆಪಿಯ ಕಿಶೋರ್ ಶೆಟ್ಟಿ ಮಾತನಾಡುವ ವೇಳೆ ಪಾಕಿಸ್ತಾನದ ವಿರುದ್ಧ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಯುದ್ಧವನ್ನೇ ಸಾರಿದರು. ಕಾರ್ಗಿಲ್ ವಶಪಡಿಸಿಕೊಂಡು ಭಾರತದ ತಾಕತ್ತು ಏನೆಂಬುದು ತೋರಿಸಿಕೊಟ್ಟಿದ್ದಾರೆ. ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿ ನಡೆಸಿದಾಗಲೂ ಆ ರಾಷ್ಟ್ರದ ವಿರುದ್ಧ ವಾಯು ದಾಳಿ ನಡೆಸಲಾಯಿತು ಎಂದಾಗ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದರು.
ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿ ನಡೆದಾಗ ಯಾವ ಸರ್ಕಾರವಿತ್ತು? ನಿಮ ಮೋದಿ ಸರ್ಕಾರ ಅಲ್ಲವೇ ಎಂದು ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ಸದಸ್ಯರು ತರಾಟೆಗೆ ತೆಗೆದುಕೊಂಡರು.
