ಬೆಂಗಳೂರು,ಸೆ.19-ಕೆಪಿಎಸ್ಸಿ ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆಪತ್ರಿಕೆ ಲೀಕ್ ಹಾಗೂ ಕೋಟ್ಯಂತರ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ತನಿಖೆಯನ್ನು ತೀವ್ರಗೊಳಿಸಿದೆ. ವಿಚಾರಣೆಗೆ ಸರಿಯಾಗಿ ಸಹ ಕರಿಸದ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜು ಕನ್ನಾಳೆಯನ್ನು ಇ.ಡಿ ಅಧಿಕಾರಿಗಳು ಬಂಧಿಸಿ, ತಮ ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಇಡಿ ಅಧಿಕಾರಿಗಳು ಇಬ್ಬರೂ ಆರೋಪಿಗಳನ್ನು ಜೈಲಿನಲ್ಲೇ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಅಧಿಕಾರಿಗಳ ಪ್ರಶ್ನೆಗಳಿಗೆ ಸರಿಯಾಗಿ ಸ್ಪಂದಿಸದೆ ವಿಚಾರಣೆಗೆ ಅಸಹಕಾರ ತೋರಿದ ಹಿನ್ನೆಲೆಯಲ್ಲಿ, ಇಡಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿ, ತಡರಾತ್ರಿ ಇ.ಡಿ ಸ್ಪೆಷಲ್ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ ವಶಕ್ಕೆ ಪಡೆದು ಇಡಿ ಕಚೇರಿಯಲ್ಲಿ ಇಬ್ಬರ ವಿಚಾರಣೆ ನಡೆಸುತ್ತಿದ್ದಾರೆ.
ನೇಮಕಾತಿ ಹಗರಣದಲ್ಲಿ ಅಭ್ಯರ್ಥಿಗಳಿಂದ ಕೋಟ್ಯಾಂತರ ರೂಪಾಯಿ ಲಂಚ ವಸೂಲಿ ಮಾಡಿರುವ ಗಂಭೀರ ಆರೋಪ ಜ್ಞಾನೇಂದ್ರ ಕುಮಾರ್ ಮೇಲಿದೆ. ಈ ಅಕ್ರಮ ಹಣದಿಂದ ಜ್ಞಾನೇಂದ್ರ ಅವರು ತಮ ಗೆಳತಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಿ ನೀಡಿದ್ದರು. ಅಷ್ಟೇ ಅಲ್ಲದೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತಮ ಅಣ್ಣನ ಹೆಸರಿನಲ್ಲಿ ಐಷಾರಾಮಿ ವಿಲ್ಲಾ ಖರೀದಿಸಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
400 ಪಶುವೈದ್ಯಾಧಿಕಾರಿ ಹ್ದುೆಗಳ ನೇಮಕಾತಿ ತನಿಖೆ:
ಕೆಪಿಎಸ್ಸಿ 400 ಹ್ದುೆಗಳ ನೇಮಕಾತಿಗೆ ನಡೆಸಿದ ಈ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಅಭ್ಯರ್ಥಿಗಳಿಂದ ಹಣ ಪಡೆಯುವುದು ಹಾಗೂ ಉತ್ತರ ಪತ್ರಿಕೆಗಳಲ್ಲಿನ ಅಕ್ರಮಗಳ ಆರೋಪಗಳು ತನಿಖೆಯ ಕೇಂದ್ರಬಿಂದುವಾಗಿವೆ. ಗಂಗ್ವಾರ್ ಅವರು 2024ರಿಂದ ಮಾ. 2026ರವರೆಗೆ ಕೆಪಿಎಸ್ಸಿ ಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು.
ಸಿಐಡಿ ತನಿಖೆಯಲ್ಲಿ ಕೆಲವು ಅಭ್ಯರ್ಥಿಗಳು ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಾವತಿಸಿದ್ದರೆಂಬ ಆರೋಪಗಳು ಬೆಳಕಿಗೆ ಬಂದಿವೆ. ತನಿಖಾಧಿಕಾರಿಗಳ ಪ್ರಕಾರ, 24 ಅಭ್ಯರ್ಥಿಗಳಿಂದ 12 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗಿರಬಹುದು ಎಂಬ ಅಂಶವೂ ತನಿಖೆಯಲ್ಲಿ ಕಂಡುಬಂದಿದೆ. ಪ್ರಶ್ನೆಪತ್ರಿಕೆ ಪರೀಕ್ಷೆಗೆ ಮುನ್ನವೇ ಮಧ್ಯವರ್ತಿಗಳಿಗೆ ತಲುಪಿತ್ತು ಎಂಬ ಆರೋಪವೂ ಗೊತ್ತಾಗಿದೆ.
ಕನ್ನಾಳೆ ಮೂಲಕ ಹಣದ ವಹಿವಾಟಿನ ಆರೋಪ
ತನಿಖೆಯಲ್ಲಿ ಬಸವರಾಜ್ ಕನ್ನಾಳೆ ಪ್ರಮುಖ ಮಧ್ಯವರ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಕೆಲವು ಅಭ್ಯರ್ಥಿಗಳಿಂದ ಹಣವನ್ನು ಬ್ಯಾಂಕ್ ವರ್ಗಾವಣೆ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಪಡೆದಿರುವುದರ ಕುರಿತು ಸಿಐಡಿ ಮಾಹಿತಿ ಸಂಗ್ರಹಿಸಿದೆ. 12 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅಕ್ರಮ ಅನುಕೂಲ ಪಡೆಯಲು ಹಣ ಪಾವತಿಸಿರುವ ಬಗ್ಗೆ ತನಿಖೆಯಲ್ಲಿ ಸುಳಿವು ಸಿಕ್ಕಿದೆ ಎಂದು ವರದಿಯಾಗಿದೆ.
ಕೆಲವು ಅಭ್ಯರ್ಥಿಗಳಿಂದ ಪಡೆದ ಹಣದ ಒಂದು ಭಾಗವನ್ನು 52 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ವಜ್ರಾಭರಣ ಖರೀದಿಗೆ ಬಳಸಲಾಗಿದೆ ಎಂಬ ಆರೋಪವೂ ಇದೆ. ಹಣದ ವಹಿವಾಟು, ಬ್ಯಾಂಕ್ ದಾಖಲೆಗಳು, ಸಿಸಿ ಟಿವಿ ದಶ್ಯಗಳು ಮತ್ತು ಕರೆ ವಿವರಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
